ಗೋಕಾಕ ಚಳವಳಿ ಕಿಚ್ಚು ಹೊತ್ತಿಸಿದ ಬೆಳಗಾವಿ ನೆಲ
ನಾಡು-ನುಡಿಗೆ ನಡೆದ ಚಳವಳಿಗೆ 40ರ ಸಂಭ್ರಮ
Team Udayavani, May 16, 2022, 4:11 PM IST
ಬೆಳಗಾವಿ: ಕರ್ನಾಟಕದಲ್ಲಿ ನಾಡು, ನುಡಿ ಮತ್ತು ಗಡಿಯ ಪರವಾದ ಚಳವಳಿಗಳ ಚರ್ಚೆ ಬಂದಾಗಲೆಲ್ಲ ನಾವು ಗೋಕಾಕ ಚಳವಳಿಯನ್ನು ನೆನಪಿಸಿಕೊಳ್ಳುತ್ತೇವೆ. ಅಂತೆಯೇ ರಾಜ್ಯಾದ್ಯಂತ ಕನ್ನಡಿಗರನ್ನು ಬಡಿದೆಬ್ಬಿಸಿದ ಮತ್ತು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸಾವಿರಪಟ್ಟು ಹೆಚ್ಚಿಸಿದ ಈ ಚಳವಳಿಗೆ ಈಗ 40 ವರ್ಷ.
1982, ಮೇ 16ರಂದು ಕನ್ನಡದ ವರನಟ ಡಾ.ರಾಜಕುಮಾರ ಅವರು ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ರಾಜ್ಯವ್ಯಾಪಿ ಕನ್ನಡದ ಕಿಚ್ಚನ್ನು ಹೊತ್ತಿಸಿದರು. ರಾಜ್ಯ ಭಾಷೆಯ ಬಗ್ಗೆ ರಾಜ್ಯದ ಜನತೆಯಲ್ಲಿ ಸಂಚಲನ ಮೂಡಿಸಿದ ಈ ಚಳವಳಿಯೇ ಇಂದಿನ ಎಲ್ಲ ಕನ್ನಡ ಪರ ಚಳವಳಿಗಳ ಮೂಲ ಬೇರು ಎಂದು ಆಗ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸ್ಮರಿಸಿಕೊಂಡಿದ್ದಾರೆ.
ಮಾಧ್ಯಮಿಕ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ಹೇಗಿರಬೇಕು ಎಂಬ ಬಗ್ಗೆ ಅಧ್ಯಯನ ನಡೆಸಲು ಅಂದಿನ ಮುಖ್ಯಮಂತ್ರಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ 1980, ಜು.5ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣರಾವ್ ಗೋಕಾಕ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತು.
ಈ ಗೋಕಾಕ ಸಮಿತಿಯು ರಾಜ್ಯವ್ಯಾಪಿ ಸಂಚರಿಸಿ ಸರ್ಕಾರಕ್ಕೆ ವರದಿ ನೀಡಿತು. ಆದರೆ ಕನ್ನಡಕ್ಕೆ ಮೊದಲ ಸ್ಥಾನ ನೀಡಬೇಕೆಂಬ ಗೋಕಾಕರ ವರದಿಯನ್ನು ಒಪ್ಪಲು ಸರ್ಕಾರ ಮೀನಮೇಷ ಎಣಿಸಿತು. ಈ ನಿಲುವನ್ನು ವಿರೋಧಿಸಿ ಧಾರವಾಡದಲ್ಲಿ ಹಿರಿಯ ಸಾಹಿತಿಗಳು ಸಂಶೋಧಕ ಡಾ.ಶಂಬಾ ಜೋಶಿ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭಿಸಿದರು. ಆದರೆ ಸರ್ಕಾರ ಬಗ್ಗಲಿಲ್ಲ. ಈ ಹಂತದಲ್ಲಿಯೇ ಪಾಟೀಲ ಪುಟ್ಟಪ್ಪ ಮತ್ತಿತರರು ರಾಜಕುಮಾರ ಅವರನ್ನು ಚಳವಳಿಯ ನೇತೃತ್ವ ವಹಿಸಿಕೊಳ್ಳಲು ಆಹ್ವಾನಿಸಿದರು. ಈ ಆಹ್ವಾನ ಸ್ವೀಕರಿಸಿ ಕನ್ನಡಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎಂದು ಘೋಷಿಸಿದ ರಾಜ್ ಅವರು ಬೆಳಗಾವಿಯಿಂದಲೇ ತಮ್ಮ ಆಂದೋಲನ ಆರಂಭಿಸಿದರು.
1982, ಮೇ 15ರಂದು ಸಂಜೆ ರಾಜಕುಮಾರ ಹಾಗೂ ಅವರ ತಂಡ ಬೆಳಗಾವಿಗೆ ಆಗಮಿಸಿತು. ಹಳೆಯ ಗಾಂಧಿನಗರದ ಸೇತುವೆ ಬಳಿ ಅವರನ್ನು ಡಾ|ಚಿದಾನಂದ ಮೂರ್ತಿ ಹಾಗೂ ರಾಘವೇಂದ್ರ ಜೋಶಿ ಸ್ವಾಗತಿಸಿದರು. ಆಗ ನನ್ನಂಥ ಯುವಕರು ಕನ್ನಡ ಚಳವಳಿ ಪ್ರವೇಶಿಸಿದ್ದೇ ಈ ಗೋಕಾಕ ಚಳವಳಿಯಿಂದ ಎಂದು ಅಶೋಕ ಚಂದರಗಿ ಆಗಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮೇ 16ರಂದು ಮುಂಜಾನೆ ಬೆಳಗಾವಿಯ ಕಾಲೇಜು ರಸ್ತೆಯ ಸನ್ಮಾನ ಹೋಟೆಲ್ ಹಿಂದಿದ್ದ ಬಯಲಿನಲ್ಲಿ (ಈಗ ಗಾಂಧಿ ಭವನ ಕಟ್ಟಲಾಗಿದೆ) ಸಹಸ್ರಾರು ಜನರನ್ನುದ್ದೇಶಿಸಿ ರಾಜಕುಮಾರ ಮಾತನಾಡಿದರು. ಬೆಳಗಾವಿಯಿಂದ ಆರಂಭವಾದ ಆಂದೋಲನ ಯಾತ್ರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಿತು. ರಾಜ್ ಹೋದಲ್ಲೆಲ್ಲ ಸಾವಿರಾರು ಜನರು ಸೇರತೊಡಗಿದರು. ಸವದತ್ತಿ ಸಹಿತ ಅನೇಕ ಕಡೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ರಾಜಕುಮಾರ ಅವರ ಜತೆಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ರಾ.ಯ. ಧಾರವಾಡಕರ, ಆರ್.ಸಿ.ಹಿರೇಮಠ, ಬಸವರಾಜ ಕಟ್ಟೀಮನಿ, ರಾಮ ಜಾಧವ ಮೊದಲಾದವರಿದ್ದರು.
ಗೋಕಾಕ ಚಳವಳಿಗೆ ರಾಜ್ಯದಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗತೊಡಗಿದಾಗ ಗುಂಡೂರಾವ್ ಸರ್ಕಾರ ಎಚ್ಚೆತ್ತುಕೊಂಡಿತು. ರಾಜಕುಮಾರ ಹಾಗೂ ಇತರ ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸಿತು. ವರದಿಯ ಜಾರಿಗೆ ಸಮ್ಮತಿಸಿತು. ಮಾಧ್ಯಮಿಕ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನಕ್ಕೆ ವರದಿಯು ಸೀಮಿತವಾಗಿದ್ದರೂ ಗೋಕಾಕ ಚಳವಳಿಯು ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಸಿತು. 1983ರಲ್ಲಿ ಅಧಿಕಾರಕ್ಕೆ ಬಂದ ಮೊಟ್ಟಮೊದಲ ಕಾಂಗ್ರೆಸ್ಸೇತರ ಜನತಾ ಪಕ್ಷದ ಸರ್ಕಾರದ ನಾಯಕ ರಾಮಕೃಷ್ಣ ಹೆಗಡೆ ಅವರು ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿ ರಚಿಸಿದರು. ಇದರ ಮೊದಲ ಅಧ್ಯಕ್ಷರಾಗಿ ಪಕ್ಷೇತರ ಶಾಸಕ ಸಿದ್ದರಾಮಯ್ಯ ಅವರು ನೇಮಕಗೊಂಡರು.
1985ರಲ್ಲಿ ಜನತಾ ಪಕ್ಷದ ಸರ್ಕಾರವೇ ಮರಳಿ ಅಧಿಕಾರಕ್ಕೆ ಬಂದಾಗ ಪಾಟೀಲ ಪುಟ್ಟಪ್ಪ ಅಧ್ಯಕ್ಷರಾದರು. ಗೋಕಾಕ ಚಳವಳಿಯು ಕರ್ನಾಟಕ ಕಂಡ ಐತಿಹಾಸಿಕ ಚಳವಳಿಯಾಗಿತ್ತು. ನಾಡಿನಾದ್ಯಂತ ಕನ್ನಡ ಪರ ಸಂಘಟನೆಗಳು ಬೆಳೆದು ನಿಲ್ಲಲು ಈ ಚಳವಳಿಯೇ ಪ್ರೇರಣೆ ಎನ್ನಬಹುದು. ಇದರಲ್ಲಿ ಭಾಗವಹಿಸಿದ ಅನೇಕರು ರಾಜ್ಯದ ರಾಜಕೀಯದಲ್ಲಿ ಸ್ಥಾನಮಾನಗಳನ್ನು ಪಡೆದರೆಂಬುದು ಗಮನಾರ್ಹ ಸಂಗತಿ ಎಂದು ಚಂದರಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ
Belagavi; ಸೋಲಿನ ಭಯದಿಂದ ಮೃಣಾಲ್ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ
MUST WATCH
ಹೊಸ ಸೇರ್ಪಡೆ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