ಶೀಘ್ರ ಕೌಜಲಗಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ
ಹದಗೆಟ್ಟ ರಸ್ತೆಗಳನ್ನು ಈಗಾಗಲೇ ಸುಧಾರಣೆ ಮಾಡಲಾಗುತ್ತಿದೆ.
Team Udayavani, Mar 19, 2022, 6:29 PM IST
ಗೋಕಾಕ: ರೈತರಿಗೆ ದಿನನಿತ್ಯ ಕನಿಷ್ಠ 10 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಅಂದಾಜು ನೂರು ಕೋಟಿ ವೆಚ್ಚದಲ್ಲಿ ಕೌಜಲಗಿಯಲ್ಲಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಸಂಜೆ ತಾಲೂಕಿನ ಗೋಸಬಾಳ ಗ್ರಾಮದ ಹೊರವಲಯದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ 15 ಕೋಟಿ ರೂ. ವೆಚ್ಚದಲ್ಲಿ ಗೋಸಬಾಳದಲ್ಲಿ ನೂತನವಾಗಿ ನಿರ್ಮಿಸಲಾದ 110/11 ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಇನ್ನು ಮುಂದೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕೌಜಲಗಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇಷ್ಟರಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಕೃಷಿಕರಿಗೆ ಕನಿಷ್ಠ 10 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದು ಅವರು ಹೇಳಿದರು.
ಕುಲಗೋಡ ಮತ್ತು ಮಮದಾಪೂರ 110/11 ಕೆವ್ಹಿ ಉಪಕೇಂದ್ರದ ಮೇಲಿನ ವಿದ್ಯುತ್ ಸಂಪರ್ಕದ ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಗೋಸಬಾಳ-ಕೌಜಲಗಿ ಭಾಗದ ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಗೋಸಬಾಳದಲ್ಲಿ 110/11 ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ಲೋಕಾರ್ಪಣೆ ಮಾಡಲಾಗಿದೆ.
ಗೋಸಬಾಳ, ಕಳ್ಳಿಗುದ್ದಿ, ಹೊನಕುಪ್ಪಿ, ಮನ್ನಿಕೇರಿ, ಮೀರಾಳ ತೋಟ, ನಿಂಗಾಪೂರ, ಸಜ್ಜಿಹಾಳ, ಬಿಲಕುಂದಿ, ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ಈಗಿರುವ 11 ಕೆವ್ಹಿ ವಿದ್ಯುತ್ ಮಾರ್ಗಗಳ ಉದ್ದವು ಕಡಿಮೆಯಾಗುವುದರಿಂದ ಗೋಸಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ.
ಇದರಿಂದ ಭವಿಷ್ಯದ ವಿದ್ಯುತ್ ಭಾರವನ್ನು ನಿಭಾಯಿಸಬಹುದಾಗಿದೆ. ಅಲ್ಲದೇ ಕುಲಗೋಡ ಮತ್ತು ಮಮದಾಪೂರ ಗ್ರಾಮಗಳಲ್ಲಿನ 110/11 ಕೆವ್ಹಿ ವಿದ್ಯುತ್ ಕೇಂದ್ರಗಳ ಮೇಲಿನ ಭಾರವು ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಗೋಸಬಾಳದಲ್ಲಿ 110/11 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣದಿಂದ ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಗೃಹ ಬಳಕೆ ಮತ್ತು ನೀರಾವರಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಉಪಯುಕ್ತವಾಗಲಿದೆ. ಈಗಾಗಲೇ
ತಿಗಡಿ, ಹಳ್ಳೂರ ಮತ್ತು ಅರಳಿಮಟ್ಟಿ ಗ್ರಾಮಗಳಲ್ಲಿನ 33/11 ಕೆವ್ಹಿ ವಿದ್ಯುತ್ ಉಪಕೇಂದ್ರಗಳನ್ನು 110/11 ಕೆವ್ಹಿ ಉಪಕೇಂದ್ರಗಳನ್ನಾಗಿ ಮೇಲ್ದರ್ಜೆ ಗೇರಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
ಗೋಸಬಾಳ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಸಾರ್ವಜನಿಕರ ಬೇಡಿಕೆಯಂತೆ ಸರ್ಕಾರಿ ಪ್ರೌಢ ಶಾಲೆ ಆರಂಭಕ್ಕೆ ಯತ್ನಿಸಲಾಗುವುದು. ಹದಗೆಟ್ಟ ರಸ್ತೆಗಳನ್ನು ಈಗಾಗಲೇ ಸುಧಾರಣೆ ಮಾಡಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಗೋಸಬಾಳ ಗ್ರಾಪಂ ಅಧ್ಯಕ್ಷೆ ಅಶೆವ್ವ ಡಬರಿ, ಜಿಪಂ ಮಾಜಿ ಸದಸ್ಯರಾದ ವಿಠuಲ ಸವದತ್ತಿ, ಡಾ.ರಾಜೇಂದ್ರ ಸಣ್ಣಕ್ಕಿ, ಪರಮೇಶ್ವರ ಹೊಸಮನಿ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ನಿರ್ದೇಶಕ ಎಂ.ಆರ್. ಭೋವಿ, ಗುತ್ತಿಗೆದಾರ ರಾಜೇಂದ್ರ ದೇಸಾಯಿ, ಮುಖಂಡರಾದ ಬಾಳಪ್ಪ ಬುಳ್ಳಿ, ಬಸವಂತ ಕೋಣಿ, ಲಕ್ಷ್ಮಣ ನೀಲನ್ನವರ, ಶಿವಲಿಂಗ ಬಳಿಗಾರ, ಸತ್ತೆಪ್ಪ ಹೊಸಟ್ಟಿ, ರವಿ ಪರುಶೆಟ್ಟಿ, ಬಸನಗೌಡ ಪಾಟೀಲ, ಸುಭಾಸ ಹಾವಾಡಿ, ಎಂ.ಐ. ನೀಲನ್ನವರ, ಲಕ್ಷ್ಮಣ ಚಂದರಗಿ, ಬಾಳಪ್ಪ ಗೌಡರ, ಮುದಕಪ್ಪ ಗೋಡಿ, ಬಸು ಕಪರಟ್ಟಿ, ಶಿವು ಲೋಕನ್ನವರ, ಕಾರ್ಯನಿರ್ವಾಹಕ ಅಭಿಯಂತರಾದ ಸಂತೋಷಕುಮಾರ ವೈ.ಕೆ, ಶಿವಾಜಿ ಖರೆ, ಪಿ.ಬಿ. ಪಾಟೀಲ, ಎಇಇಗಳಾದ ದಿನೇಶ ಬಿರಡೆ, ಆರ್.ಎಸ್. ಲೋಹಾರ, ಸಹಾಯಕ ಅಭಿಯಂತರರಾದ ವಿನಾಯಕ ಮೋರೆ, ಎಮ್ ನ ಸೀಮ ಕುಂದಗೋಳ, ಘಟಪ್ರಭಾ ಹೆಸ್ಕಾಂ ಇಇ ನಿಂಗನಗೌಡ ಮೂಡಲಗಿ, ಗೋಕಾಕ ಎಇಇ ಸುಭಾಸ ವರಾಳೆ, ಮೂಡಲಗಿ ಎಇಇ ಎಂ.ಎಸ್. ನಾಗನ್ನವರ, ಘಟಪ್ರಭಾ ಎಇಇ ಮಹೇಶ ಬಾಗಡಿ, ಕೆಪಿಟಿಸಿಎಲ್ ಘಟಪ್ರಭಾ ಎಇಇ ಸುರೇಶ ಮುರಗೋಡ ಹಾಗೂ ರೈತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್