ನೆಲಮಂಗಲ: ಶೂನಲ್ಲಿದ್ದ ನಾಗರ ಹಾವಿನ ಮರಿ ರಕ್ಷಣೆ
Team Udayavani, Jul 13, 2020, 10:23 AM IST
ನೆಲಮಂಗಲ: ಮನೆ ಎದುರು ಬಿಟ್ಟಿದ್ದ ಶೂನಲ್ಲಿ ಸೇರಿಕೊಂಡಿದ್ದ ನಾಗರ ಹಾವಿನ ಮರಿಯನ್ನು ರಕ್ಷಿಸಿದ ಸ್ನೇಕ್ ಲೋಕೇಶ್, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಆದರೆ ಶೂ ಧರಿಸಲು ಸಿದ್ಧವಾಗಿದ್ದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ತಾಲೂಕಿನ ಅರಿಶಿನಕುಂಟೆ ಗ್ರಾಮದ ಗೋವಿಂದರಾಜು ಎಂಬುವವರ ಮನೆ ಹೊರಭಾಗದಲ್ಲಿ ಬಿಡಲಾಗಿದ್ದ, ಶೂನಲ್ಲಿ 15 ದಿನದ ನಾಗರಹಾವಿನ ಮರಿ ಸೇರಿಕೊಂಡಿತ್ತು. ಬಾಲಕಿ ಶೂ ಧರಿಸಲು ಹೋದಾಗ ಹಾವು ಕಂಡು ಬೆಚ್ಚಿಬಿದ್ದ ಮನೆಯ ಸದಸ್ಯರು, ತಕ್ಷಣ ಉರಗ ರಕ್ಷಕನಿಗೆ ಕರೆ ಮಾಡಿ ಸೆರೆ ಹಿಡಿದು, ರಕ್ಷಣೆ ಮಾಡಿದ್ದಾರೆ.
ಎಚ್ಚರಿಕೆ: ಹಾವುಗಳು ಮಾರ್ಚ್ನಲ್ಲಿ ಮೊಟ್ಟೆಯನ್ನಿಟ್ಟು ಜೂನ್, ಜುಲೈನಲ್ಲಿ ಮರಿಗಳಾಗುತ್ತವೆ. ಹಾವಿನ ಮರಿಗಳು ಶೂ, ಚಪ್ಪಲಿಗಳು, ಸಾಕ್ಸ್ ಹಾಗೂ ಮನೆಯ ಹೊರಭಾಗದ ವಸ್ತುಗಳಲ್ಲಿ ಸೇರಿಗೊಳ್ಳುತ್ತವೆ. ಸಾಯುವ ಭಯದಲ್ಲಿ ಮನುಷ್ಯನಿಗೆ ಕಚ್ಚುತ್ತವೆ. ಹೀಗಾಗಿ ಎಚ್ಚರಿಕೆ ವಹಿಸಿ ಪರಿಶೀಲನೆ ಮಾಡಿ, ಶೂಗಳನ್ನು ಧರಿಸುವುದು ಒಳ್ಳೆಯದು ಎಂದು ಉರಗ ತಜ್ಞ ಲೋಕೇಶ್ ತಿಳಿಸಿದರು.