ಕಿಸಾನ್ ಸಮ್ಮಾನ್ಗೆ 40 ಸಾವಿರ ಅರ್ಜಿ
Team Udayavani, Mar 3, 2019, 10:09 AM IST
ಬೆಳಗಾವಿ: ರೈತ ಕುಟುಂಬಗಳನ್ನು ಆರ್ಥಿಕವಾಗಿ ಸಬಲಗೊಳಿಸಲು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯತ್ತ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಸವಲತ್ತು ಪಡೆದುಕೊಳ್ಳಲು ರೈತರು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆದುಕೊಳ್ಳಲು ಈವರೆಗೆ ಸುಮಾರು 40 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಈ ಪ್ರಕ್ರಿಯೆಗೆ ಕೊನೆಯ ದಿನಾಂಕ ಇಲ್ಲ. ವಾರ್ಷಿಕ 6 ಸಾವಿರ ರೂ. ರೈತರ ಖಾತೆಗೆ ಜಮೆ ಆಗಲಿದೆ. ಮೊದಲ ಕಂತಿನ ಹಣ ಪಡೆದುಕೊಳ್ಳಲು ರೈತರು ದಾಖಲೆಗಳೊಂದಿಗೆ ಸಮೀಪದ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸುತ್ತಿದ್ದಾರೆ.
550 ಸೇವಾ ಕೇಂದ್ರಗಳು ಚಾಲ್ತಿ: ಜಿಲ್ಲೆಯಲ್ಲಿ ಮೊದಲು 35 ರೈತ ಸಂಪರ್ಕ ಕೇಂದ್ರ ಹಾಗೂ 35 ಅಟಲಜೀ ಜನಸ್ನೇಹಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ತುಂಬಲು ಅವಕಾಶವಿತ್ತು. ಶನಿವಾರದಿಂದ ಅರ್ಜಿ ಪಡೆದುಕೊಳ್ಳುವ ಕೇಂದ್ರಗಳನ್ನು ಹೆಚ್ಚಿಸಿರುವ ಕೃಷಿ ಇಲಾಖೆ 475 ಬಾಪೂಜಿ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು ಸೇರಿದಂತೆ ಜಿಲ್ಲೆಯಲ್ಲಿ ಈಗ ಸದ್ಯ ಒಟ್ಟು 550 ಕೇಂದ್ರಗಳು ಚಾಲ್ತಿಯಲ್ಲಿವೆ. ಇದರಿಂದ ಅರ್ಜಿ ಸಲ್ಲಿಸುವ ರೈತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 3.72 ಲಕ್ಷ ಸಣ್ಣ ಹಾಗೂ ಅತೀ ಸಣ್ಣ ರೈತ ಕುಟುಂಬಗಳು ಇವೆ. ಈ ಅಂಕಿ ಸಂಖ್ಯೆಯಲ್ಲಿ 2019ರ ವೇಳೆಗೆ ಸಂಖ್ಯೆ ಹೆಚ್ಚಾಗಿರಬಹುದು ಅಥವಾ ಕಡಿಮೆಯೂ ಆಗಿರಬಹುದು. ಮೊದಲ ಹಂತದಲ್ಲಿಯೇ ಸುಮಾರು 40 ಸಾವಿರ ಅರ್ಜಿಗಳು ಸ್ವೀಕೃತಗೊಂಡಿದ್ದರಿಂದ ರೈತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಆಗಲಿದೆ.
ಮುಂಗಾರು ಮಳೆ ಇಲ್ಲದೇ ಮೂರು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದರೆ, ಹಿಂಗಾರು ಮಳೆ ಇಲ್ಲದೇ ಇಡೀ ಜಿಲ್ಲೆಯೇ ಈಗ ಬರದಿಂದ ತತ್ತರಿಸಿ ಹೋಗಿದೆ. ಮಳೆ-ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂಥ ಸ್ಥಿತಿಯಲ್ಲಿ ರೈತರ ಬದುಕಿಗೆ ಆಸರೆಯಾಗಿ ಬಂದಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಸ್ವಲ್ಪ ಮಟ್ಟಿಗಾದರೂ ಅನುಕೂಲಕರವಾಗಲಿದೆ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಘೋಷಿಸಿದ್ದು, ಸಣ್ಣ ರೈತರು ಅಂದರೆ ಎರಡು ಹೆಕ್ಟೇರ್ ಗಿಂತ (5 ಎಕರೆಗಿಂತ) ಕಡಿಮೆ ಕೃಷಿ ಜಮೀನು ಹೊಂದಿರುವ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ. ಸಿಗಲಿದೆ. ಈಗಾಗಲೇ ಮೊದಲ ಕಂತಿನ ಹಣ ಪಾವತಿಸಲು ಸಿದ್ಧತೆ ನಡೆಸಲಾಗಿದೆ. ಈ ಮೊತ್ತ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದ್ದು, ಫಲಾನುಭವಿ ರೈತರು ಸಮೀಪದ ಕೃಷಿ ಕೇಂದ್ರಕ್ಕೆ ದಾಖಲೆ ಇದರ ಲಾಭ ಪಡೆದುಕೊಳ್ಳಬಹುದಾಗಿದೆ.
