ಮಳಿಗೆ ಹರಾಜು ಪ್ರಕ್ರಿಯೆ ಮುಂದೂಡಿಕೆ
Team Udayavani, Jun 27, 2020, 6:17 AM IST
ವಿಜಯಪುರ: ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಪುರಸಭೆ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳಿಂದಾಗಿ ಮುಂದೂಡಲಾಯಿತು. ಹರಾಜಾಗದೇ ಹಲವು ತಿಂಗಳುಗಳಿಂದ ಉಳಿದಿದ್ದ ಮಳಿಗೆಗಳನ್ನು ಆಡಳಿತಾಧಿಕಾರಿ ಅನುಮೋದನೆ ಮೇರೆಗೆ ಬಹಿರಂಗ ಹರಾಜು ನಡೆಸಲು ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.
ಠೇವಣಿಯ ಡಿ.ಡಿ ಯೊಂದಿಗೆ ಜನ ಮಧ್ಯಾಹ್ನದವೆರೆಗೂ ಕಾದರೂ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿಲ್ಲ. ಅಂಗಡಿಗಳಲ್ಲಿರುವವರು ಟೆಂಡರ್ ಬಾಕ್ಸ್ಗೆ ಅರ್ಜಿ ಹಾಕಿದ್ದಾರೆ. ನಾವು ಕೂಗಿದ ಮೊತ್ತಕ್ಕಿಂತ ಶೇ.5 ರಷ್ಟು ಹೆಚ್ಚುವರಿ ಹಣವನ್ನು ಅಂಗಡಿಗಳಲ್ಲಿ ಇರುವವರಿಂದ ಪಡೆದು ಪುನಃ ಅವರಿಗೆ ಮಳಿಗೆ ನೀಡಲಾಗುತ್ತದೆ. ಒಂದು ವೇಳೆ ಅವರು ಅರ್ಜಿ ಸಲ್ಲಿಸದಿದ್ದಲ್ಲಿ ಮಾತ್ರವೇ ಬೇರೆಯವರು ಅಂಗಡಿ ಪಡೆಯಲು ಅರ್ಹರಾಗುತ್ತಾರೆ ಎನ್ನುವ ಷರತ್ತು ಸರ್ಕಾರದ ಸುತ್ತೋಲೆಯಲ್ಲಿದೆ.
ಆಗಿದ್ದರೆ ನಾವು ಯಾಕೆ ಹರಾಜಿನಲ್ಲಿ ಭಾಗವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಕೆಲವರು ಮಾತಿನ ಚಕಮಕಿ ನಡೆಸಿದರು. ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತ ನಾಡಿ, ಈ ಮೊದಲು ಯಾರು ಅಂಗಡಿಗಳಲ್ಲಿದ್ದಾರೋ ಅವರು ಮುಂದುವರಿಯಲು ಇಚ್ಛಿಸಿದರೆ ಅವರಿಂದ ಹರಾಜಿನ ಮೊತ್ತಕಿಂತ ಶೇ.5 ಹೆಚ್ಚುವರಿ ಹಣ ಕಟ್ಟಿಸಿ ಕೊಂಡು ನೀಡಲಾಗುತ್ತದೆ. ಅವರು ಹಣ ಪಾವತಿಸದಿದ್ದರೆ ಅಥವಾ ಅರ್ಜಿ ಸಲ್ಲಿಸದೇ ಇರುವ ಅಂಗಡಿಗಳು ಬಹಿರಂಗ ಹರಾಜು ಮೂಲಕ ಬೇರೆಯವರು ತೆಗೆದುಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದರು.
ಹರಾಜಿನಲ್ಲಿ ಪಾಲ್ಗೊಳ್ಳಲು ಸಲ್ಲಿಸಿದ್ದ ಡಿ.ಡಿಗಳನ್ನು ಕೆಲವರು ವಾಪಸ್ ಪಡೆದರು. ಮತ್ತೆ ಕೆಲವರು ಹರಾಜು ನಡೆಸಬೇಕು ಎಂದು ಪಟ್ಟುಹಿಡಿದಿ ದ್ದರು. ಪ್ರಸ್ತುತ ಇರುವ ಅಂಗಡಿಗಳ ಮಾಲೀಕರನ್ನು ಮುಂದುವರಿಸುವ ವಿಚಾರದಲ್ಲಿ ಸ್ಪಷ್ಟ ಚಿತ್ರಣ ಸಿಗದಿದ್ದ ರಿಂದ ಬಹಿರಂಗ ಹರಾಜು ಮುಂದೂಡಲಾಗಿದೆ ಎಂದು ಮುಖ್ಯಾಧಿಕಾರಿ ಘೋಷಿಸಿದರು.