ಹೊಲಾ ಕಸಕೊಂಡ್ರ ಹೊಟ್ಟಿಗಿ ಏನ ಮಣ್ಣ ತಿನ್ನೋದು?
•ಒಂದೊಂದು ಕುಟುಂಬಕ್ಕೆ ಇರೋದು 5-10 ಗುಂಟೆ ಹೊಲ •ಹೊಲ ಇಲ್ಲಾ ಅಂದ್ರ ಭಿಕ್ಷಾ ಬೇಡೋ ಪರಿಸ್ಥಿತಿ
Team Udayavani, Jun 11, 2019, 7:28 AM IST
ಬೆಳಗಾವಿ: ಹಲಗಾ ಗ್ರಾಮದ ಹೊಲದಲ್ಲಿ ಎಸ್ಟಿಪಿಗಾಗಿ ಭೂಮಿ ವಶಪಡಿಸಿಕೊಂಡು ನೆಲ ಸಮಗೊಳಿಸುತ್ತಿರುವುದು.
ಬೆಳಗಾವಿ: ಇರೋ ಒಂದ ಎಕರೆ ಹೊಲದಾಗ ನಾಲ್ಕೈದು ಜನ ಅಣ್ತಮ್ಮಂದಿರಿಗೆ ಹಂಚಿ ಹೋಗಿರೋ ಹೊಲ ಉಳಿದಿದ್ದು ಒಬ್ಬೊಬ್ಬರಿಗೆ ಎಂಟೋ ಹತ್ತ ಗುಂಟೆ. ಇಂಥಾ ಸ್ಥಿತಿಯೊಳಗ ಇದ್ದ ಹೊಲಾ ಕಸಕೊಂಡ್ರ ಮುಂದ ನಾವ ಹೊಟ್ಟಿಗಿ ಏನ್ ತಿನ್ನೋದು. ಹೊಲಾ ಹೋತಂದ್ರ ಕಲ್ಲ, ಮಣ್ಣ ತಿನ್ನೋ ಗತಿ ಬರತೈತಿ. ಇದೆಲ್ಲ ಸರ್ಕಾರದಾವರಿಗೆ ಯಾಕ ಗೊರ್ತ ಆಗವಾಲ್ತು ಅಂತೀವಿ.
ನಗರದಿಂದ ಅತೀ ಸಮೀಪದಲ್ಲಿರುವ ಹಾಗೂ ಸುವರ್ಣ ವಿಧಾನಸೌಧ ಮುಂಭಾಗದ ಹಲಗಾ ರೈತರ ಗೋಳಿದು. ಹಲಗಾ ಗ್ರಾಮದ 19 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್ಟಿಪಿ)ಕ್ಕಾಗಿ ಭೂಮಿ ಬಿಟ್ಟು ಕೊಡದಿರಲು ರೈತರು ನಿರ್ಧರಿಸಿದ್ದಾರೆ. ಇದ್ದ ಹೊಲ ಕಸಿದುಕೊಂಡರೆ ಮುಂದಿನ ನಮ್ಮ ಪೀಳಿಗೆಯ ಬದುಕು ಸಾಗುವುದು ಹೇಗೆ ಎಂಬ ಪ್ರಶ್ನೆ ಮರಾಠಿ ಮಿಶ್ರಿತ ಕನ್ನಡದಲ್ಲಿಯೇ ಕೇಳುತ್ತಿದ್ದಾರೆ ಇಲ್ಲಿಯ ರೈತರು.ಬಂಗಾರ ಬೆಳೆಯೋ ಹೊಲಕ್ಕ ಕನ್ನ: ವರ್ಷಕ್ಕ ಮೂರ್ನಾಲ್ಕ ಬೆಳಿ ಕೊಡೋ ಈ ಹೊಲ ಬಿಟ್ಟು ಕೊಡಾಕ ನಾವ ಒಪ್ಪೊದಿಲ್ಲ. ನಮಗ ಗೊತ್ತ ಇಲ್ಲದಂಗ ಸರ್ಕಾರದವರು ಕಬ್ಜಾ ಮಾಡ್ಕೊಳ್ಳಾಕ ಹತ್ತ್ಯಾರ. ಒಂದ ಮನ್ಯಾಗ ಒಂದೊಂದ ಕುಟುಂಬಕ್ಕ ಐದೋ, ಆರ್ ಗುಂಟೆ ಹೊಲ ಐತಿ. ಇಷ್ಟರೊಳಗ ಕುಟುಂಬ ಸಾಗಸೊದೈತಿ. ಈ ಹೊಲಕ್ಕ ಬಂಗಾರ ಬೆಳೆಯೋ ಅಷ್ಟ ತಾಕತ್ತ ಐತಿ. ವರ್ಷಕ್ಕ ನಾವ ಸಾಸಿವಿ, ಗೋಧಿ, ಭತ್ತ, ಚನ್ನಂಗಿ ಅಂತ ಮೂರ್ನಾಲ್ಕ ಬೆಳಿ ತೆಗಿತೀವಿ. ಆದ್ರ ಹೊಲಾನ ಹ್ವಾದ್ರ ಬೆಳೆಯೊದ ಎಲ್ಲಿಂದ, ಹೊಟ್ಟಿಗಿ ತಿನ್ನೋದ ಏನ್ ಎಂದು ಕಣ್ಣೀರು ಸುರಿಸಿದರು ಹಲಗಾ ಗ್ರಾಮದ ರೈತ ಗುಂಡು ಹೆಬ್ಟಾಜಿ.
