ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ
Team Udayavani, Jan 22, 2022, 11:14 AM IST
ಬೆಳಗಾವಿ: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗಾಗಿ ಶೇ. 5ರಷ್ಟು ಲಂಚ ಕೇಳಿದ್ದ ಬೆಳಗಾವಿಯ ಮುಜರಾಯಿ ಇಲಾಖೆ ತಹಶೀಲ್ದಾರ್ ಹಾಗೂ ಇವರ ಸಂಬಂಧಿಯನ್ನು ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ)ದ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
ಮುಜರಾಯಿ ತಹಶೀಲ್ದಾರ ದಶರಥ ನಕುಲ ಜಾಧವ ಹಾಗೂ ಸಂಬಂಧಿ ಸಂತೋಷ ಕಡೋಲಕರ ಬಂಧಿತರು.
ರಾಮದುರ್ಗದ ಶ್ರೀ ಯಕಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯ ಆರಾಧನಾ ಸ್ಕೀಂ ಅಡಿಯಲ್ಲಿ ರೂ.4 ಲಕ್ಷ ಮಂಜೂರಾಗಿತ್ತು. ಅನುದಾನ ಬಿಡುಗಡೆಗಾಗಿ ನಕುಲ ಜಾಧವ ಅವರು ರೂ.20 ಸಾವಿರ ಬೇಡಿಕೆ ಇಟ್ಟಿದ್ದರು.
ಲಂಚದ ವಿಚಾರಕ್ಕೆ ಸಂಬಂಧಪಟ್ಟಂತೆ ದೇವಸ್ಥಾನದ ಸುಭಾಷ ಘೋಡಕೆ ಎಂಬವರು ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ತಹಶೀಲ್ದಾರ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಆತನ ಸಂಬಂಧಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದ್ದಾರೆ. ಬಳಿಕ ಇದೇ ಪ್ರಕರಣದಲ್ಲಿ ತಹಶೀಲ್ದಾರ ಜಾಧವ ಅವರನ್ನೂ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:ಡಿಸಿಸಿ ಬ್ಯಾಂಕ್ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ
ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದರು.