ಐತಿಹಾಸಿಕ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಅವಶ್ಯ
ನವೆಂಬರ್ 8 ಮತ್ತು 9ಕ್ಕೆ ಹಾರಕೂಡ ಶ್ರೀಗಳ ಜನ್ಮದಿನಾಚರಣೆ ಕಾರ್ಯಕ್ರಮ
Team Udayavani, Aug 14, 2019, 3:35 PM IST
ಬಸವಕಲ್ಯಾಣ: ನಗರದಲ್ಲಿ ಹಾರಕೂಡ ಶ್ರೀಗಳ ಜನ್ಮದಿನ ಕಾರ್ಯಕ್ರಮ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ನಾರಾಯಣರಾವ್ ಮಾತನಾಡಿದರು.
ಬಸವಕಲ್ಯಾಣ: ನಗರದ ಬಿಕೆಡಿಬಿ ಸಭಾಮಪಂಟದಲ್ಲಿ ನವೆಂಬರ್ 8 ಮತ್ತು 9ರಂದು ನಡೆಯಲಿರುವ ದಾಸೋಹ ರತ್ನ ಡಾ|ಚನ್ನವೀರ ಶಿವಾಚಾರ್ಯರ 57ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ವಿವಿಧ ಸಮಿತಿಗಳು ಕಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಬಿ.ನಾರಾಯಣರಾವ್ ಹೇಳಿದರು.
ನಗರದ ಬಿಕೆಡಿಬಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಡಾ|ಚನ್ನವೀರ ಶಿವಾಚಾರ್ಯರ ಜನ್ಮದಿನ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀಗಳ ಭಕ್ತಾದಿಗಳು ಎಲ್ಲಾ ಕಡೆ ಇರುವುದರಿಂದ ಅಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಗಣ್ಯರು, ಸಾಹಿತಿಗಳು, ಭಕ್ತರು ಮತ್ತು ಸಾರ್ವಜನಿಕರು ಆಗಮಿಸುತ್ತಾರೆ. ಹಾಗಾಗಿ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ವಿಶೇಷವಾಗಿ ವಸತಿ, ಪ್ರಸಾದ ವ್ಯವಸ್ಥೆ ಬಹಳ ಮುಖ್ಯವಾಗಿದೆ ಎಂದರು.
ಶ್ರೀಗಳು ಯಾವುದೇ ಜಾತಿಗೆ ಮತ್ತು ಧರ್ಮಕ್ಕೆ ಸಿಮೀತವಾಗಿಲ್ಲ. ಹೀಗಾಗಿ ಎರಡು ದಿನ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿಯೊಂದು ಜಿಲ್ಲೆಯ ಶ್ರೇಷ್ಠ ಕಲಾವಿದರನ್ನು ಆಹ್ವಾನಿಸಲಾಗುವುದು ಮತ್ತು ಬಸವಕಲ್ಯಾಣ ಸಮಗ್ರ ಭಕ್ತಾದಿಗಳಿಂದ 57 ತೊಲೆ ಬಂಗಾರದ ಕಿರಿಟವನ್ನು ಕಾರ್ಯಕ್ರಮದಲ್ಲಿ ಇಡಲಾಗುತ್ತಿದೆ ಎಂದರು.
