ಸಿದ್ದುರಾಮಯ್ಯ ಅವರನ್ನು ಬಿಜೆಪಿಗೆ ಶೀಘ್ರ ಕರೆ ತರುತ್ತೇನೆ : ರಮೇಶ ಜಾರಕಿಹೊಳಿ
ದಿನೇಶ, ವೇಣುಗೋಪಾಲ ತಮ್ಮ ಸ್ಥಾನದಲ್ಲಿ ಇರಲು ಯೋಗ್ಯರಲ್ಲ
Team Udayavani, Dec 5, 2019, 7:34 PM IST
ಬೆಳಗಾವಿ : ಸಿದ್ದರಾಮಯ್ಯ ಅವರನ್ನು ಶೀಘ್ರವೇ ಬಿಜೆಪಿಗೆ ಕರೆ ತರುತ್ತೇನೆ ಎಂದು ರಮೇಶ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಗೋಕಾಕದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ದ ವೈಯಕ್ತಿಕ ಟೀಕೆ ಮಾಡಿಲ್ಲ. ಎದುರಾಳಿಗಳ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಮುಂದೊಂದು ದಿನ ಅವರನ್ನು ಬಿಜೆಪಿಗೆ ಕರೆ ತರುತ್ತೇನೆ. ಮುಂದೆ ನಮ್ಮ ಅಳಿಯ ಅಂಬಿರಾವ್ ಅವರನ್ನು ಸತೀಶ ಇಲ್ಲವೇ ಲಖನ್ ಜಾರಕಿಹೊಳಿ ವಿರುದ್ಧ ನಿಲ್ಲಿಸುತ್ತೇನೆ. ಆಗ ಅವರಿಬ್ಬರೂ ಚುನಾವಣೆ ಎದುರಿಸಲಿ. ಈ ಉಪಚುನಾವಣೆಯಲ್ಲಿ ನಾವು ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ. ಒಂದು ಕ್ಷೇತ್ರದಲ್ಲಿ ಸ್ವಲ್ಪ ಕಷ್ಟ ಇದೆ. ಅಲ್ಲಿ ನಮ್ಮವರು ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ. ದಿನೇಶ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷನಾಗಲು ನಾಲಾಯಕ್. ಅವರಿಗೆ ಪಕ್ಷ ಮುನ್ನಡೆಸುವ ಸಾಮರ್ಥ್ಯ ಇಲ್ಲ. ದಿನೇಶ ಹಾಗೂ ಕೆ.ಸಿ.ವೇಣುಗೋಪಾಲ ತಮ್ಮ ಸ್ಥಾನದಲ್ಲಿ ಇರಲು ಯೋಗ್ಯರಲ್ಲ ಎಂದರು.