ಕಸ ಹಾಕಿದವರಿಗೆ ಗ್ರಾಮಸ್ಥರಿಂದ ತರಾಟೆ
Team Udayavani, Oct 18, 2021, 12:22 PM IST
ವಿಜಯಪುರ : ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಚಿಕ್ಕ ಅಮಾನಿಕೆರೆಯ ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಕಸ ಸುರಿದು ಹೋಗುತ್ತಿದ್ದ ಟ್ರ್ಯಾಕ್ಟರ್ ಬೆನ್ನು ಹತ್ತಿದ ಗ್ರಾಮಸ್ಥರು ಎಸ್ ಜೆಎಸ್ಎಸ್ ಕನ್ವೆನ್ಷನ್ ಹಾಲ್ ಮಾಲೀಕ ಮುನಿನಂಜಪ್ಪ ಮತ್ತು ದೊಡ್ಡಮನೆ ಶ್ರೀಧರ್ ಅವರು ತಡೆದು ನಿಲ್ಲಿಸಿ ವಾಪಸ್ ಕರೆ ತಂದು ಅದೇ ಕಸವನ್ನು ಟ್ರಾಕ್ಟರ್ ಗೆ ತುಂಬಿಸಿ ಕಳುಹಿಸಿದ ಘಟನೆ ನಡೆದಿದೆ.
ಈ ವಿಚಾರವಾಗಿ ಮಾತನಾಡಿದ ಮುನಿ ನಂಜಪ್ಪ, ಹಬ್ಬ ಹರಿ ದಿನಗಳಲ್ಲಿ ವ್ಯಾಪಾರಿಗಳು ಮಾರಾಟವಾಗದೆ ಉಳಿದ ಬಾಳೆ ಕಂದು, ಹೂವುಗಳು, ಮಾವಿನ ಸೊಪ್ಪು, ಹಣ್ಣು ತರಕಾರಿಗಳನ್ನು ತಂದು ಹೆದ್ದಾರಿಗಳಲ್ಲಿ ಹಾಕುವುದರಿಂದ ಅವುಗಳು ಕೊಳೆತು ಜನರಿಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇಂಥ ವ್ಯಾಪಾರಿಗಳಿಗೆ ಮೊದಲೇ ಎಚ್ಚರಿಕೆ ನೀಡಬೇಕು. ಉಳಿಕೆಯಾದ ವಸ್ತು ರಸ್ತೆಗಳ ಬದಿ ಬಿಸಾಡುವುದಕ್ಕೆ ನಗರಸಭೆ ಅಧಿಕಾರಿಗಳು ಆಸ್ಪದ ನೀಡಬಾರದು. ಆಗ ಮಾತ್ರ ಇಂತಹ ಘಟನೆ ತಡೆಯಬಹುದು ಎಂದು ಹೇಳಿದರು.