ಬೆಳಗಾವಿ : ಬಳ್ಳಾರಿ ನಾಲೆಯಿಂದ ರೈತರ ಕಣ್ಣೀರು ಕಪಾಳಕ್ಕೆ
ಈ ನಾಲೆ ರೈತರಿಗೆ ವರವಾಗುವುದು ಯಾವಾಗ? ನಾಲೆಯ ಹೂಳು ತೆಗೆದು ಅಗಲೀಕರಣಕ್ಕಾಗಿ ಒತ್ತಾಯ
Team Udayavani, Sep 24, 2021, 2:40 PM IST
ಭೈರೋಬಾ ಕಾಂಬಳೆ
ಬೆಳಗಾವಿ: ಭಾರೀ ಮಳೆ ಬಂತೆಂದರೆ ಇಕ್ಕಟ್ಟಾದ ಬಳ್ಳಾರಿ ನಾಲೆಗೆ ಗ್ರಹಣ ಹಿಡಿಯುವುದಂತೂ ನಿಶ್ಚಿತ. ಇಕ್ಕಟ್ಟಾಗಿದ್ದರಿಂದ ನೀರು ಮುಂದೆ ಸರಾಗವಾಗಿ ಹರಿಯದೇ ಸುತ್ತಲಿನ ಹೊಲಗಳಿಗೆ ನೀರು ನುಗ್ಗಿ ಪ್ರತಿ ವರ್ಷ ರೈತರು ಕಷ್ಟ ಅನುಭವಿಸುವುದಂತೂ ತಪ್ಪಿಲ್ಲ. ಬೆಳಗಾವಿಯಿಂದ ಹಿಡಿದು ಹುದಲಿವರೆಗಿನ ನಾಲೆಯ ಪಕ್ಕದ ರೈತರ ನೋವು ಹೇಳತೀರದಾಗಿದೆ. ಬಳ್ಳಾರಿ ನಾಲೆ ಪ್ರತಿ ವರ್ಷ ರೈತರ ಪಾಲಿಗೆ ವರವಾಗದೇ ಶಾಪವಾಗಿದೆ.
ಪ್ರವಾಹ ಬಂತೆಂದರೆ ಸುತ್ತಲಿನ ಹೊಲಗಳಿಗೆ ನೀರು ನುಗ್ಗಿ ಬೆಳೆದ ಬೆಳೆ ಕೈಗೆ ಸಿಗದೇ ಸರ್ವನಾಶ ಆಗುತ್ತದೆ. ಇಕ್ಕಟ್ಟಾಗಿದ್ದರಿಂದ ನಾಲೆಯ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇದರಿಂದ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗುತ್ತಿದೆ.
ಪ್ರವಾಹದಿಂದ ಭಾರೀ ಸಂಕಷ್ಟ: 2019 ಹಾಗೂ 2021ರಲ್ಲಿ ಅಪ್ಪಳಿಸಿದ ನೆರೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಆದರೆಈಬೆಳೆ ಪರಿಹಾರ ರೈತರ ಕೈಗೆ ಸಿಗುವುಷು ಅಷ್ಟಿಟ್ಟು ಮಾತ್ರ. ಇದರಿಂದ ಕಂಗಾಲಾಗಿರುವ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಭತ್ತ, ಗೋಧಿ, ತರಕಾರಿ, ಕಾಡು-ಕಳಿ ಬೆಳೆಯುವ ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. 2013ರಿಂದಲೂ ಈ ಭಾಗದ ರೈತರು ನಾಲೆಯ ಹೂಳು ತೆಗೆದು ಅಗಲೀಕರಣ ಮಾಡುವಂತೆ ಮನವಿ ಮಾಡಿದರೂ ಇನ್ನೂವರೆಗೆ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸುತ್ತಿಲ್ಲ. ಪ್ರತಿ ವರ್ಷಬಳ್ಳಾರಿನಾಲೆಗೆ ಹರಿದು ಬರುವ ಕೊಳಚೆ ನೀರು ರೈತರನ್ನು ಹೈರಾಣಾಗಿಸಿದೆ.
