ಜಯಮಂಗಲಾ : 85 ಸುತ್ತು ನಡೆದ ಸುದೀರ್ಘ ಮತ ಎಣಿಕೆಯಲ್ಲಿ ಸತೀಶ್ ಗೆ ಸೋಲು
Team Udayavani, May 3, 2021, 8:09 PM IST
ಬೆಳಗಾವಿ: ಅಂತಿಮ ಕ್ಷಣದವರೆಗೂ ಸಾಕಷ್ಟು ರೋಚಕತೆ ಉಂಟು ಮಾಡಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕೊನೆಗೂ ಸಂತೃಪ್ತಿಯ ನಗೆ ಬೀರಿ ಮೊಟ್ಟ ಮೊದಲ ಪ್ರಯತ್ನದಲ್ಲೇ ಲೋಕಸಭೆ ಪ್ರವೇಶ ಮಾಡಿದ್ದಾರೆ.
ಆದರೆ 20 ವರ್ಷಗಳ ನಂತರ ಬೆಳಗಾವಿ ಕೋಟೆಯನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಕಾಂಗ್ರೆಸ್ ಕನಸು ಕಡೆಯ ಕ್ಷಣದಲ್ಲಿ ನುಚ್ಚುನೂರಾಗಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕ್ಷೇತ್ರದಲ್ಲಿ ಬಹುಶಃ ಈ ರೀತಿಯ ಚುನಾವಣಾ ಫಲಿತಾಂಶವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅಂತಿಮ ಸುತ್ತಿನವರೆಗೆ ಜಯ ಯಾರದು ಎಂದು ಖಚಿತವಾಗಿ ಹೇಳದ ಸ್ಥಿತಿ ಇತ್ತು. ವಿಜಯಲಕ್ಷ್ಮಿಯ ಹೊಯ್ದಾಟ ಅಂತಿದಿತ್ತ ನಡೆದೇ ಇತ್ತು. ಆದರೆ ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳ ಸಹಾಯದಿಂದ 85 ಸುತ್ತುಗಳವರೆಗೆ ನಡೆದ ಸುದೀರ್ಘ ಮತ ಎಣಿಕೆಯಲ್ಲಿ ಮಂಗಲಾ ಅಂಗಡಿ ಅಂಚೆ ಮತಗಳು ಸೇರಿದಂತೆ ಒಟ್ಟು 5240 ಮತಗಳ ಅಂತರದಿಂದ ಜಯದ ನಗೆ ಬೀರಿದರು. ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳು ಬಿಜೆಪಿ ಮಾನ ಕಾಪಾಡಿದವು.
ಶುಭಂ ಶೇಳಕೆ ಅಚ್ಚರಿ: ಬಿಜೆಪಿಯ ಮಂಗಲಾ ಅಂಗಡಿ ಒಟ್ಟು 4,40,327 ಮತಗಳನ್ನು ಪಡೆದರೆ, ಕಾಂಗ್ರೆಸ್ನ ಸತೀಶ ಜಾರಕಿಹೊಳಿ 4,35,087 ಮತಗಳನ್ನು ಪಡೆದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದರು. ಬಿಜೆಪಿಯ ಭಾರೀ ಮುನ್ನಡೆಗೆ ಮುಳುವಾದ ಮಹಾರಾಷ್ಟ ಏಕೀಕಿರಣ ಸಮಿತಿ ಮತ್ತು ಶಿವಸೇನೆ ಬೆಂಬಲಿತ ಅಭ್ಯರ್ಥಿ ಶುಭಂ ಶೇಳಕೆ 1,17,174 ಮತಗಳನ್ನು ಪಡೆಯುವ ಮೂಲಕ ಅಚ್ಚರಿಗೆ ಕಾರಣವಾದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಎಂ ಇ ಎಸ್ ಬೆಂಬಲಿತ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಸವದತ್ತಿ, ರಾಮದುರ್ಗ, ಅರಭಾವಿ ಮತ್ತು ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿತು. ಆದರೆ ಬಹಳ ನಿರೀಕ್ಷೆ ಮಾಡಿದ್ದ ಗೋಕಾಕ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರಗಳಲ್ಲಿ ಅತ್ಯಧಿಕ ಮತಗಳ ಮುನ್ನಡೆ ಗಳಿಸುವ ಮೂಲಕ ಮಂಗಲಾ ಅಂಗಡಿ ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದರು.
