ಗಂಗರ ಕಾಲದ ಶಿಲಾ ಶಾಸನ ಪತ್ತೆ
Team Udayavani, Nov 29, 2019, 2:22 PM IST
ದೇವನಹಳ್ಳಿ: ಕನ್ನಡ ನಾಡಿನ ಖ್ಯಾತ ರಾಜ ವಂಶ ಗಂಗ ಅರಸರ ಕಾಲದ್ದು ಎನ್ನಲಾದ ವೀರಗಲ್ಲು ಶಿಲಾ ಶಾಸನವು ತಾಲೂಕಿನ ವೆಂಕಟಗಿರಿ ಕೋಟೆಯ ಶ್ರೀನಿವಾಸಯ್ಯ ಅವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಪತ್ತೆಯಾಗಿದೆ.
ವೆಂಕಟಗಿರಿಯು ಸುಮಾರು ಎಂಟರಿಂದ ಹತ್ತನೇ ಶತಮಾನದಲ್ಲಿ ನೊಳಂಬರ ಗಂಗರ ಆಡಳಿತಕ್ಕೆ ಒಳಪಟ್ಟಿತ್ತು ಎನ್ನಲಾಗಿದೆ. ಮೇಲ್ನೋಟಕ್ಕೆ ಈ ವೀರಗಲ್ಲು ಶಾಸನವು ಅಪ್ರಕಟಿತ ವಾಗಿದು, ಹಳೇಗನ್ನಡದ ಕಾಲದಾಗಿದೆ. ಇನ್ನೂ ಶಾಸನ ಓದುವರು ಸಿಗದ ಕಾರಣ, ಶಾಸನದಲ್ಲಿ ಏನು ಬರೆಯಲಾಗಿದೆ ಎಂದು ತಿಳಿದು ಬಂದಿಲ್ಲ. ವೀರಗಲಿನಲ್ಲಿ ಉಬ್ಬು ಶಿಲ್ಪದ ಮಾದರಿಯಲ್ಲಿ ಯುದ್ದ ದೃಶ್ಯವನ್ನು ಸಾಂದರ್ಭಿಕವಾಗಿ ಕೆತ್ತಲಾಗಿದೆ.
ಯುದ್ದದಲ್ಲಿ ಆನೆಯೊಂದಿಗೆ ಹೋರಾಡುತ್ತಿರುವ ವೀರ, ವೀರ ಮರಣ ಹೊಂದಿರುವ ಸ್ವರ್ಗಾರೋಹಣ ದೃಶ್ಯವಿದೆ. ಯುದ್ದ ನಿರತ ಸೈನಿಕರ ಚಿತ್ರ, ಹಾಗೂ ಕಾಗೆ, ನರಿಗಳ ಕೆತ್ತನೆಯ ಜೊತೆಗೆ ಹಳೇ ಗನ್ನಡದ ಲಿಪಿ ಕಂಡು ಬಂದಿದೆ. ಈ ವೀರಗಲ್ಲು 7.05 ಅಡಿ ಉದ್ದ, 4.05 ಅಡಿ ಅಗಲವಿದ್ದು, ಹಾಗೂ ಮುಕ್ಕಾಳು ಅಡಿ ದಪ್ಪವಿದೆ. ವೀರಗಲ್ಲುಗಳು ಶಿಲೆಯಿಂದ ನಿರ್ಮಿತವಾಗಿದೆ ಎಂದುಇತಿಹಾಸಕಾರ ಹಾಗೂ ನಿವೃತ್ತ ಶಿಕ್ಷಕ ಗುರುಸಿದ್ದಯ್ಯ ತಿಳಿಸಿದರು.
ಸ್ಥಳೀಯ ನಿವಾಸಿ ಕೆ ಶ್ರೀನಿವಾಸಯ್ಯ ಮಾತನಾಡಿ ಭೂಮಿಯಲ್ಲಿ ಇತಿಹಾಸದ ಕುರುಹು ಸಿಕ್ಕಿರುವುದು ಸಂತಸ ತಂದಿದೆ. ನಮ್ಮ ಪೂರ್ವಿಕರ ನಿವೇಶನದಲ್ಲಿ ಕಸ ಕಡ್ಡಿ ಹಾಕಲಾಗುತಿತ್ತು.ಸ್ವಚ್ಚ ಗೊಳಿಸುತ್ತಿದ್ದಾಗ ವೀರಗಲ್ಲು ಪತ್ತೆ ಆಗಿದೆ.ಮತ್ತಷ್ಟು ಕಲ್ಲುಗಳನ್ನು ಹೊರ ತೆಗೆದು ಇತಿಹಾಸಮಾಹಿತಿಯನ್ನು ಎಲ್ಲರಿಗೂ ತಿಳಿಸುವ ಕೆಲಸವಾಗಬೇಕಾಗಿದೆ .