38 ಗ್ರಾಪಂಗಳಿಗೆ ಸೋಲಾರ್ ಅಳವಡಿಕೆ
ಜನವರಿಯೊಳಗೆ ವಿದ್ಯುತ್ ಮುಕ್ತ ಗ್ರಾಪಂ ಕಟ್ಟಡಗಳಾಗಿ ಪರಿವರ್ತನೆಪದೇ ಪದೇ ಖರ್ಚಿನಿಂದ ಮುಕ್ತಿ
Team Udayavani, Dec 14, 2019, 1:27 PM IST
ವೀರಾರೆಡ್ಡಿ ಆರ್.ಎಸ್.
ಬಸವಕಲ್ಯಾಣ: ಗ್ರಾಮ ಪಂಚಾಯಿತಿಗಳ ವಿದ್ಯುತ್ ಸಮಸ್ಯೆ ಹಾಗೂ ಆರ್ಥಿಕ ಹೊರೆ ತಪ್ಪಿಸು ನಿಟ್ಟಿನಲ್ಲಿ ತಾಲೂಕಿನ 38 ಗ್ರಾಮ ಪಂಚಾಯಿತಿಗಳು ಬರುವ ಜನವರಿಯೊಳಗೆ ವಿದ್ಯುತ್ ಮುಕ್ತ ಗ್ರಾಮ ಪಂಚಾಯಿತಿ ಕಟ್ಟಡವಾಗಿ ಪರಿವರ್ತನೆಗೊಳ್ಳಲಿವೆ.
ಔರಾದ್ ತಾಲೂಕಿನ ಧೂಪತಮಹಾಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳಿಗೆ ಸೋಲಾರ್ ಅಳವಡಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾದ ಬೆನ್ನಲ್ಲೆ ಬಸವಕಲ್ಯಾಣ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳನ್ನು ವಿದ್ಯುತ್ ಮುಕ್ತ ಗ್ರಾಮ ಪಂಚಾಯತಿ ಕಟ್ಟಡವನ್ನಾಗಿ ಮಾಡಲು ಜಿಪಂ ಹಾಗೂ ತಾಪಂ ಮುಂದಾಗಿವೆ.
ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ಆನ್ಲೈನ್ ಮೇಲೆ ಅವಲಂಬನೆ ಆಗಿರುವುದರಿಂದ ಪ್ರತಿ ತಿಂಗಳು ಒಂದು ಗ್ರಾಪಂಗೆ ಅಂದಾಜು 2ರಿಂದ 3 ಸಾವಿರ ರೂ. ವಿದ್ಯುತ್ ಶುಲ್ಕ ಭರಿಸಬೇಕಾಗುತ್ತದೆ. ತಿಂಗಳಿಗೆ ಅಂದಾಜು ಒಟ್ಟು 1 ಲಕ್ಷ ರೂ. ವಿದ್ಯುತ್ ಶುಲ್ಕ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ.
ಹೀಗಾಗಿ 14ನೇ ಹಣಕಾಸಿನ ಯೋಜನೆಯಡಿ ಮತ್ತು ಗ್ರಾಪಂಗಳಲ್ಲಿ ಕಂದಾಯ ರೂಪದಲ್ಲಿ ಸಂಗ್ರಹವಾದ ಹಣದಲ್ಲಿ ಈ ವಿದ್ಯುತ್ ಮುಕ್ತ ಗ್ರಾಪಂಕಟ್ಟಡ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೋಹಿನೂರ ಗ್ರಾಮ ಪಂಚಾಯತಿನಲ್ಲಿ 1 ಕಿಲೋ ವ್ಯಾಟ್ ಸೋಲಾರ್ ಅಳವಡಿಸಿರುವುದು ಯಶಸ್ವಿಯಾಗಿದೆ.
ಅದೇ ಮಾದರಿಯಲ್ಲಿ ವರ್ಷ ಪೂರ್ತಿ ಸೋಲಾರ್ ವಿದ್ಯುತ್ನಲ್ಲೇ ಗ್ರಾಪಂ ಕಾರ್ಯಗಳು ನಡೆಯುವಂತೆ ಉಳಿದ ಗ್ರಾಪಂಗಳಲ್ಲಿ ಅಂದಾಜು 1.5 ಲಕ್ಷ ರೂ. ವೆಚ್ಚದಲ್ಲಿ 2 ಕಿಲೋ ವ್ಯಾಟ್ ಇರುವ ಸೋಲಾರ್ ಉಪಕರಣಗಳನ್ನು ಅಳವಡಿಸುವ ಮೂಲಕ ಜನವರಿ ತಿಂಗಳೊಳಗೆ ವಿದ್ಯುತ್ ಮುಕ್ತ ಗ್ರಾಪಂಕಟ್ಟಡಗಳನ್ನಾಗಿ ಮಾಡುವುದೇ ಯೋಜನೆಯ ಉದ್ದೇಶವಾಗಿದೆ. ಇಂದರಿಂದ ಗ್ರಾಪಂನಲ್ಲಿರುವ ಕಂಪ್ಯೂಟರ್, ಫ್ಯಾನ್, ವಿದ್ಯುತ್ ದೀಪ ಸೇರಿದಂತೆ ಪ್ರತಿಯೊಂದು ಕಾರ್ಯಗಳನ್ನು ಸೋಲಾರ್ ವಿದ್ಯುತ್ನಿಂದ ಮಾಡಬಹುದು. ಇದರಿಂದ ಪ್ರತಿ ತಿಂಗಳು ವಿದ್ಯುತ್ ಶುಲ್ಕ ಭರಿಸುವುದು ಇಲಾಖೆಗೆ ತಪ್ಪುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಮಡೋಳಪ್ಪಾ ಪಿ.ಎಸ್. ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಿಂದ ಪ್ರತಿವರ್ಷ ಲಕ್ಷಾಂತರ ರೂ.ವಿದ್ಯುತ್
ಶುಲ್ಕ ಭರಿಸಲಾಗುತ್ತದೆ. ಇದನ್ನು ತಪ್ಪಿಸಲು ಪ್ರಥಮ ಹಂತದಲ್ಲಿ ಗ್ರಾಪಂ ಕಟ್ಟಡಗಳನ್ನು ವಿದ್ಯುತ್ ಮುಕ್ತ ಗ್ರಾಪಂ ಮಾಡುವ ಉದ್ದೇಶದಿಂದ ಯೋಜನೆ ಹಾಕಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಧೂಪತ್ ಮಹಾಗಾಂವ್ ಮಾದರಿಯಲ್ಲಿ ಬೀದಿ ದೀಪಗಳಿಗೆ ಸೋಲಾರ್ ಅಳವಡಿಸುವ ಉದ್ದೇಶವಿದೆ. ಜ್ಞಾನೇಂದ್ರಕುಮಾರ ಗಂಗವಾರ್,
ಸಿಇಒ ಬೀದರ
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಗಳಲ್ಲಿ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಗ್ರಾಮ ಪಂಚಾಯಿತಿಗೆ ಕಂದಾಯ ಹಣ ಕಟ್ಟಿದರೆ, ಗ್ರಾಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ.
ಮಡೋಳಪ್ಪಾ ಪಿ.ಎಸ್.,
ತಾಪಂ ಇಒ