5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆ ಹೊಂದಿರುವ ಹಾಲಿ ಹಾಗೂ ಮಾಜಿಗಳು, ಕೇಂದ್ರ-ರಾಜ್ಯ ಸರ್ಕಾರದ ನೌಕರರು, ನಿವೃತ್ತರು, ಕಳೆದ ಸಾಲಿನಲ್ಲಿ ಆದಾಯ ತೆರಿಗೆ ಪಾವತಿ ಮಾಡಿರುವವರು, 10 ಸಾವಿರಕ್ಕೂ ಹೆಚ್ಚು ಮಾಸಿಕ ಪಿಂಚಣಿ ಪಡೆಯುತ್ತಿರುವವರು ಈ ಯೋಜನೆಗೆ ಅರ್ಹರಲ್ಲ. ಮಾಹಿತಿಗಾಗಿ Pmkisan.nic.in ವೆಬ್ಸೈಟ್ಗೆ ಭೇಟಿ ನೀಡಿ
ವಿವರ ಪಡೆದುಕೊಳ್ಳಬಹುದು. ಪ್ರಾಥಮಿಕವಾಗಿ ಅರ್ಹ ಸಣ್ಣ ಅತೀ ಸಣ್ಣ ಫಲಾನುಭವಿಯಾದಿಯನ್ನು ವಿವಿಧ ಯೋಜನೆಗಳಡಿ ಗುರುತಿಸಲಾಗಿದ್ದು, ಆಯಾ ಗ್ರಾಪಂದಲ್ಲಿ ಲಭ್ಯವಿರುತ್ತದೆ. ಅದರಲ್ಲಿ ಇದ್ದ ರೈತರು ಫಾರ್ಮ್-ಸಿ ಅರ್ಜಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿಗಳನ್ನು ಒದಗಿಸಿ ಕಂದಾಯ, ಕೃಷಿ ಇಲಾಖೆ ಸಿಬ್ಬಂದಿಗೆ ಕೊಡಬೇಕು. ಯಾದಿಯಲ್ಲಿ ಹೆಸರು ಇಲ್ಲದ ಸಣ್ಣ ಅತೀ ಸಣ್ಣ ರೈತರೂ ಅರ್ಹರಿರುತ್ತಾರೆ. ಯಾದಿಯಲ್ಲಿ ಹೆಸರು ಇಲ್ಲದ ಸಣ್ಣ ಅತೀ ಸಣ್ಣ ರೈತರು ಫಾರ್ಮ್-ಸಿ ಜಮೀನಿನ ಪಹಣಿ, ಆಧಾರ ಕಾರ್ಡ್, ದೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಲಾಭ ಪಡೆದುಕೊಳ್ಳಲು ಅರ್ಹ ರೈತರು ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಬೇಕು. ಮೂರು ಕಂತಿನಲ್ಲಿ ಒಟ್ಟು 6 ಸಾವಿರ ರೂ. ರೈತರ ಖಾತೆಗೆ ನೆರವಾಗಿ ಜಮೆ ಆಗಲಿದೆ. ಅರ್ಜಿ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಿದ್ದು, ವಾರದೊಳಗೆ ಮೊದಲ ಕಂತಿನ ಹಣ ಜಮೆ ಆಗುವ ಸಾಧ್ಯತೆ ಇದೆ.
. ಡಾ| ಎಸ್.ಬಿ. ಬೊಮ್ಮನಹಳ್ಳಿ,
ಜಿಲ್ಲಾಧಿಕಾರಿಗಳು
ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ಜಾರಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 575 ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ 40 ಸಾವಿರ ಅರ್ಜಿಗಳು ಬಂದಿದ್ದು, ಈ ಪೈಕಿ 20 ಸಾವಿರ ಅರ್ಜಿಗಳನ್ನು ನೋಂದಾಯಿಸಿಕೊಳ್ಳಲಾಗಿದೆ. ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಚಾಲ್ತಿಯಲ್ಲಿದ್ದು, ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
. ಜೀಲಾನಿ ಮೊಕಾಶಿ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