ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ
Team Udayavani, Aug 9, 2019, 5:07 PM IST
ದೇವನಹಳ್ಳಿ: ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಉನ್ನತ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎಂದು ಮಾಜಿ ಶಾಸಕ ಪಿಳ್ಳ ಮುನಿಶ್ಯಾಮಪ್ಪ ತಿಳಿಸಿದರು.
ನಗರದ ಗಿರಿಯಮ್ಮ ವೃತ್ತದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅರುಂಧತಿ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 7ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದು ಸಂಪೂರ್ಣ ಸ್ಪರ್ಧಾತ್ಮಕ ಜಗತ್ತು. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅವಶ್ಯವಿದೆ. ಅಲ್ಲದೆ ಈಗಷ್ಟೇ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯ ಅವಶ್ಯವಿದೆ. ಅಲ್ಲದೆ ಪ್ರತಿಭಾ ಪುರಸ್ಕಾರವನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಗೆ ನೀಡುತ್ತಿರುವುದು ಮಾದರಿಯಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಕೆ.ಸಿ. ಮಂಜುನಾಥ್ ಮಾತನಾಡಿ, ಪೋಷಕರು ಹಾಗೂ ಶಿಕ್ಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಹೆಚ್ಚಿನ ಶ್ರಮವಹಿಸಬೇಕು. ಕಳೆದ 7 ವರ್ಷಗಳಿಂದ ಇಲ್ಲಿಯ ವರೆಗೆ 1300 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಎಲ್ಲಾ ಜಾತಿ ಜನಾಂಗದ ಮಕ್ಕಳಿಗೆ ನೀಡಿದ್ದಾರೆ. ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ವಿದ್ದು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಅರುಂಧತಿ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಂ. ವೇಣುಗೋಪಾಲ್ ಮಾತನಾಡಿದರು. ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷ ಸಿ ಮುನಿಕೃಷ್ಣಪ್ಪ ಪುರದ ಅಧ್ಯಕ್ಷತೆ ವಹಿಸಿದ್ದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಹೊಸಕೋಟೆ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಚ್.ಎಂ.ಸುಬ್ಬರಾಜು, ಮೈಸೂರು ಅಚ್ಚು ಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಭೂ ಅಭಿವೃದ್ಧಿ ಅಧಿಕಾರಿ ಡಾ.ಎಂ.ತಿರುಮಲೇಶ್, ಶಿಡ್ಲಘಟ್ಟ ಹಿರಿಯ ಉಪ ನೋಂದಣಾಧಿಕಾರಿ ಎಂ. ಪ್ರಸಾದ್ ಕುಮಾರ್, ವಿಜಯಪುರ ಪುರಸಭೆ ಸದಸ್ಯ ಬಲಮುರಿ ಶ್ರೀನಿವಾಸ್, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಮುನಿರಾಜು, ರಾಜ್ಯ ಕರ್ನಾಟಕ ವಹ್ನಿಕುಲ ತಿಗಳ ಕ್ಷತ್ರೀಯ ಸಂಘದ ಉಪಾದ್ಯಕ್ಷ ರಾಮಚಂದ್ರಪ್ಪ, ಗ್ರಾಪಂ ಸದಸ್ಯ ಎಂ ಶ್ರಿನಿವಾಸ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಎಂ.ವೆಂಕಟೇಶ್ ಮೂರ್ತಿ, ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಸಿ.ಚಂದ್ರಪ್ಪ, ಮಾಜಿ ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ, ಅರುಂಧತಿ ಸೇವಾ ಸಂಸ್ಥೆಯ ಕಾರ್ಯಾಧ್ಯಕ್ಷ ಜಾಲಿಗೆ ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್, ಖಜಾಂಚಿ ಎಸ್.ಎಂ.ಆನಂದ್ಕುಮಾರ್, ಉಪಾಧ್ಯಕ್ಷ ಹರ್ಷನಾಥ್, ಸಹಕಾರ್ಯದರ್ಶಿ ಮುನಿರಾಜು (ರಾಜು), ನಿರ್ದೇಶಕರಾದ ಕೆ ಮಂಜುನಾಥ್, ಎನ್ ವೆಂಕಟಪ್ಪ, ಡಿ ಮುನಿಕೃಷ್ಣಪ್ಪ, ನಾಗೇಶ್, ವಿ ಮುನಿರಾಜು, ಶ್ರೀನಿವಾಸ್, ಅಮರನಾರಾಯಣಪ್ಪ, ನಾಗರಾಜು, ಇದ್ದರು.