3 ತಿಂಗಳ ವೇತನ ಆಶಾಕಾರ್ಯಕರ್ತರಿಗೆ ನೀಡಿದ ಶಾಸಕ ಗಣೇಶ ಹುಕ್ಕೇರಿ
Team Udayavani, May 2, 2021, 7:15 PM IST
ಚಿಕ್ಕೋಡಿ: ಕೊರೊನಾ ನಿರ್ವಹಣೆಗಾಗಿ ಶಾಸಕರ 1 ತಿಂಗಳ ವೇತನ ಹಾಗೂ ಸಚಿವರ 1 ವರ್ಷದ ಸಂಬಳವನ್ನು ಕೋವಿಡ್ ಪರಿಹಾರ ನಿಧಿ ಗೆ ನೀಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ತಮ್ಮ ಮೂರು ತಿಂಗಳ ವೇತನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಶಾಸಕ ಗಣೇಶ್ ಹುಕ್ಕೇರಿ, ಕೋವಿಡ್ ಪರಿಹಾರ ನಿಧಿಗೆ 1 ತಿಂಗಳ ವೇತನ ಹಾಗೂ ಮುಂದಿನ ಮೂರು ತಿಂಗಳ ವೇತನವನ್ನು ತಮ್ಮ ಕ್ಷೇತ್ರದ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ನೀಡುವುದಾಗಿ ತಿಳಿಸಿದ್ದಾರೆ.
ಮೇ 1ರ ಕಾರ್ಮಿಕ ದಿನಾಚರಣೆ ಶುಭಾಶಯ ಹೇಳಿದ ಅವರು, ಕೊರೊನಾ ಮಹಾಮಾರಿ ಹೊಡೆದೋಡಿಸಲು ಹಲವಾರು ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವ ಕಾರ್ಮಿಕರಲ್ಲಿ ನಮ್ಮ ಆಶಾ ಕಾರ್ಯಕರ್ತರ ಪಾತ್ರ ಮುಖ್ಯವಾದದ್ದು. ಆರೋಗ್ಯ, ನೈರ್ಮಲ್ಯದ ಬಗ್ಗೆ ಸಮುದಾಯಕ್ಕೆ ತಿಳಿವಳಿಕೆ ನೀಡುವುದರಿಂದ ಹಿಡಿದು ಕ್ಷೇತ್ರದ ನಾಗರಿಕರಿಗೆಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವವರೆಗೂ ಹಲವಾರು ಜವಾಬ್ದಾರಿ ವಹಿಸುವ ಇವರ ಕಾರ್ಯ ಶ್ಲಾಘನೀಯ. ಹೀಗಾಗಿ ಕಾರ್ಯಕರ್ತರಿಗೆ ನನ್ನ ಒಂದು ಪುಟ್ಟ ಕಾಣಿಕೆ ಎಂದು ತಿಳಿಸಿದ್ದಾರೆ.