ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಿ
Team Udayavani, Aug 12, 2020, 10:14 AM IST
ದೊಡ್ಡಬಳ್ಳಾಪುರ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ, ಕಾರ್ಪೋರೇಟ್ ಕಂಪನಿಗೆಳೇ ಕೃಷಿ ಬಿಟ್ಟು ತೊಲಗಿ ಎನ್ನುವ ಘೋಷಣೆಯಡಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಸತೀಶ್ ಮಾತನಾಡಿ, ಅಂದು ದೇಶ ಸ್ವಾತಂತ್ರ್ಯ ಗಳಿಸಲು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿ ನಡೆಸಬೇಕಾಯಿತು. ಆದರೆ, ಈಗ ರೈತರು ಕಾರ್ಪೋರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಎಂದು ಪ್ರತಿಭಟನೆ ನಡೆಸಬೇಕಾಗಿ ಬಂದಿರುವುದು ವಿಪರ್ಯಾಸ. ನಗರಸಭೆ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಮೂನೆ 50ರಡಿ ಅನುಭವದಲ್ಲಿರುವ ಕೃಷಿ ಭೂಮಿಯನ್ನು ಹರಾಜು ಮಾಡಲಾಗುತ್ತಿದ್ದು ಇದೂ ಉಳ್ಳವರ ಪಾಲಾಗಲಿದೆ ಎಂದು ದೂರಿದರು.
ಹೊಸ ಎಪಿಎಂಸಿ ಕಾಯ್ದೆಯಿಂದ ರೈತರ ಕೈತಪ್ಪಿ ಬಂಡವಾಳ ಶಾಹಿಗಳ ಹಿಡತಕ್ಕೆ ಹೋಗುತ್ತದೆ. ಅಂತೆಯೇ ಭೂಸುಧಾರಣಾ ಕಾಯ್ದೆ 2013ಯೂ ರೈತರಿಂದ ಭೂಮಿ ಕಸಿದುಕೊಂಡು ಉಳ್ಳವರ ಪಾಲಾಗುತ್ತದೆ. ವಿದ್ಯುತ್ ಕ್ಷೇತ್ರವನ್ನೂ ಖಾಸಗೀರಣ ಮಾಡಲಾಗುತ್ತಿದ್ದು ಕೇಂದ್ರ ಸರ್ಕಾರ ಇಡೀ ದೇಶವನ್ನೇ ಖಾಸಗೀಕರಣ ಮಾಡಲು ಹೊರಟು ಜನರನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎಂದು ದೂರಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷ ಹನುಮೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಎಸ್.ಸತೀಶ್, ತಾಲೂಕು ಕಾರ್ಯದರ್ಶಿ ಶಿವರಾಜ್, ತೂಬಗೆರೆ ಹೋಬಳಿ ಅಧ್ಯಕ್ಷ ಮುನಿ ನಾರಾಯಣಪ್ಪ, ಮುಖಂಡರಾದ ರವಿ, ಬೈರೇಗೌಡ, ಹನುಮಂತ ರಾಯಪ್ಪ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಮತ್ತಿತರರಿದ್ದರು