ಹಾನಿ: ದಾಳಿಂಬೆ ತೋಟ ನಾಶಪಡಿಸಿದ ರೈತ
Team Udayavani, Jul 10, 2021, 7:05 PM IST
ಅಥಣಿ: ಕೊರೊನಾ ನಂತರ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೋಗಬಾಧೆಗೆ ಸಿಲುಕಿದ ಎರಡು ಎಕರೆ ದಾಳಿಂಬೆ ತೋಟವನ್ನು ತಾಲೂಕಿನ ಆಜೂರ ಗ್ರಾಮದ ರೈತ ಕೈಯ್ನಾರೆ ನಾಶಪಡಿಸಿದ ಘಟನೆ ನಡೆದಿದೆ.
ಆಜೂರ ಗ್ರಾಮದ ಯುವ ರೈತ ನವನಾಥ ಮಾನೆ ಎಂಬುವರು ತಾವು ಬೆಳೆದ ಎರಡು ಎಕರೆ ದಾಳಿಂಬೆಯನ್ನು ಕೊಡಲಿಯಿಂದ ಕಡಿದು ನಾಶಪಡಿಸುತ್ತಿದ್ದಾರೆ. ಇದಕ್ಕೆ ಹವಾಮಾನ ವೈಪರಿತ್ಯ ಪ್ರಮುಖ ಕಾರಣವಾಗಿದೆ. ಹತೋಟಿಗೆ ಬಾರದ ಚುಕ್ಕಿ ರೋಗ, ಕ್ಯಾರ ರೋಗ, ಬೆಂಕಿರೋಗದಂತಹ ರೋಗಬಾಧೆಯಿಂದ ನಷ್ಟ ಸಂಭವಿಸಿ ರೈತ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.
ಎರಡು ಎಕರೆ ದಾಳಿಂಬೆ ಬೆಳೆಯಲು ಕನಿಷ್ಠ ಮೂರರಿಂದ ನಾಲ್ಕು ಲಕ್ಷ ರೂ.ಸಾಲ ಮಾಡಿರುವ ಯುವ ರೈತ ನವನಾಥ ಸತತ ಆರು ವರ್ಷಗಳಿಂದ ಗಿಡಗಳನ್ನು ಪೋಷಿಸಿ, ಪ್ರತಿವರ್ಷವೂ ನಷ್ಟ ಸಂಭವಿಸಿದ ಬೆನ್ನಲ್ಲೇ ಈ ನಿರ್ಧಾರ ಮಾಡಿ ತೋಟವನ್ನು ನಾಶ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಒಣಬೇಸಾಯ ಹೆಚ್ಚಾಗಿರುವುದರಿಂದ ಈ ಭಾಗದ ರೈತರು ದಾಳಿಂಬೆ ಬೆಳೆಗೆ ಆಕರ್ಷಿತರಾಗಿ ಈ ಬೆಳೆಯಿಂದ ಮೈತುಂಬ ಸಾಲ ಮಾಡಿಕೊಂಡವರೇ ಹೆಚ್ಚಾಗಿದ್ದಾರೆ. ಯುವ ರೈತ ನವನಾಥ ಹಾಗೂ ತಾಲೂಕಿನ ದಾಳಿಂಬೆ ಬೆಳೆದ ರೈತರು ಸರ್ಕಾರ ಪರಿಹಾರ ಪ್ಯಾಕೇಜ್ ನೀಡುವಂತೆ ಆಗ್ರಹಿಸಿದ್ದಾರೆ.