ಮನಿ ಅಷ್ಟ ಅಲ್ಲ, ಜೀವನಾನ ಮುಳಗೈತ್ರಿ
•ಮುಳುಗಡೆ ಸಂತ್ರಸ್ತರ ಕಣ್ಣೀರಿನ ಕತೆ•ಶಾಶ್ವತ ಪರಿಹಾರಕ್ಕಾಗಿ ಅಂಗಲಾಚಿದ ನಿರಾಶ್ರಿತರು
Team Udayavani, Aug 6, 2019, 12:29 PM IST
ಬೆಳಗಾವಿ: ಅಥಣಿ ತಾಲೂಕಿನ ರಡ್ಡೇರಹಟ್ಟಿಯಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸುತ್ತಿರುವ ಅಧಿಕಾರಿಗಳು.
ಬೆಳಗಾವಿ: ಮನಿ, ಮಠಾ ಕಳಕೊಂಡ ಬಂದೇವಿ. 15 ವರ್ಸದಿಂದ ತಲಿ ಮ್ಯಾಲ ಸೂರ ಕೊಡದ ಗಿಲಿಟಿನ ಮಾತ ಹೇಳ್ಕೊಂತ ಬಂದಾರ, ಮನಿ ಕಟ್ಟಿ ಕೋಡ ಅಂದ್ರ ಯಾರೂ ಇತ್ತ ಬರಂಗಿಲ್ಲ, ಪತ್ರಾಸ ಮನ್ಯಾಗ ಇದ್ದೂ ಇಲ್ಲದಂಗ ಆಗೈತಿ. ಮನಿ ಅಷ್ಟ ಅಲ್ಲ ನಮ್ಮ ಜೀವನಾನ ಮುಳಗೈತಿ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಬಂದು ಮನೆಗಳು ಮುಳುಗಡೆ ಆಗಿದ್ದರಿಂದ ರಡ್ಡೇರಹಟ್ಟಿ ಗ್ರಾಮದ ಹೊರ ವಲಯದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಪ್ರವಾಹ ಸಂತ್ರಸ್ತರ ನಿರ್ವಹಣಾ ಕೇಂದ್ರದಲ್ಲಿರುವ ಪಿ.ಕೆ.ನಾಗನೂರ ಗ್ರಾಮದ ನಿರಾಶ್ರಿತರ ಆಕ್ರೋಶದ ಮಾತುಗಳಿವು.
ಎಲೆಕ್ಷನ್ ಬಂದಾಗ ವೋಟ್ ಕೇಳಾಕ ಬಂದ ಹೋದಾವರು ಮಳಿಬಂದಾಗ ಅಷ್ಟ ಬರ್ತಾರ. 15 ವರ್ಸದಿಂದ ಪ್ರತಿ ವರ್ಸ ಇದ ಆಗೈತಿ. ತಲಿಗಿ ಸೂರಿಲ್ಲ, ಕಾಲಿಗಿ ಜಾಗ ಇಲ್ಲದಂತ ಪರಸ್ಥಿತಿ ನಮ್ಮದಾಗೈತಿ. ಯಾನರೇ ವ್ಯವಸ್ಥಾ ಮಾಡಿದ್ರ ಬದಕತೀವಿ ಎಂದು ನಿರಾಶ್ರಿತರು ಕಣೀ¡ರು ಸುರಿಸಿದರು.
2005ರಲ್ಲಿ ಪ್ರವಾಹ ಬಂದು ಪಿ.ಕೆ. ನಾಗನೂರ ಗ್ರಾಮದ ನದಿ ತೀರದಲ್ಲಿ ಅನೇಕ ಕುಟುಂಬಗಳು ಮನೆ ಕಳೆದುಕೊಂಡಿವೆ. ಆಗ ಜಿಲ್ಲಾಡಳಿತ ತಾತ್ಕಾಲಿಕವಾಗಿ ತಗಡಿನ ಶೆಡ್ಗಳನ್ನು ನಿರ್ಮಿಸಿ ಕೊಟ್ಟಿದೆ. ಈಗ ಈ ಶೆಡ್ಗಳು ವಾಸಕ್ಕೆ ಯೋಗ್ಯವಿಲ್ಲ. ಹೀಗಾಗಿ ಶಾಶ್ವತವಾಗಿ ಜಾಗ ಕೊಟ್ಟು ಮನೆ ನಿರ್ಮಿಸಿ ಕೊಡುವಂತೆ ನಿರಾಶ್ರಿತರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರು.
15 ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆಗಳು ಮುಳುಗಡೆ ಆಗಿವೆ. ಈ ಭಾಗದ ಎಲ್ಲ ಕುಟುಂಬಗಳು ಬೀದಿ ಪಾಲಾಗಿವೆ. ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಇಲ್ಲದೇ ಬದುಕುವುದು ಕಷ್ಟಕರವಾಗಿದೆ. ಅಧಿಕಾರಿಗಳು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಡುತ್ತಾರೆ. ಮನೆಗಾಗಿ ಅಂಗಲಾಚಿದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ನಿರಾಶ್ರಿತ ಮಹಿಳೆ ಸುವರ್ಣಾ ಕಾಂಬಳೆ ಆರೋಪಿಸಿದರು.