ಬದುಕು ಸಾಗಿಸುವುದಾದರೂ ಹೇಗೆ?: ಭತ್ತವಂತೂ ನೀರಿನಲ್ಲಿಯೇ ನಿಂತು ಕೊಳೆತು ಹೋಗುವ ಪರಿಸ್ಥಿತಿ ಬರುತ್ತದೆ. ಪ್ರತಿ ಎಕರೆಗೆ ರೈತರು 30 ಸಾವಿರ ರೂ. ವರೆಗೂ ಖರ್ಚು ಮಾಡುತ್ತಾರೆ. ಆದರೆ ಬೆಳೆ ಹಾನಿ ಪರಿಹಾರಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿದಾಗ ಪ್ರತಿ ಗುಂಟೆಗೆ 20-40 ರೂ. ಬರುತ್ತದೆ. ಇದರಿಂದ ಬದುಕು ಸಾಗಿಸುವುದಾದರೂ ಹೇಗೆ ಎನ್ನುತ್ತಾರೆ ರೈತರು.
ಬಳ್ಳಾರಿ ನಾಲೆ ಸುತ್ತಲೂ ಇರುವ ಅನಗೋಳ, ಶಹಾಪುರ, ವಡಗಾಂವ, ಜುನೆ ಬೆಳಗಾವಿ, ಹಲಗಾ, ಬೆಳಗಾವಿ, ಮುಚ್ಚಂಡಿ, ಖನಗಾಂವ, ಹುದಲಿವರೆಗೆ ಸಿದ್ದನಹಳ್ಳಿ, ಕಬಲಾಪುರ, ಚಂದೂರ, ಮಾಸ್ತಿಹೊಳಿ, ಹುದಲಿ ಸೇರಿದಂತೆ ಅನೇಕ ಹಳ್ಳಿಗಳ ರೈತರ ಗೋಳು ಕೇಳುವವರು ಇಲ್ಲವಾಗಿದ್ದಾರೆ. 2019ರಲ್ಲಿ ಅಪ್ಪಳಿಸಿದ ನೆರೆಯಿಂದಾಗಿ ಸಂಪೂರ್ಣ ಹೊಲಗಳೇ ಕೊಚ್ಚಿ ಹೋಗಿವೆ.
ಕೊಚ್ಚಿ ಹೋದ ಹೊಲಗಳು: ಕಲ್ಯಾಳ ಫುಲ್ದಿಂದ ಬಂದ ಬಳ್ಳಾರಿ ನಾಲೆಯ ನೀರಿನಿಂದ ಸಿದ್ದನಹಳ್ಳಿಯ ರೈತರ ಹೊಲಗಳೇ ಕೊಚ್ಚಿ ಹೋಗಿವೆ. ಹೊಲ ಎಲ್ಲಿದೆ ಎಂಬುದನ್ನು ಜನ ಇನ್ನೂ ಹುಡುಕಾಡುತ್ತಿದ್ದಾರೆ. 2ರಿಂದ3 ಅಡಿವರೆಗೂ ಕಲ್ಲುಗಳು ಬಿದ್ದು ಹೊಲಗಳೆಲ್ಲ ಮುಚ್ಚಿ ಹೋಗಿವೆ. ಇದನ್ನು ತೆರವುಗೊಳಿಸಿ ಹೊಲ ಮಾಡಿಕೊಡಬೇಕು ಎಂಬುದನ್ನು ಜಿಲ್ಲಾಡಳಿತಕ್ಕೆ ಅಲ್ಲಿಯ ರೈತರು ಮನವಿ ಮಾಡಿದರೂ ಇನ್ನೂ ಯಾರೂ ಇತ್ತ ತಿರುಗಿ ನೋಡುತ್ತಿಲ್ಲ. ಪ್ರವಾಹದಿಂದಾಗಿ ಬೆಳೆಹಾನಿ ಆಗಿ ರೈತರು ಬದುಕುವುದು ಕಷ್ಟಕರವಾಗಿದೆ. 2019ರಲ್ಲಿ ಬಂದಿದ್ದ ಪ್ರವಾಹದಂತೆಯೇ 2021ರಲ್ಲಿಯೂ ಪುನರಾವರ್ತನೆ ಆಗಿದೆ. ಹಿಂಗಾರು ಮತ್ತು ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಬಳ್ಳಾರಿ ನಾಲೆ ಅಗಲಿಗರಣ ಹಾಗೂ ಹೂಳು ತೆಗೆಯಲು ಅನುದಾಣ ನೀಡುವುದಾಗಿ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಬಳ್ಳಾರಿ ನಾಲಾ ಇನ್ನೂ ಸುಧಾರಣೆ ಕಂಡಿಲ್ಲ. ರೈತರ ಕಷ್ಟವಂತೂ ಇನ್ನೂ ಮುಗಿದಿಲ್ಲ. ಆದರೆ ಕಾರಜೋಳರು ಇದನ್ನು ನೋಡಿ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.