ಅನುದಾನಕ್ಕಾಗಿ ಸಂಬಂಧಪಟ್ಟ ಸಚಿವರಿಗೆ ಶಾಸಕರು ಮನವಿ
Team Udayavani, Mar 6, 2021, 1:46 PM IST
ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಯಡಿಯೂರಪ್ಪಮಾ.8ರಂದು ಮಂಡಿಸುತ್ತಿರುವ ಬಜೆಟ್ನಲ್ಲಿ ತಾಲೂಕಿನ ಜನತೆ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕ್ಷೇತ್ರದ ಶಾಸಕರು ಸಂಬಂಧಪಟ್ಟ ಸಚಿವರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದು, ಆದರೆ, ಕಾಂಗ್ರೆಸ್ ಶಾಸಕರು ಮಾಡಿರುವ ಮನವಿಗೆ ಪುರಸ್ಕಾರ ದೊರೆಯಲಿದೆಯೇ ಎನ್ನುವ ಕುತೂಹಲ ಸಹಜವಾಗಿದೆ.
ಕಳೆದ ಸಾಲಿನಲ್ಲಿಯೂ ತಾಲೂಕಿನ ಜನರ ಪ್ರಮುಖ ಬೇಡಿಕೆಯಾದ ಜಿಲ್ಲಾಸ್ಪತ್ರೆಗೆ ಇನ್ನೂ ಸಂಪುಟ ಸಭೆಯಲ್ಲಿ ಮಂಜೂರಾತಿ ದೊರೆತಿಲ್ಲ. ನೇಕಾರರಿಗೆ ನೆರವು, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಕೆ, ನಗರದಲ್ಲಿ ರಸ್ತೆ ಅಗಲೀಕರಣ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ವೈದ್ಯಕೀಯ ಮಹಾವಿದ್ಯಾಲಯ, ತಾಂತ್ರಿಕ ವಿವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳು ತಾಲೂಕಿಗೆ ಅವಶ್ಯವಿದೆ.
ಬಜೆಟ್ ನಲ್ಲಿ ಅನುದಾನ ಮೀಸಲಿಡಲು ಕೋರಿಕೆ: ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ 50 ಕೋಟಿ ರೂ. ಮೀಸಲು, ದೊಡ್ಡಬಳ್ಳಾಪುರ ನಗರದ 31 ವಾರ್ಡ್ ಗಳಿಗೆ ಕುಡಿಯುವ ನೀರು ಒದಗಿಸಲು ಕಾವೇರಿ ನೀರು ಸಂಪರ್ಕ ಕಲ್ಪಿಸುವುದು, ತಾಲೂಕಿಗೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ತಾಂತ್ರಿಕ ಮಹಾ ವಿದ್ಯಾಲಯ, ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 1 ಎಕರೆ ಜಮೀನು ಮಂಜೂರು ಮಾಡುವುದು. ಹುಲುಕುಡಿ ವೀರಭದ್ರಸ್ವಾಮಿ ದೇವಾಲಯ ಪ್ರವಾಸಿ ತಾಣವಾಗಿ ಅಭಿವೃದ್ಧಿ, ದೊಡ್ಡಬಳ್ಳಾಪುರ 31 ವಾರ್ಡ್ ಗಳಿಗೆ ಕುಡಿಯುವ ನೀರು ಒದಗಿಸಲು ಕಾವೇರಿ ನೀರು ಸಂಪರ್ಕ ಕಲ್ಪಿಸುವುದು. ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಹಾಗೂ ಪರಿಹಾರಕ್ಕಾಗಿ 50 ಕೋಟಿ ರೂ ಮಂಜೂರು ಮಾಡುವಂತೆ ಶಾಸಕ ಟಿ. ವೆಂಕಟರ ಮಣಯ್ಯ ಮನವಿ ಮಾಡಿದ್ದಾರೆ.
