ಅಕಾಲಿಕ ಮಳೆಗೆ ಸಿಲುಕಿದ ಅನ್ನದಾತನ ಕಣ್ಣಿರು
Team Udayavani, Nov 16, 2021, 1:40 PM IST
ಆನೇಕಲ್: ಕಳೆದ4-5 ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೋಡ ಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದರೆ, ತರಕಾರಿ ಹೂವಿನ ಬೆಳೆಗೂ ಅಕಾಲಿಕ ಮಳೆ ಹೊಡೆತ ನೀಡಿದೆ. ಈ ಮೂಲಕ ಅನ್ನದಾತನ ಬದುಕು ಸಂಕಷ್ಟಕ್ಕೆ ಸಿಲುಗಿದೆ.
ಕಟಾವು ಹಂತದಲ್ಲಿತ್ತು: ಮಳೆ ಇದೇ ರೀತಿ ಇನ್ನೂ ಒಂದು ವಾರ ಮುಂದುವರಿದರೆ ರೈತ ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕ ಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ 6060 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಸೂಕ್ತ ಸಮಯಕ್ಕೆ ಸರಿಯಾಗಿ ಮಳೆ ಬಂದಿದ್ದರಿಂದ ರಾಗಿ ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿತ್ತು. ಇನ್ನೇನು ಒಂದು ತಿಂಗಳಲ್ಲಿ ರಾಗಿ ತೆನೆಕಟಾವು ಮಾಡುವು ಹಂತದಲ್ಲಿತ್ತು. ಅಷ್ಟರಲ್ಲಿ ಕಳೆದ 4-5 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಗಿ ತೆನೆ ನೆಲ ಕಚ್ಚಿದೆ.
ಮಳೆ ಮುಂದುವರಿದರೆ ನಷ್ಟ: ಒಂದಷ್ಟು ಕಡೆ ರಾಗಿ ಹೊಲ ಮಳೆ ನೀರಿನಲ್ಲಿ ಮುಳುಗಿದೆ.
ಮಳೆ ನಿಲ್ಲಲಿ: ತಾಲೂಕಿನ ಹಳೇಹಳ್ಳಿ, ಮುಗಳೂರು, ಸುಣವಾರ, ವಣಕನಹಳ್ಳಿ, ಸಮಂದೂರು ಭಾಗಗಲ್ಲಿ ರಾಗಿ ತೊಗರಿ, ಹಲಸಂದೆ ಟೊಮೇಟೋ ಬೆಳೆ ಮಳೆಯಿಂದ ಹಾನಿಯಾಗಿದೆ. ಅದರಲ್ಲೂ ಪ್ರಮುಖ ಬೆಳೆಯಾದ ರಾಗಿ ತೆನೆ ನೆಲ ಕಚ್ಚಿದೆ. ಸದ್ಯ ಮಳೆ ನಿಂತು ಬಿಸಿಲು ಬಂದರಷ್ಟೇ ರೈತನಿಗೆ ರಾಗಿ ಫಸಲು ಕೈ ಸೇರಲಿದೆ. ಇಲ್ಲದಿದ್ದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ.
ರಾಗಿ ಬೆಳೆಗೆ ಈಗಿನ ಮಳೆ ಮಾರಕವಾಗಿದೆ: ಲತಾ:
ಈಗ, ಸುರಿಯುತ್ತಿರುವ ಮಳೆ ಸದ್ಯದ ಬೇಸಾಯಕ್ಕೆ ಮಾರಕವಾಗಿದೆ.ಈ ರೀತಿ ಸುರಿಯುವ ಮಳೆ ಯಾವುದೇ ಬೆಳೆಗೂಸೂಕ್ತವಲ್ಲ.ಅದರಲ್ಲೂ ಮಳೆಯಾಶ್ರಿತಬೆಳೆಗೆ ಸದ್ಯದ ವಾತಾವರಣಮಾರಕವಾಗಲಿದೆ ಎಂದು ತಾಲೂಕು ಕೃಷಿ ಇಲಾಖೆ ತಾಂತ್ರಿಕಅಧಿಕಾರಿ ಸಿ.ಲತಾ ತಿಳಿಸಿದ್ದಾರೆ.
