ಮೌಡ್ಯ ತೊಲಗಿಸಲು ಶ್ರಮಿಸುವಂತೆ ಪತ್ರಕರ್ತರಿಗೆ ಸಲಹೆ
ಸಾಧಕ ಪತ್ರಕರ್ತರಿಗೆ ಸನ್ಮಾನ
Team Udayavani, Jul 22, 2019, 12:42 PM IST
ಬಸವನಬಾಗೇವಾಡಿ: ಇಂದು ವೈಚಾರಿಕ ಬದುಕಿಗಿಂತ ಮೌಡ್ಯಗಳ ಬುದುಕಿಗೆ ಹೆಚ್ಚಿನ ಪ್ರಚಾರ ಹಾಗೂ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ಸಮಾಜದಲ್ಲಿ ಮೌಡ್ಯ ತಾಂಡವವಾಡುತ್ತಿದೆ ಎಂದು ಶಿವಶರಣ ಹರಳಯ್ಯ ಸಮಾದ ಮುಖಂಡ ಸಿದ್ದು ಔಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈಚಾರಿಕ ಬದುಕಿನಕ್ಕಿಂತ ಮೌಡ್ಯ ಬುದುಕಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಇದನ್ನು ಹೋಗಲಾಡಿಸಿ ಬಸವಣ್ಣನವರ ತತ್ವಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಹಾಗೂ ಮೌಡ್ಯ ಹೋಗಲಾಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೆಗಳಿಗೆ ಮತ್ತು ಅದರಲ್ಲಿ ಕಾರ್ಯ ನಿರ್ವಹಿಸುವ ವರದಿಗಾರರಿಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನೂತನ ಪ್ರೌಢಶಾಲೆ ನಿವೃತ್ತ ಶಿಕ್ಷಕ ಮಹಾಂತೇಶ ಆದಿಗೊಂಡ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖವಾಗಿದೆ. ನಾಲ್ಕು ದಿಕ್ಕುಗಳಲ್ಲಿ ನಡೆಯುವ ಸಂಗತಿಗಳ ಮಾಹಿತಿ ಸಂಗ್ರಹಿಸಿ ನಿತ್ಯ ಓದುಗರಿಗೆ ಒದಗಿಸುವ ಕಾರ್ಯ ಪತ್ರಿಕೆಗಳು ಮಾಡುತ್ತಿವೆ ಎಂದು ಹೇಳಿದರು.
ಒಂದು ಕಾಲದಲ್ಲಿ ಪತ್ರಿಕೆ ಹೊರ ತರಬೇಕಾದರೆ ಒಂದು ದೊಡ್ಡ ಸಾಹಸವಾಗಿತ್ತು. ಆದರೆ ಇಂದು ಅನೇಕ ತಂತ್ರಜ್ಞಾನ ಒಳಗೊಂಡಿರುವುದರಿಂದ ಸುದ್ದಿ ಸಂಗ್ರಹಕ್ಕೆ ಅನುಕೂಲವಾಗಿದೆ. ಈ ಕ್ಷಣದಲ್ಲಿ ನಡೆದ ವಿಷಯವನ್ನು ಕ್ಷಣ ಮಾತ್ರದಲ್ಲಿ ರಾಷ್ಟ್ರ ವ್ಯಾಪ್ತಿ ಪಸರಿಸುವಂತ ಮೊಬೈಲ್ಗಳಲ್ಲಿನ ವ್ಯಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಅನೇಕ ಸಾಧನಗಳ ಮೂಲಕ ಬರುವ ಸಂದೇಶಗಳಿಂದಾಗಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ.
ಪತ್ರಿಕೆಗಳು ಓದುವರಿಗೆ ಹಿಡಿಸುವಂತಹ ಬರಹಗಳತ್ತ ಹೆಚ್ಚಿನ ಗಮ ಹರಿಸಬೇಕಿದೆ. ಪತ್ರಕರ್ತರು ಯಾವುದೇ ಒತ್ತಡಕ್ಕೆ ಒಳಗಾಗದೇ ನಿಪ್ಪಕ್ಷಪಾತ ವರದಿ ಮಾಡುತ್ತಿರಬೇಕು. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಫ್.ಡಿ. ಮೇಟಿ ಮಾತನಾಡಿ, ಪಾಲಕರು ಮಕ್ಕಳಿಗೆ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ಅದು ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ. ದುಡಿಮೆಯಿಂದ ಕೂಡಿಟ್ಟ ಸಂಪತ್ತು ಇಲ್ಲವಾಗಬಹುದು, ಆದರೆ ಓದಿನಿಂದ ಪಡೆದ ಜ್ಞಾನ ಹಾಳಾಗಲಾರದು. ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ದೇವರಮನಿ ಮಾತನಾಡಿದರು. ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉದ್ಘಾಟನೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಜು ಗಣಾಚಾರಿ ನೆರವೇರಿಸಿದರು. ಎಚ್.ಎಸ್. ಬಿರಾದಾರ ಸ್ವಾಗತಿಸಿದರು. ಶರಣು ಬಸ್ತಾಳ ಕಾರ್ಯಕ್ರಮ ನಿರೂಪಿಸಿದರು.