ಜೂ.4ರಂದು ರೈತರ ಪ್ರತಿಭಟನೆ; ಕಬ್ಬು ಬೆಳೆಗಾರರ 1 ಸಾವಿರ ಕೋಟಿ ರೂ. ಬಾಕಿ ಕೊಡಿ
Team Udayavani, May 29, 2019, 4:37 PM IST
ಬೆಳಗಾವಿ: ರೈತರ ಕಬ್ಬಿನ ಬಾಕಿ ಬಿಲ್ ಗಾಗಿ ಜೂ.4 ರಂದು ಬೆಂಗಳೂರಿನ ವಿಧಾನಸೌಧ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 67 ಸಕ್ಕರೆ ಕಾರ್ಖಾನೆಗಳಿಂದ 3,000 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಇದೆ. ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಆಯುಕ್ತರಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನೆಯಾಗಿಲ್ಲ ಎಂದು ದೂರಿದರು.
ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 1,000 ಕೋಟಿ ರೂ. ಕಬ್ಬಿನ ಬಾಕಿ ಬಿಲ್ ನೀಡಬೇಕು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ರಾಜಕೀಯ ಮುಖಂಡರ ಹಿಡಿತದಲ್ಲಿವೆ. ಈ ಮುಖಂಡರು ಅಧಿಕಾರದಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಕಾರ್ಖಾನೆಗಳು ಈಗಾಗಲೇ ಶೇ.80 ರಷ್ಟು ಸಾಲ ಪಡೆದುಕೊಂಡಿವೆ. ಆದರೆ, ಆ ಹಣದಲ್ಲಿ ಕಬ್ಬಿನ ಬಾಕಿ ಬಿಲ್ ನೀಡುತ್ತಿಲ್ಲ. ಆದ್ದರಿಂದ ಸರಕಾರ ಸೂಕ್ತ ಕ್ರಮಕೈಗೊಂಡು ಬಾಕಿ ಬಿಲ್ ನೀಡಬೇಕು ಎಂದು ಒತ್ತಾಯಿಸಿದರು.