ಗೋಕಾಕಗೆ ಲಖನ್ ಬಹುತೇಕ ಖಚಿತ: ಸತೀಶ
Team Udayavani, Aug 2, 2019, 5:24 AM IST
ಬೆಳಗಾವಿ: ಗೋಕಾಕ ಕ್ಷೇತ್ರಕ್ಕೆ ಕಾಂಗ್ರೆಸ್ನ ಲಖನ್ ಜಾರಕಿಹೊಳಿ ಮಾತ್ರ ಆಕಾಂಕ್ಷಿಯಾಗಿದ್ದಾರೆ. ಆದರೆ, ಮುಂದೆ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ನೋಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ರಾಜೀನಾಮೆ ಕೊಟ್ಟಿರುವ ಶಾಸಕರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಶುರುವಾಗಿದೆ. ಗೋಕಾಕದಲ್ಲಿ ಲಖನ್ ಒಬ್ಬರೇ ಇದ್ದಾರೆ. ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಲ್ಲಿ 2-3 ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಅದು ಅಂತಿಮಗೊಳ್ಳಲಿದೆ. ನಿರ್ದೇಶನ ಏನು ಬರುವುದೋ ಕಾದು ನೋಡಬೇಕು ಎಂದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಅತೃಪ್ತರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಹೊರ ಹೋದ ಮೇಲೆ ಕಾಂಗ್ರೆಸ್ ಬಗ್ಗೆ ಏನೇ ಆರೋಪ ಮಾಡಿ ದರೂ ಅದು ಮುಗಿದ ಅಧ್ಯಾಯ. ಅನರ್ಹ ಶಾಸಕರು ನೀಡುವ ಹೇಳಿಕೆಗಳನ್ನು ನಾವು ಗಂಭೀರವಾಗಿ ಪರಿಗಣಿ ಸುವುದಿಲ್ಲ ಎಂದು ಹೇಳಿದರು. ‘ವಸ್ತು’ ವಿನ ಬಗ್ಗೆ ಸಮಯ ಬಂದಾಗ ಹೇಳುವುದಾಗಿ ಮತ್ತೆ ಪುನರುಚ್ಚರಿಸಿದರು.