ತಾಲೂಕಿನಲ್ಲಿಈಸಾಲಿನಲ್ಲಿ 6060ಹೆಕ್ಟೇರ್ ನಲ್ಲಿ ರಾಗಿಬಿತ್ತನೆ ಮಾಡಿದ್ದರು. ಮಳೆಯಿಂದಾಗಿ ಸುಮಾರು 350ಹೆಕ್ಟೇರ್ನಲ್ಲಿನ ರಾಗಿ ತೆನೆ ನೆಲಕಚ್ಚಿದೆ ಎಂದು ವರದಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ನೆಲ ಕಚ್ಚಿದ ರಾಗಿ ತೆನೆ ಸಂಪೂರ್ಣಹಾಳಾಗಲಿದೆ ಎಂದರು. ಇಲ್ಲಿಯವರೆಗೂ ರಾಗಿ ಬೆಳೆ ಸಂಪೂರ್ಣ ಹಾಳಾಗಿದೆ ಎಂದು ಯಾವುದೇ ರೈತರು ದೂರು ನೀಡಿಲ್ಲ. ನಮ್ಮ ಗಮನಕ್ಕೂಬಂದಿಲ್ಲ. ನಮಗೆ ಮಾಹಿತಿ ಸಿಕ್ಕಿರುವುದು ಮಾತ್ರ ಗಾಳಿಗೆ ರಾಗಿ ತೆನೆ ನೆಲಕಚ್ಚಿದೆ ಎಂಬುದು. ಈಗಲುಬಿಸಿಲು ಬಂದರೆ ನೆಲ ಕಚ್ಚಿರುವ ತೆನೆ ರೈತರ ಕೈ ಸೇರಲಿದೆ ಎಂದು ತಿಳಿಸಿದರು. ಸದ್ಯ ಮಳೆಯಿಂದ ರಾಗಿಬೆಳೆ ಹಾನಿಯಾದರೆ ಅವರಿಗೆ ಪರಿಹಾರ ಕೊಡಬೇಕಾದರೆ ಹಾನಿಗೊಳಗಾದ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಸಿರಬೇಕು. ಅದೂ ಒಟ್ಟು ಬೆಳೆಯ ಶೇ.33ಕ್ಕಿಂತ ಹೆಚ್ಚು ಹಾನಿಯಾಗಿರ ಬೇಕು. ಆಗ ಮಾತ್ರ ಬೆಳೆ ನಷ್ಟ ಪರಿಹಾರ ಪಡೆಯಲು ಅರ್ಹರು ಎಂದು ಸಿ.ಲತಾ ತಿಳಿಸಿದರು.
ಮಳೆಯಿಂದ ಹೊಲದಲ್ಲಿ ಹೆಚ್ಚು ನೀರು ನಿಂತು ರಾಗಿ ಬೆಳೆ ಸಂಪೂರ್ಣ ಹಾಳಾಗಿದೆ.ಕಳೆದ 4 ತಿಂಗಳಿನಿಂದ ಬಿಸಿಲು ಮಳೆ ಎನ್ನದೆಕಷ್ಟ ಪಟ್ಟು ಬೆಳೆದ ಬೆಳೆಕೈ ಸೇರುವ ಸಮಯದಲ್ಲಿ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ನಮಗೆ ಸರ್ಕಾರ ಪರಿಹಾರ ನೀಡಿದರಷ್ಟೇ ನಮ್ಮ ಬದುಕು ಸಾಗಲಿದೆ. ಇಲ್ಲವಾದರೆ ದೇವರೇ ದಿಕ್ಕು. – ಮಹೇಶ್, ನಷ್ಟಕ್ಕೊಳಗಾದ ರೈತ