2005ರಿಂದಲೂ ಮಳೆ ಬಂದಾಗ ಸಮಸ್ಯೆ ಅನುಭವಿಸುತ್ತಿರುವ ಈ ಕುಟುಂಬಗಳು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಕೇವಲ ತಾತ್ಕಾಲಿಕ ಭರವಸೆ ನೀಡುತ್ತಿದ್ದಾರೆ. ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳು ಮುಳುಗಡೆ ಆಗುತ್ತಿವೆ. ಈ ವರ್ಷವೂ ಕೆಲ ಮನೆಗಳು ಮುಳುಗಡೆ ಆಗಿದ್ದರಿಂದ ಮತ್ತೆ ಸಮಸ್ಯೆ ತಲೆದೋರಿದೆ. ಹೀಗಾಗಿ ಸಮೀಪದ ಸಂತ್ರಸ್ತರ ನಿರ್ವಹಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ನದಿ ತೀರದ ಜನರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ನದಿ ನೀರಿನ ಮಟ್ಟ ಇಳಿಯುವುದು ಸದ್ಯಕ್ಕಂತೂ ಕಷ್ಟವಿದೆ. ಅಲ್ಲಿಯವರೆಗೆ ಜಿಲ್ಲಾಡಳಿತ ಸಂತ್ರಸ್ತರ ನಿರ್ವಹಣಾ ಕೇಂದ್ರಗಳನ್ನು ತೆರೆದಿದೆ. ಮುಳುಗಡೆಯಾದ ಮನೆಗಳಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಬಂದಿರುವ ಸಂತ್ರಸ್ತರು ಇನ್ನು ಕೆಲವೊಂದನ್ನು ಅಲ್ಲಿಯೇ ಬಿಟ್ಟು ಬಂದಿದ್ದಾರೆ.
ಸಂತ್ರಸ್ತರ ನಿರ್ವಹಣಾ ಕೇಂದ್ರದಲ್ಲಿ ಚಿಕ್ಕಚಿಕ್ಕ ಮಕ್ಕಳು ಕೂಡ ಕಂಡು ಬಂದರು. ನಾಗರ ಪಂಚಮಿ ರಜೆ ಇದ್ದಿದ್ದರಿಂದ ಶಾಲಾ ಮಕ್ಕಳು ಕೇಂದ್ರದಲ್ಲಿಯೇ ಇದ್ದರು. ಮಧ್ಯಾಹ್ನ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಅಥಣಿ ತಾಲೂಕಿನ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದ ನೀರು ಇಳಿದ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಅಧಿಕಾರಿಗಳು ಅಭಯ ನೀಡಿದ್ದಾರೆ.
ಕಣ್ಣೆದುರೇ ಜಾಗವಿದ್ದರೂ ಸೂರಿಲ್ಲ: ಕೃಷ್ಣಾ ನದಿ ನೀರಿನ ಪ್ರವಾಹದಿಂದ ಮುಳುಗಡೆಯಾಗುವ ಮನೆಗಳ ಕುಟುಂಬಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ರಡ್ಡೇರಹಟ್ಟಿ ಗ್ರಾಮದ ಬಳಿ 80 ಎಕರೆ ಜಾಗ ಗುರುತಿಸಿ ನಿವೇಶನ ನಿರ್ಮಾಣ ಮಾಡಿದೆ. ಆದರೆ ಇನ್ನೂವರೆಗೆ ಆ ನಿವೇಶನಗಳು ಸಂತ್ರಸ್ತರಿಗೆ ಹಂಚಿಕೆ ಆಗಿಲ್ಲ. ಜತೆಗೆ ಜಾಗವನ್ನು ಗುರುತಿಸಿ ಹಕ್ಕು ಪತ್ರಗಳನ್ನೂ ನೀಡಿಲ್ಲ. ಹೀಗಾಗಿ ಕಣ್ಣೆದುರೇ ಜಾಗವಿದ್ದರೂ ಇನ್ನೂ ಸಂತ್ರಸ್ತರಿಗೆ ಹಂಚಿಕೆ ಮಾಡಿಲ್ಲ. ರಡ್ಡೇರಹಟ್ಟಿ ಪಕ್ಕದಲ್ಲಿ 2005ರಲ್ಲಿ ನಿರ್ಮಾಣವಾದ ತಗಡಿನ ಶೆಡ್ ಗಳಲ್ಲಿಯೇ ವಾಸಿಸುತ್ತಿದ್ದು, ಈ ತಾತ್ಕಾಲಿಕ ಶೆಡ್ಗಿಂತ ಶಾಶ್ವತ ಸೂರಿಗಾಗಿ ಜನರ ಆಗ್ರಹವಾಗಿದೆ.
ನಾಗನೂರ ಪಿ.ಕೆ. ಊರ ಹೊರಗಿನ ಅಡಿವ್ಯಾಗಿನ ಮನಿಗೋಳೆಲ್ಲ ನೀರಾಗ ಮುನಿಗ್ಯಾವ. ಸೊಸಿ ಹೊಟ್ಟಿಲೇ ಇದಾಳ. ಮನಿಗೆಲ್ಲ ನೀರ ಬಂದ ಮ್ಯಾಲ ಓಡೋಡಿ ಇಲ್ಲಿ ಬಂದೇವ. ಸೊಸಿನ ತವರ ಮನಿಗಿ ಕಳಿಸೇವ. ಪ್ರತಿ ಸಲಾ ಹಿಂಗ್ ಆದ್ರ ಬದಕೋದ ಹೆಂಗ. ಅಧಿಕಾರಿಗೋಳ ಬರೋದು, ಹೋಗೋದು ಮಾಡದ ನಮಗ ಮನಿ ಕೊಡಬೇಕ.ಥಂಡ್ಯಾಗ ಜೀವನಾ ಮುಂದ ದೂಡೋದ ಅಂದ್ರ ಆಗವಾಲ್ತು. ಯಪ್ಪಾರ ನಮಗ ಸೂರ ಕೊಡಸ್ರಿ.•ಕುಸುಮಾ ಕಾಂಬಳೆ, ರಡ್ಡೇರಹಟ್ಟಿ ನಿರಾಶ್ರಿತ ಮಹಿಳೆ
•ಬೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್