ಪುರಾತನ ಹುಣಸೆ ತೋಪು ಶೀಘ್ರ ಅಭಿವೃದ್ಧಿ
Team Udayavani, Jun 30, 2019, 3:00 AM IST
ದೇವನಹಳ್ಳಿ: ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ ನಲ್ಲೂರು ಜೀವ ವೈವಿಧ್ಯ ತಾಣ ಗಂಗಾದೇವಿ ದೇವಾಲಯದ ಆವರಣದಲ್ಲಿರುವ ಬೃಹದಾಕಾರದ ಹುಣಸೆ ಮರಗಳು ಹಾಗೂ ಅವುಗಳ ವೈಶಿಷ್ಟ್ಯವನ್ನು ಪರಿಶೀಲಿಸಲಾಯಿತು. ಅಲ್ಲದೆ ಪುರಾತನ ಕಾಲದ ಹುಣಸೆ ಮರಗಳಿಂದ ಕೂಡಿರುವ ಜೀವ ವೈವಿಧ್ಯ ತಾಣವನ್ನು ಪರಿಶೀಲನೆ ನಡೆಸಿದ ಕರ್ನಾಟಕ ರಾಜ್ಯ ಜೀವವೈವಿಧ್ಯ ತಾಣದ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಈ ಪ್ರದೇಶದ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಜೀವ ವೈವಿಧ್ಯ ತಾಣದ ಅಭಿವೃದ್ಧಿಗೆ ಕ್ರಮ: ನಲ್ಲೂರು ಜೀವ ವೈವಿಧ್ಯ ತಾಣವು ದೇಶದಲ್ಲೇ ಪ್ರಾಚೀನ ಎಂದು ಹೆಸರಾಗಿದೆ. ಅದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಭಾರತ ದೇಶದಲ್ಲೇ ಪ್ರಥಮ ಜೀವ ವೈವಿಧ್ಯ ತಾಣವೆಂದು ಹೆಸರಾಗಿರುವುದರಿಂದ ಬೇರೆ ದೇಶದ ಜನರು ಇದನ್ನು ವೀಕ್ಷಿಸಲು ಬರುತ್ತಾರೆ. ಅಭಿವೃದ್ಧಿ ಪಡಿಸುವುದಕ್ಕೆ ದೇವಾಲಯ ಸಮಿತಿಯ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಲಕ್ಷ್ಮೀನಾರಾಯಣ್ ಒಂದು ಕೋಟಿ ರೂ. ಅನುದಾನ ಕೇಳಿದ್ದಾರೆ.
ಸರ್ಕಾರದಿಂದ ಶೀಘ್ರ ಮಂಜೂರು ಮಾಡಿಸಲಾಗುವುದು. ಮಂಡಳಿಯ ಮುಂಬರುವ ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಸೂಕ್ತ ನಿಲುವನ್ನು ಪಡೆಯಲಾಗುವುದು. ಅಭಿವೃದ್ಧಿಗಾಗಿ ಗ್ರಾಪಂ ಮಟ್ಟದಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು ಸಹ ಕೈ ಜೋಡಿಸಲಾಗುವುದು. ಮುಂದಿನ ಪೀಳಿಗೆಗೆ ಉಳಿಸುವಂತೆ ಆಗಬೇಕು ಎಂದರು.
ಭಾರತದ ಪಾರಂಪರಿಕ ತಾಣ: ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ (ಪ್ರಾಣಿ ಶಾಸ್ರ¤) ಸಹಾಯಕ ಸಂಶೋಧಕ ಪ್ರೀತಂ ಮಾತನಾಡಿ, ದೇಶದಲ್ಲಿಯೇ ಈ ಹುಣಸೆ ತೋಪು ಮೊದಲ ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಣೆಯಾಗಿದೆ. ವಿಶ್ವದ ಯಾವ ದೇಶದಲ್ಲಿಯೂ ಇರದ ವಿಶಿಷ್ಟ ರೀತಿಯ ಪುರಾತನ ಹುಣಸೆ ಮರಗಳು ಇಲ್ಲಿವೆ.
ಚೋಳರ ಆಳ್ವಿಕೆಯ ಕಾಲದಲ್ಲಿ ಗಂಗಮ್ಮ, ಬಸವಣ್ಣ ಹಾಗೂ ಚನ್ನ ಕೇಶವ ದೇವರ ಪುರಾತನ ದೇವಾಲಯಗಳು ಹಾಗೂ ಸುಮಾರು 298 ರೀತಿಯ ಅತ್ಯಂತ ವಿಶಿಷ್ಟ ತಳೀಯ ಹುಣಸೆ ಮರಗಳು ಕಾಣ ಸಿಗುತ್ತವೆ. ಈ ಪ್ರದೇಶವನ್ನು ವಿಳಂಬವಿಲ್ಲದೆ ಸ್ಥಳೀಯ ಸಂಸ್ಥೆಗಳೊಂದಿಗೆ ಕೈ ಜೋಡಿಸಿ, ಸೂಕ್ತ ರೀತಿಯ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಗಿಡಗಳನ್ನು ನಾಶಪಡಿಸದೇ ಅಭಿವೃದ್ಧಿಗೊಳಿಸಿ: ಕರ್ನಾಟಕ ರಾಜ್ಯ ಜೀವ ವೈವಿಧ್ಯ ಅಧಿಕಾರಿ ಡಾ. ಪುರುಷೋತಮ್ ಮಾತನಾಡಿ ಒಂದು ಕಚೇರಿ ನಿರ್ಮಾಣ ಮಾಡುವುದಕ್ಕೆ 20 ಸಾವಿರ ರೂ. ನೀಡಲಾಗುತ್ತಿದೆ. ಈ ತಾಣದಲ್ಲಿ ಹಲವು ಜೀವ ಜಂತುಗಳು ಹಾಗೂ ಅನೇಕ ಗಿಡ ಮರಗಳು ಬೆಳೆದಿರುವುದರಿಂದ ಒಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಅಭಿವೃದ್ಧಿ ಪಡಿಸಬೇಕಾದರೆ ಮರಗಿಡಗಳನ್ನು ಹಾಳು ಮಾಡದೇ ಅಭಿವೃದ್ಧಿ ಮಾಡುವ ಉದ್ದೇಶವಾಗಿದೆ.
ಮುಂದಿನ ತಿಂಗಳಿನಲ್ಲಿ ಕೊಲ್ಕತ್ತದಿಂದ ಅಧಿಕಾರಿಗಳು ಭೇಟಿ ನೀಡುತ್ತಾರೆ. ಇದನ್ನು ಪರಿಶೀಲಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಪಂ ಹಂತದಲ್ಲಿ ಬಯೋಡೈವರ್ಸಿಟಿ ಮ್ಯಾನೇಜ್ಮೆಂಟ್ ಸಮಿತಿ ರಚಿಸಲಾಗಿದೆ ಎಂದರು. ಜಿಪಂ ಸದಸ್ಯ ಜಿ ಲಕ್ಷ್ಮೀನಾರಾಯಣ್, ಮರ ವಿಜ್ಞಾನ ಮತ್ತು ತಾಂತ್ರಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಮಮತಾ ಕೃಷ್ಣ, ಸದಸ್ಯರಾದ ಬೈರಪ್ಪ, ಚಂದ್ರು ಕೃಷ್ಣಪ್ಪ, ಇದ್ದರು.