ನೆರೆ ಸಂತ್ರಸ್ತರಿಂದ ಕಂದಾಯ ಸಚಿವರು ದೂರ ದೂರ
ಜಿಲ್ಲಾ ಉಸ್ತುವಾರಿ ಸಚಿವರಿಗೂ ಬೇಕಿಲ್ಲ ಸಂತ್ರಸ್ತರ ಉಸಾಬರಿ! ಸಿಎಂ ಬಂದರೂ ಬಾರದ ಸಚಿವ
Team Udayavani, Oct 17, 2019, 3:49 PM IST
ಕೇಶವ ಆದಿ
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಈ ಬಾರಿಯ ಪ್ರಕೃತಿ ವಿಕೋಪ ನದಿ ತೀರದ ಜನರ ಬದುಕಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಯ ಖಚಿತ ಲೆಕ್ಕ ಇನ್ನೂ ಸಿಗುತ್ತಿಲ್ಲ. ಆಘಾತಕಾರಿ ಸಂಗತಿ ಎಂದರೆ ರಾಜ್ಯದಲ್ಲಿ ಆಗಿರುವ ಒಟ್ಟಾರೆ ಹಾನಿಯಲ್ಲಿ ಶೇಕಡಾ 50 ಕ್ಕೂ ಅಧಿಕ ಪ್ರಮಾಣದ ಹಾನಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಆಗಿದೆ.
ರಾಜ್ಯ ಸರಕಾರ ಅಂಕಿ ಅಂಶಗಳೇ ಹೇಳುವಂತೆ ಅತಿಯಾದ ಮಳೆ ಹಾಗೂ ನದಿಗಳ ಪ್ರವಾಹದಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಅನುಭವಿಸಿರುವುದು ಬೆಳಗಾವಿ ಜಿಲ್ಲೆ. ಏಳು ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ 11 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಾನಿಯಾಗಿದೆ. ಸುಮಾರು 70 ಸಾವಿರ ಮನೆಗಳು ನೆಲಕಚ್ಚಿವೆ. ಅಸಂಖ್ಯಾತ ಕುಟುಂಬಗಳು ಬೀದಿಗೆ ಬಂದಿವೆ. ನೆರೆಯ ಹೊಡೆತಕ್ಕೆ ಕೃಷಿ ಕ್ಷೇತ್ರ ಸಂಪೂರ್ಣ ಮಲಗಿಕೊಂಡಿದೆ.
ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳು ಸರಕಾರದ ನೆರವಿಗಾಗಿ ಅಂಗಲಾಚುತ್ತಿವೆ. ಸರಕಾರ ಈಗಾಗಲೇ ಪರಿಹಾರ ಬಿಡುಗಡೆ ಮಾಡಿದ್ದರೂ ಅದು ಎಲ್ಲರಿಗೂ ತಲುಪಿಲ್ಲ. ಹಾನಿಗೊಳಗಾದ ಮನೆಗಳ ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎಂಬ ದೂರುಗಳು ಅಲ್ಲಲ್ಲಿ ಕೇಳಿಬರುತ್ತಲೇ ಇವೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ಬೆಳೆಹಾನಿ ಸಮೀಕ್ಷೆ ನಡೆದಿದ್ದರೂ ಅದರ ಬಗ್ಗೆಯೂ ರೈತ ಸಮುದಾಯದಿಂದ ಅಸಮಾಧಾನ ಕೇಳಿಬಂದಿದೆ.