80 ಹಳ್ಳಿಗಳಲ್ಲಿ ಕುಡಿಯುವ ನೀರು ಮೂಲ ಸೌಕರ್ಯಕ್ಕಾಗಿ 60 ಕೋಟಿ ರೂ. ಮಂಜೂರು ಮಾಡುವುದು. ಕೆರೆಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ನಗರದಲ್ಲಿ 5 ಸಾವಿರ ಮನೆಗಳ ನಿರ್ಮಾಣ, ಎಪಿಎಂಸಿ ಮೂಲ ಸೌಕರ್ಯಕ್ಕೆ 25 ಕೋಟಿ ರೂ. ಅನುದಾನ, ದೊಡ್ಡಬೆಳವಂಗಲ ಮತ್ತು ಮಧುರೆ ಹೋಬಳಿಗಳಲ್ಲಿ ಕ್ರೀಡಾಂಗಣ, ಭಗತ್ಸಿಂಗ್ ಕ್ರೀಡಾಂಗಣ, ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ, ಬೆಂಗಳೂರು ದೊಡ್ಡಬಳ್ಳಾಪುರ ನಡುವೆ ಉಪನಗರ ರೈಲು ಸಂಚಾರಕ್ಕೆ ಮನವಿ ಮಾಡಿದ್ದಾರೆ.
ನೇಕಾರರ ವಿವಿಧ ಬೇಡಿಕೆಗಳು :
ಕೋವಿಡ್ ಸಂಕಷ್ಟದಿಂದ ಇನ್ನೂ ನೇಕಾರರು ಚೇತರಿಸಿಕೊಳ್ಳುತ್ತಿದ್ದಾರೆ. ನೇಕಾರಿಕೆಯೇ ಪ್ರಧಾನವಾಗಿರುವ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿರುವ ಹೆದ್ದಾರಿ ಬದಿಯಲ್ಲಿ ನಗರದ ನೇಕಾರರು ನೇಯ್ದಿರುವ ಸೀರೆಗಳ ಮಾರಾಟಕ್ಕೆ ಬೃಹತ್ ವಾಣಿಜ್ಯ ಮಳಿಗೆಯನ್ನು ನಿರ್ಮಿಸಬೇಕು. ನೇಕಾರರಿಗೆ ನೆರವಾಗಲು ಕುರಿತು ಜಿಎಸ್ಟಿಯಿಂದ ನೇಕಾರಿಕೆಯನ್ನು ಹೊರಗಿಡುವುದು ಅಥವಾ ರಿಯಾಯಿತಿ ನೀಡುವುದು. ನೇ ಕಾ ರರ ಭ ವನ ನಿರ್ಮಾಣ, ನೇಕಾರರಿಗೆ ಬಂಡವಾಳ ದೊರ ಕಿಸಿ ಕೊಡಲು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ, ಕೈ ಮಗ್ಗ, ವಿದ್ಯುತ್ ಮಗ್ಗ ಗಳ
ಇಲಾಖೆಗಳಿಗೆ ಹೆ ಚ್ಚಿನ ಅನುದಾನ, ರೇಷ್ಮೆ ಬೆಳೆಗೆ ಉತ್ತೇಜನ ನೀಡಿ ನೇಕಾರರಿಗೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸಿಗುವಂತೆ ಮಾಡುವುದು. ಕಚ್ಚಾ ಸಾಮಗ್ರಿಗಳಿಗೆ ಸಹಾಯ ಧನ, ಜವಳಿ ಹಾಗೂ ಸಿದ್ಧ ಉಡುಪು ವಲಯದ ಅಭಿವೃದ್ಧಿಗಾಗಿ ಹೊಸ ಜವಳಿ ನೀತಿಗಾಗಿ ಬಜೆಟ್ ನಲ್ಲಿ ಮೀಸಲಿಡುವಂತೆ ನೇಕಾರರು ಒತ್ತಾಯಿಸಿದ್ದಾರೆ
ಜಿಲ್ಲಾಸ್ಪತ್ರೆ, ರಸ್ತೆ ಅಭಿವೃದ್ಧಿ, ಉನ್ನತ ಶಿಕ್ಷಣಕ್ಕೆ ನೆರವು ಮೊದಲಾಗಿ ಬಜೆಟ್ನಲ್ಲಿ ತಾಲೂಕಿಗೆ ಮಂಜೂರು ಮಾಡುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗಿದ್ದು, ತಾಲೂಕಿಗೆ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ. – ಟಿ.ವೆಂಕಟರಮಣಯ್ಯ, ಶಾಸಕ
– ಡಿ.ಶ್ರೀಕಾಂತ