ಬೆಳಿಗ್ಗೆ ಅಂಚೆ ಮತಗಳ ಎಣಿಕೆಯಿಂದ ಮುನ್ನಡೆ ಆರಂಭಿಸಿದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮಧ್ಯಾಹ್ನ 1 ಗಂಟೆಯವರೆಗೆ ತಮ್ಮ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಮುನ್ನಡೆಯ ಅಂತರ ಮಾತ್ರ 12 ಸಾವಿರ ದಾಟಿರಲಿಲ್ಲ. ಆಗ ಬೆಳಗಾವಿ ದಕ್ಷಿಣ, ಬೈಲಹೊಂಗಲ, ಗೋಕಾಕ, ಬೆಳಗಾವಿ ಉತ್ತರ ಆಗ ಬಿಜೆಪಿ ಕೈ ಹಿಡಿದಿದ್ದವು. 40 ಸುತ್ತುಗಳ ನಂತರ ರಾಜಕೀಯ ಚಿತ್ರಣ ಬದಲಾಯಿತು. ಅದುವರೆಗೆ ಬರೀ ಹಿನ್ನಡೆಯನ್ನೇ ನೋಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮತ್ತು ಪಕ್ಷದ ಕಾರ್ಯಕರ್ತರ ಮುಖದಲ್ಲಿ ಮೊದಲ ಬಾರಿಗೆ ನಗು ಕಂಡಿತು. ಅಲ್ಲಿಂದ 79 ನೇ ಸುತ್ತಿನವರೆಗೆ ಅವರು ಮುನ್ನಡೆ ಬಿಟ್ಟುಕೊಡಲಿಲ್ಲ. ಮಧ್ಯಾಹ್ನ 2.30 ರ ವೇಳೆಗೆ ಲಭ್ಯವಾದ ಮಾಹಿತಿ ಪ್ರಕಾರ ಸತೀಶ ಜಾರಕಿಹೊಳಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಅರಭಾವಿ, ಬೈಲಹೊಂಗಲ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಸವದತ್ತಿ ಹಾಗೂ ರಾಮದುರ್ಗ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.
ಮಂಗಲಾ ಅಂಗಡಿ ಕೇವಲ ಗೋಕಾಕ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಬೆಂಬಲಿತ ಅಭ್ಯರ್ಥಿ ಶುಭಂ ಶೇಳಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದರು.
ಬದಲಾದ ಚಿತ್ರ: ಸತೀಶ ಜಾರಕಿಹೊಳಿ ಮುನ್ನಡೆ ಪಡೆದಿದ್ದರೂ ಅದು ಗೆಲುವಿಗೆ ಸಾಕಾಗಲಿಲ್ಲ. 79ನೇ ಸುತ್ತಿನ ಮತಗಳ ಎಣಿಕೆ ನಂತರ ಫಲಿತಾಂಶದ ಚಿತ್ರವೇ ಬದಲಾಯಿತು. ಸತೀಶ ಜಾರಕಿಹೊಳಿ ಅವರ ಮುನ್ನಡೆ 2000ದಿಂದ ಒಮ್ಮೆಲೇ 400ಕ್ಕೆ ಇಳಿಯಿತು. ಇಲ್ಲಿಂದ ಅವರ ಸೋಲಿನ ಸುಳಿವು ಸ್ಪಷ್ಟವಾಯಿತು. ಆನಂತರ ನಡೆದಿದ್ದು ಸಂಪೂರ್ಣ ಮಂಗಲಾ ಅಂಗಡಿ ಅವರ ಆಟ. ಕೊನೆಯ ಆರು ಸುತ್ತುಗಳಲ್ಲಿ ಎಲ್ಲ ಅಡೆತಡೆಗಳನ್ನು ದಾಟಿದ ಮಂಗಲಾ ಅಂಗಡಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದರು. ಅಷ್ಟೇ ಅಲ್ಲ ತಮ್ಮ ಸೋಲಿನ ಆತಂಕವನ್ನು ಗೆಲುವಿನ ನಗೆಯಲ್ಲಿ ಬದಲಾಯಿಸಿಕೊಂಡರು.
ಮಂಗಲಾ ಅಂಗಡಿ ಅವರ ಜಯದಲ್ಲಿ ಹೆಚ್ಚು ನೆರವು ನೀಡಿದ್ದು ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತದಾರರು. ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲ ತಮ್ಮ ಪಕ್ಷ ನಿಷ್ಠೆಯನ್ನು ಮುಂದುವರಿಸಿದರೆ, ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅನುಪಸ್ಥಿತಿಯಲ್ಲೂ ಕ್ಷೇತ್ರದ ಜನರು ತಮ್ಮ ಮನೆ ಮಗಳು ಮಂಗಲಾ ಅಂಗಡಿ ಪರವಾಗಿ ನಿಂತು ಹೆಚ್ಚು ಮುನ್ನಡೆ ದೊರಕಿಸಿಕೊಟ್ಟರು. ಗೋಕಾಕದಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಬಿಜೆಪಿಗೆ ಸಿಕ್ಕಿತು. ಅದೇ ರೀತಿ ಬೆಳಗಾವಿ ದಕ್ಷಿಣದಲ್ಲಿ ಸಹ 20 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಸಿಕ್ಕಿದ್ದು ಮಂಗಲಾ ಅವರ ಗೆಲುವಿಗೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