ಕೇಂದ್ರದ ಮಾಜಿ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ವಿಧಿವಶ
Team Udayavani, May 21, 2021, 9:37 AM IST
ಬೆಳಗಾವಿ: ಕೇಂದ್ರದ ಮಾಜಿ ಸಚಿವ, ರೈತ ಹೋರಾಟಗಾರ ಬಾಬಾಗೌಡ ಪಾಟೀಲ ಅವರು ಅನಾರೋಗ್ಯದಿಂದ ಶುಕ್ರವಾರ (ಮೇ.21) ಬೆಳಗಿನ ಜಾವ ವಿಧಿವಶರಾದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಬಾಗೌಡ ಪಾಟೀಲರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. 1945 ಜನವರಿ 6ರಂದು ಜನಿಸಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
1998ರಲ್ಲಿ ಬೆಳಗಾವಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ರೈತ ಚಳವಳಿ ಮೂಲಕವೇ ತಮ್ಮನ್ನು ಗುರುತಿಸಿಕೊಂಡಿದ್ದರು. ಅಪ್ಪಟ ರೈತ ಹೋರಾಟಗಾರರಾಗಿದ್ದ ಬಾಬಾಗೌಡರು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ಬಿಜೆಪಿ, ಜನತಾದಳ (ಎಸ್), ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷ ಗಳಿಗೆ ಆಗಾಗ ಪಕ್ಷಾಂತರಗೊಳ್ಳುತ್ತಿದ್ದರು. ಎಲ್ಲಪಕ್ಷಗಳಿಂದಲೂ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಳಗಾವಿ ಹಾಗೂ ಧಾರವಾಡ ಭಾಗದಲ್ಲಿ ಅನೇಕ ರೈತ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಇದನ್ನೂ ಓದಿ: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪತನ: ಪೈಲಟ್ ಸಾವು
ಬೆಳಗಾವಿ ಲೋಕಸಭಾ ಉಪಚುನಾವಣೆ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಬೆಂಬಲ ನೀಡಿದ್ದರು.