ಪೇಜಾವರ ಶ್ರೀಗಳ ಬೆಂಗಾವಲು ವಾಹನ ಅಪಘಾತ ; ಇಬ್ಬರ ದುರ್ಮರಣ
Team Udayavani, Nov 18, 2018, 11:41 AM IST
ಹೊಸಕೋಟೆ: ತಾಲೂಕಿನ ಕರಪನಹಳ್ಳಿ ಗೇಟ್ ಬಳಿ ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಢಿಕ್ಕಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಚಿಂತಾಮಣಿ ಮೂಲದ ರಾಮಕೃಷ್ಣಯ್ಯ(75) ಮತ್ತು ಸರ್ವಲೋಚನಾ(70) ಎನ್ನುವರು ಮೃತ ದುರ್ದೈವಿಗಳು. ಸೊಸೆ ನಳಿನಿ ಮತ್ತು ಕಾರು ಚಾಲಕ ನಾಗೇಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿನ್ನಾಭರಣ ಮಳಿಗೆಯ ಮಾಲೀಕರಾಗಿದ್ದ ರಾಮಕೃಷ್ಣ ಅವರು ಕುಟುಂಬ ಸದಸ್ಯರ ಜೊತೆ ಬೆಂಗಳೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಪೇಜಾವರ ಶ್ರೀಗಳ ಕಾರಿನ ಭದ್ರತೆಗಾಗಿ ಹಿಂಬಾಲಿಸುತ್ತಿದ್ದ ಹೈವೇ ಪ್ಯಾಟ್ರೋಲಿಂಗ್ ವಾಹನ ಇಂಡಿಗೋ ಕಾರಿಗೆ ಢಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.
ಘಟನೆ ಬಗ್ಗೆ ಪೇಜಾವರ ಶ್ರೀಗಳು ತೀವ್ರ ದುಃಖ ವ್ಯಕ್ತಪಡಿಸಿ ಇದೊಂದು ದುರಂತ ಎಂದಿದ್ದಾರೆ.
ಬೆಂಗಾವಲು ಪಡೆ ವಾಹನದಲ್ಲಿದ್ದ ಇಬ್ಬರು ಸಿಬಂದಿಗಳೂ ಗಂಭೀರವಾಗಿ ಗಾಯೊಂಡಿದ್ದಾರೆ.
ನಂದಗುಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.