ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಿ: ಸಿದ್ಧಲಿಂಗ ಶ್ರೀ
Team Udayavani, Oct 21, 2019, 3:00 AM IST
ದೇವನಹಳ್ಳಿ: ಸಮಾಜದಿಂದ ಪಡೆದ ಜ್ಞಾನವನ್ನು ಸಮಾಜ ಸೇವೆಗೆ ಮೀಸಲಿಡುವುದು ಬೆಳವಣಿಗೆ ದಿಕ್ಸೂಚಿ ಎಂದು ಸಿದ್ಧಗಂಗಾ ಕ್ಷೇತ್ರಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಡಾ.ಶಿವಕುಮಾರ ಮಹಾ ಸ್ವಾಮೀಜಿ ಅವರ ಕಂಚಿನ ಪುತ್ಥಳಿಯ ಶಿಲಾನ್ಯಾಸ, ನವೀಕೃತ ಶಾಲಾ ಕೊಠಡಿಗಳ ಲೋಕಾರ್ಪಣೆ, ನೂತನ 8 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಶಾಲೆ ಮೂಲವಾಗಿರುವುದರಿಂದ ಶಿಕ್ಷಣದೊಂದಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಅಗತ್ಯ ಇದ್ದು, ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ, ದೇಶ ಪ್ರೇಮ, ಗುರು ಹಿರಿಯರಲ್ಲಿ ಗೌರವ ಭಾವನೆ ಬೆಳೆಸಬೇಕು ಎಂದರು.
ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದಾಗಿ ಗ್ರಾಮೀಣಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಶಾಲೆಯಲ್ಲಿ ದಾಖಲಾತಿ ಕುಸಿಯುತ್ತಿದ್ದು, ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲು ಚಿಂತಿಸಲಾಗುವುದು ಎಂದರು.
ನ್ಯಾಶನಲ್ಅಕಾಡೆಮಿ ಆಫ್ ಕಸ್ಟಮ್ಸ್ ನಾರ್ಕಟಿಕ್ಸ್ (ನಾಸಿನ್)ನ ನಿವೃತ್ತ ಪ್ರಾಂಶುಪಾಲ ಕೋದಂಡರಾಮಯ್ಯ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ಸಮಾಜದ ಒಳಿತಿಗಾಗಿ ಗಳಿಸಿದ ಸ್ವಲ್ಪ ಭಾಗವನ್ನು ಸಮಾಜದ ಒಳಿತಿಗೆ ವಿನಿಯೋಗಿಸಬೇಕು. ತಂದೆ, ತಾಯಿ, ಗುರುವಿನಿಂದ ಮಗುವಿಗೆ ವ್ಯಕ್ತಿತ್ವ ರೂಪುಗೊಳ್ಳಬಲ್ಲದು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿ, ಶಿಕ್ಷಣದ ಜೊತೆಗೆ ಮೂಲ ಶಿಕ್ಷಣವನ್ನು ಮಕ್ಕಳಿಗೆ ಬೆಳವಣಿಗೆಯ ದಿಸೆಯಲ್ಲಿ ಕೊಡಿಸಬೇಕು. ಸಾಮಾನ್ಯ ವಿಜ್ಞಾನ ಶಾಖೆಗಳಿಗೆ ಮಕ್ಕಳನ್ನು ಪ್ರೇರೇಪಿಸುವ ಕಾರ್ಯವಾಗಬೇಕು. ಶೆ„ಕ್ಷಣಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರವು ಮಹತ್ವ ಎಂದರು.
ಅದ್ಧೂರಿ ಸ್ವಾಗತ: ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ಅವರನ್ನು ಕುಂಭ ಕಳಸಗಳನ್ನು ಹೊತ್ತ ವಿದ್ಯಾರ್ಥಿನಿಯರ ತಂಡ ಗ್ರಾಮದ ಮುಖ್ಯ ರಸ್ತೆಯಿಂದ ಶಾಲಾ ಆವರಣದವರೆಗೆ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆ ವೈದ್ಯ ಡಾ.ಎಚ್.ಕೆ.ನಾಗರಾಜು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ವಿಶ್ವನಾಥಯ್ಯ, ಎಚ್.ಎಸ್.ಬಸವರಾಜು, ಎನ್.ವಿಶ್ವನಾಥ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ, ವಿದ್ಯಾರ್ಥಿ ಹೋರಾಟಗಾರ್ತಿ ಶಾಂತಾ, ಸಣ್ಣಕೈಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಬೈರೇಗೌಡ, ಶಿವಣ್ಣ,
ಎಚ್.ಎನ್.ರಾಜಣ್ಣ, ಪ್ರಭಾಕರ್, ತಾಪಂ ಅಧ್ಯಕ್ಷೆ ಚೈತ್ರಾ, ತಾಪಂ ಸದಸ್ಯೆ ಭಾರತಿ ಲಕ್ಷ್ಮಣಗೌಡ, ತಾಪಂ ಮಾಜಿ ಸದಸ್ಯ ಲಕ್ಷಣಗೌಡ ,ಜಿಲ್ಲಾ ಎಸ್ಸಿ ಕಾಂಗ್ರೆಸ್ ಅಧ್ಯಕ್ಷ ಚೌಡಪ್ಪನಹಳ್ಳಿ ಎಂ.ಲೋಕೇಶ್, ಮುಖ್ಯ ಶಿಕ್ಷಕ ಪಂಕಜಾ, ಗ್ರಾಪಂ ಸದಸ್ಯ ನಟರಾಜ್, ಶಂಶದ್ ಬೆಗಂ ಅತಾವುಲ್ಲಾ, ಎಪಿಸಿಎಸ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೋದಂಡರಾಮಯ್ಯ, ವಿಶ್ವನಾಥಯ್ಯ, ಪ್ರಭಾಕರ್, ಹರೀಶ್, ರಾಮ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.