ಒಗ್ಗಟ್ಟಿಲ್ಲದ ಪ್ರತಿಪಕ್ಷಗಳಿಂದ “ಬಚಾವಾದ’ ಸರ್ಕಾರ
Team Udayavani, Nov 13, 2017, 7:15 AM IST
ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುವರ್ಣಸೌಧದಲ್ಲಿ ನಡೆಸಿದ ನಾಲ್ಕೂ ಅಧಿವೇಶನಗಳಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಸ್ವಲ್ಪ ಮಟ್ಟಿಗೆ ವಿಫಲವಾದವು ಎಂದರೆ ತಪ್ಪಾಗಲಾರದು.
ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಆಡಳಿತಾರೂಢ ಕಾಂಗ್ರೆಸ್ ಮೇಲೆ ಮುಗಿಬೀಳುವ ಅವಕಾಶ ಸಿಕ್ಕರೂ ಬಳಸಿಕೊಳ್ಳಲಿಲ್ಲ. ಜತೆಗೆ ಬಿಜೆಪಿ ಪ್ರಸ್ತಾಪಿಸಿದ ವಿಷಯಕ್ಕೆ ಜೆಡಿಎಸ್ ಬೆಂಬಲ ಸಿಗದೆ, ಜೆಡಿಎಸ್ ಪ್ರಸ್ತಾಪಿಸಿದ ವಿಷಯಕ್ಕೆ ಬಿಜೆಪಿ ಕೈ ಜೋಡಿಸದ ಕಾರಣಕ್ಕೆ ಸರ್ಕಾರ “ಬಚಾವಾದ’ಘಟನೆಗಳೂ ನಡೆದವು.
ಯಾವುದೇ ಒಂದು ವಿಷಯ ಪ್ರಸ್ತಾಪವಾದಾಗ “ಕ್ರೆಡಿಟ್’ ವಿಚಾರವನ್ನು ಬಿಜೆಪಿ ಹಾಗೂ ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಹೀಗಾಗಿ, ಆಡಳಿತಾರೂಢ ಕಾಂಗ್ರೆಸ್ ವಿರುದಟಛಿದ ಪ್ರಬಲ ಹೋರಾಟ ಸಾಧ್ಯವಾಗಲೇ ಇಲ್ಲ. ಹೀಗಾಗಿ, ಮೂಲ ಆಶಯವಾದ ಆ ಭಾಗದ ಸಮಸೆÂಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯಲೇ ಇಲ್ಲ.
ವಿಠಲ್ ಅರಬಾವಿ ಆತ್ಮಹತ್ಯೆ ಹೊರತುಪಡಿಸಿದರೆ ಕಬ್ಬು ಬೆಳೆಗಾರರು ಸೇರಿ ರೈತರ ಸಮಸ್ಯೆಯಾದಿಯಾಗಿ
ಮಹದಾಯಿ ವಿಚಾರದವರೆಗೂ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಸರ್ಕಾರದ ವಿರುದಟಛಿ ಹೋರಾಟ ಮಾಡಿದ್ದೇ ಇಲ್ಲ. ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಯಾಗಿರುವ ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಕಳೆದ ಎರಡೂವರೆ ರ್ಷದಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ, ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಅಧಿಕೃತ ಪ್ರತಿಪಕ್ಷ ಬಿಜೆಪಿ ಈ ವಿಷಯದಲ್ಲಿ ಯಾವುದೇ ಪರಿಹಾರಾತ್ಮಕ ಪ್ರಯತ್ನ ನಡೆಸುವಲ್ಲಿ ವಿಫಲವಾಗಿರುವುದು ಆ ಭಾಗದ ಜನರಲ್ಲಿ ನೋವು ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪ ಮಾಡುವ ಮೂಲಕ ಐದು ವರ್ಷ ಅನಗತ್ಯವಾಗಿ ಕಾಲಹರಣ ಮಾಡಿದ್ದು, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಸಮಸ್ಯೆಗೆ ಯಾವುದೇ ಸಕಾರಾತ್ಮಕ ಚರ್ಚೆ ನಡೆಯದಿರುವುದು ಕೂಡ ವಿಪರ್ಯಾಸ. ಸಮಸ್ಯೆ ಬಗೆಹರಿಸುವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ವಿಫಲವಾಗಿ ರಾಜಕೀಯ ಲಾಭಕ್ಕಾಗಿ ಹಾತೊರೆಯುತ್ತಿವೆ ಎಂದು ಆರೋಪ ಮಾಡಿ ಜೆಡಿಎಸ್ ಕೈ ತೊಳೆದುಕೊಂಡಿತು.
ನಂಜುಂಡಪ್ಪ ವರದಿ ಚರ್ಚೆಗೆ ಸೀಮಿತ: ಇನ್ನು, ಡಾ. ನಂಜುಂಡಪ್ಪ ವರದಿ ಕುರಿತು ಚರ್ಚೆಗಳು ನಡೆಯಿತೆ
ವಿನಹಃ ಯಾವುದೇ ಪ್ರಗತಿ ಮಾಡಿದ ಕುರಿತು ಸರ್ಕಾರವೂ ಸ್ಪಷ್ಟ ಮಾಹಿತಿ ನೀಡುವ ಗೋಜಿಗೆ ಹೋಗಲಿಲ್ಲ. ಪ್ರತಿಪಕ್ಷಗಳೂ ಈ ವಿಷಯದಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಪ್ರಯತ್ನ ನಡೆಸಿಲ್ಲ.
ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ವಿಚಾರದಲ್ಲೂ ಪ್ರತಿಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸಂಪೂರ್ಣ ಬಾಕಿ ಪಾವತಿಸುವಲ್ಲಿ ಯಶಸ್ವಿಯಾಗಲಿಲ್ಲ. ಬಹುತೇಕ ಸಕ್ಕರೆ ಕಾರ್ಖಾನೆಗಳಿಗೆ ಶಾಸಕ, ಸಚಿವ ಸೇರಿ ರಾಜಕೀಯ ನಾಯಕರೇ ಮಾಲೀಕರಾಗಿರುವುದು ಇದಕ್ಕೆ ಕಾರಣ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿವರ್ಷ ಹತ್ತು ದಿನ ನಡೆಯುವ ಅಧಿವೇಶನ ಹೊರತು ಪಡಿಸಿ, ಇಡೀ ಸುವರ್ಣ ಸೌಧ ಬಳಕೆಯಾಗದೇ ಖಾಲಿ ಉಳಿಯುವ ಬಗ್ಗೆಯೂ ಸಾಕಷ್ಟು ಬಾರಿ ಚರ್ಚೆಯಾದರೂ, ಸರ್ಕಾರ ಆ ಭಾಗದಲ್ಲಿ ಹೆಚ್ಚು ಜನತೆಗೆ ಅನುಕೂಲವಾಗುವ ತೋಟಗಾರಿಕೆ, ಸಹಕಾರ, ಸಕ್ಕರೆ ಇಲಾಖೆಯಂತ ಕನಿಷ್ಠ 10 ಇಲಾಖೆಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸುವ ವಿಚಾರದಲ್ಲೂ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಪ್ರತಿಪಕ್ಷಗಳು ವಿಫಲವಾದವು ಎಂದೇ ಹೇಳಬಹುದು.
– ಶಂಕರ್ ಪಾಗೋಜಿ