ಜೆನರಿಕ್ ಔಷಧಿಗೆ ಬದಲಿಗೆ ಇತರೆ ಔಷಧಿ ಮಾರಾಟ : ನೋಟಿಸ್
Team Udayavani, Nov 20, 2017, 1:09 PM IST
ದೊಡ್ಡಬಳ್ಳಾಪುರ: ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಒಳಗೆ ಸರ್ಕಾರದಿಂದ ಪರವಾನಗಿ ಪಡೆದು ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗಿದ್ದ ಜೆನರಿಕ್ ಔಷಧಿಗೆ ಬದಲಾಗಿ ಇತರೆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ ಲೋಕೇಶ್ ಎಂಬುವರಿಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಶ್ ನೊಟೀಸ್ ಜಾರಿಗೊಳಿಸಿದ್ದಾರೆ. ಜೆನರಿಕ್ ಔಷಧಿ ಮಾರಾಟ ಮಾಡಬೇಕಿದ್ದ ಆಸ್ಪತ್ರೆಯಲ್ಲಿನ ಮಳಿಗೆಯಲ್ಲಿ ಅನಧಿಕೃತವಾಗಿ ಔಷಧಿ ಮಳಿಗೆ ತೆರೆದು 180ಕ್ಕೂ ಹೆಚ್ಚಿನ ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಔಷಧಿಗಳ ಸಮೇತ ಇಡಿದು ಆಸ್ಪತ್ರೆ ಆಡಳಿತಾಧಿಕಾರಿಗೆ ದೂರು ನೀಡಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಬಿ.ಎಸ್. ಚಂದ್ರಶೇಖರ್, ಬಡವರಿಗೆ ರಿಯಾಯ್ತಿ ದರದಲ್ಲಿ ಔಷಧಿಗಳು ದೊರೆಯಲಿ ಎನ್ನುವ ಉದ್ದೇಶದಿಂದ ಆಸ್ಪತ್ರೆ ಒಳಭಾಗದಲ್ಲಿ ಮಳಿಗೆ ತೆರೆಯಲಾಗಿದೆ. ಆದರೆ, ಖಾಸಗಿ ಔಷಧಿ ಮಳಿಗೆಯವರು ತಮ್ಮ ಔಷಧಿಗಳನ್ನು ಅನಧಿಕೃತವಾಗಿ ಇದೇ ಮಳಿಗೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಆಸ್ಪತ್ರೆಯಲ್ಲಿನ ಕೆಲ ಪ್ರಭಾವಿ ಸಿಬ್ಬಂದಿ ಶಾಮೀಲಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಅನಧಿಕೃತವಾಗಿ ಔಷಧಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.