ನೆರೆ ಸಂತ್ರಸ್ತರ ಸಂಕಷ್ಟ ಗಂಭೀರವಾಗಿದ್ದರೂ ಅದಕ್ಕೆ ಮುಖ್ಯವಾಗಿ ಸ್ಪಂದಿಸಬೇಕಾದ ಹಾಗೂ ಮಹತ್ವದ ಕಂದಾಯ ಖಾತೆ ನೋಡಿಕೊಳ್ಳುತ್ತಿರುವ ಆರ್. ಅಶೋಕ ನೆರೆ ಹಾವಳಿ, ಸಂತ್ರಸ್ತರು ಹಾಗೂ ನನಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ನಿರ್ಲಿಪ್ತರಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ನೆರೆ ಸಂಕಷ್ಟ ಬಂದು ಎರಡು ತಿಂಗಳ ಮೇಲಾಯಿತು. ಕಂದಾಯ ಸಚಿವರು ಇದುವರೆಗೆ ಯಾವುದೇ ಜಿಲ್ಲೆಗೆ ಭೇಟಿ ಮಾಡಿ ಹಾನಿಯ ಬಗ್ಗೆ ಪರಿಶೀಲನೆ ಮಾಡದೇ ಇರುವುದು ಅಚ್ಚರಿಯ ಜೊತೆಗೆ ಅಘಾತ ಉಂಟುಮಾಡಿದೆ. ಜಿಲ್ಲೆಯ ಶಾಸಕರು ಕಂದಾಯ ಸಚಿವರ ಈ ನಿರ್ಲಕ್ಷ್ಯ ಧೋರಣೆಯ ಬಗ್ಗೆ ನೇರ ಆರೋಪ ಮಾಡಿದ್ದಲ್ಲದೇ ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾಪ ಮಾಡಿದರೂ ಕಂದಾಯ ಸಚಿವರು ಮಾತ್ರ ನೆರೆ ಪೀಡಿತ ಪ್ರದೇಶಗಳ ಕಡೆಗೆ ಹೋಗುವ ಮನಸ್ಸು ಮಾಡಿಲ್ಲ.
ನೆರೆ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸಿರುವ ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಲ್ಕು ಬಾರಿ ಭೇಟಿ ನೀಡಿ ಸಂತ್ರಸ್ತರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಗೋಕಾಕ, ಮೂಡಲಗಿ, ರಾಮದುರ್ಗ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಆದರೆ ಕಂದಾಯ ಸಚಿವರು ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ಕೇವಲ ಬೆಂಗಳೂರಿಗೆ ಸೀಮಿತವಾಗಿ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ನೆರೆ ಸಂತ್ರಸ್ತರು ಬಹಳ ಕಷ್ಟದಲ್ಲಿದ್ದಾರೆ. ಅವರಿಗೆ ಶಾತ್ವತ ಪರಿಹಾರಕ್ಕಿಂತ ಈಗ ಮೊದಲು ತಾತ್ಕಾಲಿಕ ಶೆಡ್ಗಳ ನಿರ್ಮಾಣ ಆಗಬೇಕಿದೆ. ಇದರಲ್ಲಿ ಕಂದಾಯ ಇಲಾಖೆಯ ಪಾತ್ರವೇ ದೊಡ್ಡದು. ಅವರೇ ಹಣ ಬಿಡುಗಡೆ ಮಾಡಬೇಕು. ಆದರೆ ಕಂದಾಯ ಸಚಿವರು ಒಮ್ಮೆಯೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡದೇ ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಬೆಂಗಳೂರಿನಿಂದಲೇ ಪರಿಹಾರದ ಹೇಳಿಕೆ ನೀಡುತ್ತಿದ್ದಾರೆ. ಇದು ವಾಸ್ತವ ಸ್ಥಿತಿಗೆ ಬಹಳ ದೂರವಾಗಿದೆ. ಕಂದಾಯ ಸಚಿವರಿಗೆ ಕಾಳಜಿ ಇದ್ದರೆ ಪ್ರತಿ ತಾಲೂಕಿಗೆ ಭೇಟಿ ನೀಡಬೇಕು. ಅಲ್ಲಿಯೇ ವಾಸ್ತವ್ಯ ಮಾಡಿ ನಿಜಸ್ಥಿತಿ ತಿಳಿದುಕೊಂಡು ಪರಿಹಾರ ಕೊಡಬೇಕು ಎಂಬುದು ಸಂತ್ರಸ್ತರ ಅಳಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