ಜನರ ಸಮಸ್ಯೆ ಬಗೆಹರಿಸಿ, ಅಲೆದಾಟ ತಪ್ಪಿಸಿ: ಪಾಷಾ
Team Udayavani, Mar 25, 2022, 2:11 PM IST
ದೇವನಹಳ್ಳಿ: ತಾಲೂಕಿನಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಸೇರಿದಂತೆ ಹಲವು ಸಮುದಾಯದ ಸಮಸ್ಯೆ ಬಗೆಹರಿಸಿ, ಕಚೇರಿಗಳ ಅಲೆದಾಟವನ್ನು ತಪ್ಪಿಸಬೇಕು ಎಂದು ಜಾಮೀಯ ಮಸೀದಿ ಅಧ್ಯಕ್ಷ ಅಬ್ದುಲ್ ಖುದ್ದೂಸ್ಪಾಷಾ ತಿಳಿಸಿದರು.
ಪಟ್ಟಣದ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಹೂಗುತ್ಛ ನೀಡುವುದರ ಮೂಲಕ ತಹಶೀಲ್ದಾರ್ ಶಿವರಾಜ್ ಅವರನ್ನು ಅಭಿನಂದಿಸಿ ಮಾತನಾಡಿ, ಜನರ ಸಮಸ್ಯೆಗೆ ಮತ್ತು ಕುಂದು ಕೊರತೆಗಳಿಗೆ ಸ್ಪಂದಿಸಿ ಸೂಕ್ತ ನ್ಯಾಯ ಒದಗಿಸಿ ಕೊಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ದಂಡಾಧಿಕಾರಿ ಗಳು ತಾಲೂಕಿಗೆ ಮಾದರಿಯಾಗಬೇಕು. ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆ ಅರ್ಹ ಫಲಾನುಭವಿಗಳಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಜನರ ಮನೆ ಬಾಗಿಲಿಗೆ ಸೌಲಭ್ಯ
ತಹಶೀಲ್ದಾರ್ ಶಿವರಾಜ್ ಮಾತನಾಡಿ, ನಮ್ಮ ಹಂತದಲ್ಲಿ ಕಾನೂನು ಚೌಕಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಇದುವರೆಗೂ ನಮ್ಮ ಗಮನಕ್ಕೆ ಬಂದಂತಹ ಯಾರೇ ಆಗಿರಬಹುದು ಕಾನೂನು ಚೌಕಟ್ಟಿನಲ್ಲಿದ್ದರೆ, ಕೆಲಸವನ್ನು ಶೀಘ್ರ ಮಾಡಿ ಕೊಡಲಾಗುತ್ತಿದೆ. ವಯೋವೃದ್ಧರು ನಮ್ಮ ಕಚೇರಿಗೆ ಯಾವುದೇ ರೀತಿಯಲ್ಲಿ ಅಲೆದಾಡುವುದನ್ನು ತಪ್ಪಿ ಸುವುದಕ್ಕಾಗಿಯೇ ಪ್ರತಿ ಗ್ರಾಪಂ ಹಂತದಲ್ಲಿಯೇ ಪಿಂಚಣಿ ಅದಾಲತ್, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹೀಗೆ ಹಲ ವಾರು ಕಾರ್ಯಕ್ರಮ ಮಾಡುವುದರ ಮೂಲಕ ಜನರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದರು.