ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ
Team Udayavani, Jul 9, 2018, 6:25 AM IST
ಬೆಳಗಾವಿ: ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿ
ಬಜೆಟ್ ಮಂಡಿಸಲಾಗಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಇದನ್ನು ಸರಿಯಾಗಿ ಓದಿದರೆ ಅರ್ಥವಾಗುತ್ತದೆ. ಬಜೆಟ್ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಪತ್ರ ಬರೆದಿದ್ದಾರೆ
ಎನ್ನುವುದು ನನಗೆ ಗೊತ್ತಿಲ್ಲ. ಆ ಪತ್ರವನ್ನು ನಾನು ಓದಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿಸುತ್ತೇನೆ. ಒಂದು ವೇಳೆ ಅನ್ಯಾಯವಾಗಿದ್ದರೆ ಎಲ್ಲರೂ ಕೂಡಿ ಚರ್ಚೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಕೆಲವು ಬೇಡಿಕೆಯನ್ನು ಬಜೆಟ್ ಪ್ರತಿ ಮುದ್ರಣವಾದ ಬಳಿಕ ಕೇಳಲಾಗಿದೆ. ಹೀಗಾಗಿ ಅಲ್ಲಿ ಆ ಸೌಲಭ್ಯಗಳು ಸಿಕ್ಕಿಲ್ಲ. ಪೂರಕ ಬಜೆಟ್ನಲ್ಲಿ ಏನು ಬೇಕೋ ಅದನ್ನು ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.
ಅಖಂಡ ಕರ್ನಾಟಕ ಉದಯವಾಗಲು ಅನೇಕರು ಪ್ರಾಣ ತ್ಯಾಗ ಮಾಡಿ ಬಲಿದಾನ ಮಾಡಿದ್ದಾರೆ. ಅನೇಕರ ಬಲಿದಾನವನ್ನು ನಾವು ನೆನಪಿಡಬೇಕಾಗಿದೆ. ಅಖಂಡ ಕರ್ನಾಟಕಕ್ಕೆ ನನ್ನ ಬೆಂಬಲವಿದೆ ಎಂದರು.