ದೀಪಾವಳಿ ಎಂಬ ಹಟ್ಟಿಹಬ್ಬ
Team Udayavani, Oct 27, 2019, 12:37 PM IST
ಬೆಳಕಿನ ಹಬ್ಬ ದೀಪಾವಳಿ ಇಡೀ ದೇಶದ ತುಂಬೆಲ್ಲಾ ಎಲ್ಲಾ ವರ್ಗದ ಮತ್ತು ಎಲ್ಲಾ ಸಮುದಾಯದ ಜನರು ವಿಭಿನ್ನವಾಗಿ ಆಚರಿಸುವ ಚೆಂಬೆಳಕಿನ ಹಬ್ಬ. ಕತ್ತಲೆ ಕಳೆದು ಜೀವನಕ್ಕೆ ಹೊಸ ಬೆಳಕು ತುಂಬುವ ಸಂಕೇತವಾಗಿ ಆಚರಿಸುವ ಈ ಸಂಭ್ರಮದ ಹಬ್ಬ ಕರ್ನಾಟಕದ ಪಾಲಿಗೆ ದೀಪಾವಳಿ ಎಂದಾದರೆ ಉತ್ತರ ಕರ್ನಾಟಕದ ಪಾಲಿಗೆ ಹೆಚ್ಚಾನು ಹೆಚ್ಚು ಹಟ್ಟಿ ಹಬ್ಬ.
ಹೌದು, ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬಕ್ಕೆ ಹಟ್ಟಿಹಬ್ಬ ಎಂದು ಕರೆಯುವ ಸಂಪ್ರದಾಯ ರೂಢಿಗತವಾಗಿ ಬಂದಿದೆ. ಈ ಭಾಗದ ಜನರಿಗೆ ದೀಪಾವಳಿ ಬರೀ ದೀಪಗಳನ್ನು ಬೆಳಗುವ ಹಬ್ಬವಷ್ಟೇ ಅಲ್ಲ ಮತ್ತು ಜನರಷ್ಟೇ ಆಚರಿಸಿ ಸಂಭ್ರಮಿಸುವ ಹಬ್ಬವಷ್ಟೇಯಾಗಿ ಉಳಿದಿಲ್ಲ. ಬದಲಿಗೆ ಇಲ್ಲಿ ಜನರು ಮತ್ತು ಜಾನುವಾರುಗಳಿಬ್ಬರೂ ಸಂಭ್ರಮದಿಂದ ಆಚರಿಸುವ ಹಟ್ಟಿಹಬ್ಬವಾಗಿ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಅನಾವರಣಕ್ಕೆ ಮುಖ್ಯಭೂಮಿಕೆಯಾಗಿ ನಿಂತಿದೆ. ಮನೆಗಳಿಗೆ ಸುಂದರವಾಗಿ ಕಾಣುವಂತೆ ಸುಣ್ಣಬಣ್ಣ ಬಳಿದು ಸಿಂಗರಿಸುವುದು ಈ ಹಬ್ಬದ ಮೊದಲ ವಿಶೇಷ.
ಇದ ಶತಮಾನಗಳಿಂದಲೂ ಈ ಭಾಗದಲ್ಲಿ ನಡೆದು ಬಂದಿರುವ ಪದ್ಧತಿ. ಆದರೆ ಮನೆಯಲ್ಲಿ ತಮ್ಮಂತೆಯೇ ತಮ್ಮ ವ್ಯವಸಾಯದಲ್ಲಿ ಗೆಳೆಯರಾಗಿ ದುಡಿಯುವ ಎತ್ತು,ಆಕಳು, ಎಮ್ಮೆಗಳಿಗೂ ಇಲ್ಲಿ ವಿಶೇಷ ಪೂಜೆ, ಅಲಂಕಾರ ಎಲ್ಲವೂ ನಡೆಯುತ್ತದೆ. ಜೊತೆಗೆ ಜಾನುವಾರುಗಳನ್ನು ಕಟ್ಟುವ ಹಟ್ಟಿ (ಹಕ್ಕಿ)ಗೂ ಅಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಬಸವಣ್ಣನ ಪೂಜೆ : ಜಾನುವಾರುಗಳು ರೈತ ಸಮುದಾಯದ ಸಂಗಾತಿಗಳು. ಅದರಲ್ಲೂ ಹೊಲ ಉಳುಮೆ ಮಾಡುವ ಎತ್ತುಗಳು ರೈತನ ಮಕ್ಕಳಿದ್ದಂತೆ. ಅಷ್ಟೊಂದು ಭಾವನಾತ್ಮಕ ಸಂಬಂಧವನ್ನು ಈ ಭಾಗದ ರೈತ ಕುಟುಂಬಗಳು ತಮ್ಮ ಎತ್ತಿನೊಂದಿಗೆ ಇಟ್ಟುಕೊಂಡಿರುತ್ತವೆ. ಇಡೀ ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ರೈತರೊಂದಿಗೆ ವರ್ಷವಿಡೀ ಹಗಲು ರಾತ್ರಿ ಎನ್ನದೇ ದುಡಿಯುವ ಎತ್ತು, ಎಮ್ಮೆ, ಆಕಳು ಕರುವಿಗೂ ವರ್ಷದಲ್ಲಿ ಒಂದು ದಿನವಾದರೂ ಸಂಭ್ರಮ ಮತ್ತು ಆರಾಧನೆ ಸಿಕ್ಕಬೇಕು ಎನ್ನುವ ಪರಿಕಲ್ಪನೆಯಲ್ಲಿ ಹಟ್ಟಿಹಬ್ಬ ನಡೆಯುತ್ತದೆ. ಜಾನುವಾರುಗಳನ್ನು ಕಟ್ಟುವ ಹಟ್ಟಿಯನ್ನು ಸ್ವತ್ಛಗೊಳಿಸಿ, ಶೃಂಗರಿಸಿ, ಪೂಜೆ ಮಾಡಿ ಅದಕ್ಕೂ ತಮ್ಮ ಧ್ಯೇಯ ನಿಷ್ಠೆಯನ್ನು ಸಲ್ಲಿಸುವ ರೈತರು ದೀಪಾವಳಿಯ ದಿನದಂದೇ ಹಟ್ಟಿಪೂಜೆ ಮಾಡಿ ಅಂದೇ ಜಾನುವಾರುಗಳನ್ನು ಶೃಂಗರಿಸಿ ಪೂಜೆ ಸಲ್ಲಿಸುತ್ತಾರೆ.
ಎತ್ತುಗಳನ್ನು ಬಸವಣ್ಣನ ಸ್ವರೂಪ ಎಂದೇ ಇಲ್ಲಿ ಪೂಜಿಸಲಾಗುತ್ತದೆ. ಹೀಗಾಗಿ ಹಟ್ಟಿಹಬ್ಬಕ್ಕೆ ಅವುಗಳಿಗೆ ಹೊಸ ಜೂಲ್, ಕೊಡೆಂಚು, ಗೆಜ್ಜೆಸರ, ಕೊರಳಿಗೆ ಹೂವಿನ ಮಾಲೆ, ಬಲೂನುಗಳು, ಕರಿದಾರ, ಹಣೆಕಟ್ಟು, ಮಿಂಚುವ ಬಟ್ಟೆ ಹಾಕಿ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ಮೆರವಣಿಗೆಯಲ್ಲಿ ಒಬ್ಬರಿಗಿಂತ ಒಬ್ಬರ ಎತ್ತುಗಳ ಸಿಂಗಾರ ಹೆಚ್ಚಿರುವಂತೆ ಪೈಪೋಟಿಯೂ ಉಂಟು. ಇನ್ನು ಕೊಡಿಗೆ ಕೋಡುಬಳೆ ತಿನಿಸು ಮಾಡಿ ಹಾಕಿ ಗಮನ ಸೆಳೆಯುವ ಪದ್ಧತಿಯೂ ಇದೆ. ಕೆಲ ಗ್ರಾಮಗಳಲ್ಲಿ ಎತ್ತುಗಳ ಕಾದಾಟವನ್ನು ಕೂಡ ನೋಡಬಹುದು. ವಿಶೇಷವಾಗಿ ಅಂದು ಕಾದಾಟಕ್ಕೆ ಸಜ್ಜುಗೊಂಡ ಹೋರಿಗಳನ್ನು ನಾಲ್ಕು ತಿಂಗಳ ಮುಂಚೆಯೇ ಮೇಯಿಸಿ, ಕಾದಾಟಕ್ಕೆ ಸಜ್ಜುಗೊಳಿಸಲಾಗುತ್ತದೆ. ಅಂತಹ ಕಾದಾಟ ನೋಡುವುದು ಒಂದು ರೋಮಾಂಚನವೇ.