ಹೆಬ್ಟಾಜಿ ಕುಟುಂಬಕ್ಕೆ ಒಟ್ಟು 1 ಎಕರೆ ಜಮೀನು ಇದೆ. ಇದರಲ್ಲಿ ನಾಲ್ವರು ಸಹೋದರರಿದ್ದು, ಎಲ್ಲರಿಗೂ ಹಂಚಿ ಹೋದರೆ ಕೇವಲ 10 ಗುಂಟೆ ಜಮೀನು ಪಾಲಾಗಿದೆ. ಗುಂಡು ಹೆಬ್ಟಾಜಿ, ಸದು ಹೆಬ್ಟಾಜಿ, ಕಲ್ಲಪ್ಪ ಹೆಬ್ಟಾಜಿ ಹಾಗೂ ಪರುಶರಾಮ ಹೆಬ್ಟಾಜಿ ಕುಟುಂಬದಲ್ಲಿದ್ದಾರೆ. ಒಟ್ಟಾರೆ 25ರಿಂದ 30 ಜನರ ಈ ಕುಟುಂಬ ಈ ಹೊಲದಿಂದಲೆ ಬದುಕು ಸಾಗಿಸುತ್ತಿದೆ. ಇಂಥದರಲ್ಲಿ ಜಮೀನು ವಶಕ್ಕೆ ಪಡೆದುಕೊಂಡರೆ ಮುಂದಿನ ಪೀಳಿಗೆ ಮಾಡುವುದಾದರೂ ಏನು. ನೌಕರಿ, ಉದ್ಯೋಗ ಇಲ್ಲದಿರುವ ಈ ಕುಟುಂಬಕ್ಕೆ ಈ ಜಮೀನೇ ಆಸರೆ. ಹೀಗಾಗಿ ಜಮೀನು ಬಿಟ್ಟು ಕೊಡಲು ರೈತರು ಸುತಾರಾಂ ಒಪ್ಪುತ್ತಿಲ್ಲ.ಎಸ್ಟಿಪಿಗೆ ಜಾಗ ಕೊಡಲ್ಲ: ಇದೇ ಗ್ರಾಮದ ದೇವಲತಕರ ಎಂಬ ಕುಟುಂಬಕ್ಕೆ ಒಟ್ಟು 1 ಎಕರೆ 5 ಗುಂಟೆ ಜಮೀನಿದೆ. ಇದರಲ್ಲಿ ಶಂಕರ ದೇವಲಕರ, ಗೋಪಾಲ ದೇವಲತಕರ, ನಾಗಪ್ಪ ದೇವಲತಕರ ಸೇರಿದಂತೆ ಐವರು ಸಹೋದರರು. ಇದರಲ್ಲಿ ತಲಾ ಒಬ್ಬರಿಗೆ 10 ಗುಂಟೆ ಬರುತ್ತದೆ. ಹೀಗಿರುವಾಗ ಹೊಲ ಹೋದರೆ ಭವಿಷ್ಯದ ಚಿಂತೆ ಮಾಡುತ್ತಿರುವ ಈ ಕುಟುಂಬದವರು, ನಮ್ಮ ಜಮೀನು ನಮಗೆ ಬಿಟ್ಟು ಬೇರೆ ಎಲ್ಲಾದರೂ ತಮ್ಮ ಯೂನಿಟ್ ಸ್ಥಾಪಿಸಿಕೊಳ್ಳಲಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಹೊಟ್ಟಿ ತುಂಬಿಸಿಕೊಳ್ಳೋದ ಕಷ್ಟಾ ಆಗಿರುವಾಗ ಈ ದಿನಮಾನದಾಗ ರೈತರ ಹೊಟ್ಟಿ ಮ್ಯಾಲ ಕಲ್ಲ ಹಾಕೋದು ಸರಿ ಅಲ್ಲ. ಒಂದ ವ್ಯಾಳೆ ಈ ಹೊಲ ಹೋತ ಅಂದ್ರ ನಮ್ಮ ಸಂಸಾರ ನಾಶ ಆಗತೈತಿ. ತುತ್ತ ಕೂಳಿಗೆ ಗತಿ ಇಲ್ಲದಂಗ ಆಗತೈತಿ. ಈಗ ಇದ್ದ ಹೊಲದಾಗ ನಾವ ಗೆಳೆ ಹೊಡದ, ನಾಟಿ ಮಾಡಿ ಬೆಳೆ ತಗದ ಹೊಟ್ಟಿ ತುಂಬ ಉಣ್ಣಾಕತ್ತೀವಿ. ಇದ ಇಲ್ಲ ಅಂದ್ರ ಭಿಕ್ಷಾ ಬೇಡೋ ಪರಸ್ಥಿತಿ ಬರೋದ ಗ್ಯಾರಂಟಿ. ಹಿಂಗಾಗಿ ನಮ್ಮ ಹೊಲ ನಮಗೆ ಇರಲಿ. ನೀವ ಬ್ಯಾರೆ ಕಡೆ ಜಾಗ ನೋಡ್ಕೊರಿ ಎಂದು ಆಕ್ರೋಶದ ಮಾತುಗಳನ್ನಾಡುತ್ತಾರೆ ರೈತ ಸುರೇಶ ಕಾನೋಜಿ, ಮಾರುತಿ ಕಾನೋಜಿ, ಕೇದಾರಿ ಕಾನೋಜಿ ಹಾಗೂ ಶಾಮರಾವ ಕಾನೋಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Nomination: ನಾಮಪತ್ರ ಸಲ್ಲಿಸಿದ ಜಗದೀಶ್ ಶೆಟ್ಟರ್, ಬಿಎಸ್ ವೈ, ಗೋವಾ ಸಿಎಂ ಭಾಗಿ