ಇಡೀ ಕಾರ್ಯಕ್ರಮವನ್ನು ಮೈಸೂರು ಹಾಗೂ ಹಂಪಿ ಉತ್ಸವದಂತೆ ಆಚರಿಸಲಾಗುತ್ತಿದೆ. ಇದು ಕೇವಲ ಒಬ್ಬರಿಂದ ಅಥವಾ ಒಂದು ಸಮುದಾಯದಿಂದ ಸಾಧ್ಯವಿಲ್ಲ. ಹಿಂದು, ಮುಸ್ಲಿಂ, ದಲಿತರು ಎನ್ನದೆ ಪ್ರತಿಯೊಬ್ಬರು ಮನಸ್ಸಾಪೂರ್ವಕವಾಗಿ ತನು, ಮನ, ಧನದಿಂದ ಸಹಾಯ ಮಾಡಿದಾಗ ಮಾತ್ರ ಐತಿಹಾಸಿಕ ಕಾರ್ಯಕ್ರಮವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನ್ಮದಿನಕ್ಕೆ ಸಂಬಂಧ ಪಟ್ಟಂತೆ ಆ.25ರಂದು ಮತ್ತು ಪ್ರತಿ ರವಿವಾರ ಮಧ್ಯಾಹ್ನ 12 ಗಂಟೆಗೆ ಬಿಕೆಡಿಬಿ ಕಚೇರಿ ಸಭಾ ಭವನದಲ್ಲಿ ಸಭೆ ನಡೆಸಲಾಗುವುದು. ಆದ್ದರಿಂದ ತಪ್ಪದೆ ಶ್ರೀಮಂತರು, ಬಡವರು ಎಂಬ ಭೇದಭಾವ ಮಾಡದೆ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಲು ಹಣದ ಕೊರತೆ ಇಲ್ಲ. ಭಕ್ತಾದಿಗಳಿಗೆ ಕೊಟ್ಟಂತಹ ಜವಾಬ್ದಾರಿಯನ್ನು ನಮ್ಮ ಮನೆಯ ಹಬ್ಬ ಎಂದು ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಶಿವರಾಜ ನರಶೆಟ್ಟೆ, ಅರ್ಜುನ ಕನಕ, ಬಿಜೆಪಿ ಮುಖಂಡ ಪ್ರದೀಪ ವಾತಡೆ, ಅನೀಲ ಭೂಸಾರೆ, ಬಾಬು ಹೊನ್ನನಾಯಕ, ಶಿವಕುಮಾರ ಬಿರಾದಾರ್, ಲೋಕೇಶ ಮೋಳಕೇರೆ ಅವರು ಸಲಹೆಗಳನ್ನು ನೀಡಿದರು. ಚಂದ್ರಕಾಂತ ಸ್ವಾಮಿ ನಾರಾಯಣಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಡಬಿ ಜಿಪಂ ಸದಸ್ಯ ರಾಜಶೇಖರ ಮೇತ್ರೆ, ಜೆಡಿಎಸ್ ಮುಖಂಡ ಸುನೀಲ ಪಾಟೀಲ, ವಿಶ್ವನಾಥ ಕಾಡಾದಿ, ಬಸವರಾಜ ಸ್ವಾಮಿ, ಬಾಳಾ ಸಾಹೇಬ್ ಕುಲಕರ್ಣಿ, ಬಿ.ಕೆ.ದಾವುದ್, ಶರಣು ಅಲಗುಡ, ನಿರ್ಮಲಾ ಕಲ್ಯಾಣರಾವ್ ಶಿವಣಕರ್, ಡಾ|ಸುಶೀಲಾಬಾಯಿ ಹೊಳಕುಂದೆ, ಡಾ| ವಿ.ವಿ.ಮಂಡಿ, ಮಲ್ಲಿಕಾರ್ಜುನ ನಂದಿ, ಯುವರಾಜ ಭೆಂಡೆ, ಶಶಿಕಾಂತ ದುರ್ಗೆ, ಬಸವರಾಜ ಸ್ವಾಮಿ, ಸಾಗರ ದಂಡೋತಿ, ಮಹಾರಾಜಪ್ಪಾ ಮೂಳೆ, ಪಂಡಿತ ನಾಗರಾಳೆ, ಪಂಡಿತ ಚೌದ್ರಿ, ಎಪಿಎಂಸಿ ನಿರ್ದೇಶಕ ಪಂಕಜ ಸೂರ್ಯವಂಶಿ, ವೀರಶೆಟ್ಟಿ ಮಲ್ಲಶೆಟ್ಟಿ, ಪ್ರಭುಲಿಂಗಯ್ನಾ ಟಂಕಸಾಲಿಮಠ ಮತ್ತಿತರರು ಇದ್ದರು.