ಹಟ್ಟಿಲಕ್ಕಮ್ಮನ ಪೂಜೆ : ಇನ್ನು ಜಾನುವಾರು ಕಟ್ಟುವ ಹಟ್ಟಿಯನ್ನು ದೀಪಾವಳಿಗೆ ಸ್ವಚ್ಛಗೊಳಿಸಿ ಅಂದು ಇಡೀ ಹಟ್ಟಿಯಲ್ಲಿನ ಸಗಣಿಯನ್ನ ಎತ್ತಿಟ್ಟು, ಅಲ್ಲಿಯೇ ಪಾಂಡವರು-ಕೌರವರ ಸೈನ್ಯವನ್ನು ನಿರ್ಮಿಸುವ ಪದ್ಧತಿಯೂ ಇದೆ. ಕೋಟೆ ಕಟ್ಟಿ ಕೋಟೆಗೆ ಬಾಗಿಲು ಬರೆದು, ಸಗಣಿಯ ಹಟ್ಟೆವ್ವಳ್ಳನ ಕೂರಿಸುವ ಸಂಪ್ರದಾಯವಿದ್ದು, ಮನೆಯ ಎಲ್ಲಾ ಬಾಗಿಲುಗಳಿಗೂ ಅಂದು ಹಟ್ಟೆವ್ವ ಕುಳಿತಿರುತ್ತಾಳೆ. ಅವಳ ತಲೆಯ ಮೇಲೆ ಹೂವು, ಮಾಣಿಕಡ್ಡಿ, ಉತ್ತರಾಣಿ ಕಡ್ಡಿಗಳನ್ನು ಸಿಲುಕಿಸಿ ಇಡಲಾಗುತ್ತದೆ. ಇನ್ನು ಒಕ್ಕಲುತನದ ಮನೆತನಗಳು ದೀಪಾವಳಿ ವರೆಗೂ ಹೊಲದಲ್ಲಿನ ಪೈರಿನ ಒಕ್ಕಲು ಮಾಡಿರುವುದಿಲ್ಲ. ಹೀಗಾಗಿ ದೀಪಾವಳಿಯ ದಿನವೇ ಧಾನ್ಯ ಒಕ್ಕುವುದಕ್ಕೆ ಅಗತ್ಯವಾದ ಮೇಟಿಯನ್ನ ಕಡೆದು ತಂದು ಅದನ್ನು ಕೂಡ ಹಟ್ಟಿಯಲ್ಲಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಇನ್ನು ಕಟ್ಟಿಯಲ್ಲಿ ಒನಕೆ ಪೂಜಿಸುವ ಸಂಪ್ರದಾಯವೂ ಉಂಟು. ಮೂರು ದಿನಗಳ ಹಬ್ಬವಾಗಿರುವ ದೀಪಾವಳಿಯನ್ನು ರೈತರು ಕೂಡ ಮೂರು ದಿನವೇ ಆಚರಿಸಿದರೂ ಮೊದಲ ದಿನ ನೀರು ತುಂಬುವ ಹಬ್ಬ. ಎರಡನೇ ದಿನ ಹಟ್ಟಿಯ ಹಬ್ಬ, ಮೂರನೇ ದಿನ ದೀಪಾವಳಿಯನ್ನಾಗಿ ಆಚರಿಸುತ್ತಾರೆ.
ತರಾವರಿ ತಿಂಡಿ-ತಿನಿಸು : ಇನ್ನು ಹಟ್ಟಿಹಬ್ಬಕ್ಕೆ ಪುಂಡಿಪಲ್ಯ,ಕುಚ್ಚಿದಕಾರ ಇರಲೇಬೇಕು. ಇದರ ಜೊತೆ, ಹೋಳಗಿ, ಕಡಬು, ಹುಗ್ಗಿ ಸಿಹಿ ಪದಾರ್ಥಗಳು ಒಂದಡೆಯಾದರೆ, ಕೋಡಬಳೆ, ಚಕ್ಕುಲಿ ಖಾರ ತಿನಿಸು ಇರಲೇಬೇಕು. ಒಟ್ಟಿನಲ್ಲಿ ಮೂರು ತರಾವರಿ ದೇಶಿ ತಿಂಡಿ ತಿನಿಸುಗಳ ಸುಖವನ್ನು ಗ್ರಾಮೀಣರು ಹಟ್ಟಿಹಬ್ಬದ ನೆಪದಲ್ಲಿ ಸವಿಯುತ್ತಾರೆ.
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