ತೃತೀಯ ಲಿಂಗಿ ಮೋನಿಷಾಗೆ ಸರ್ಕಾರಿ ಹುದ್ದೆ ಖಾಯಂ
Team Udayavani, Dec 6, 2018, 6:10 AM IST
ಬೆಳಗಾವಿ: ವಿಧಾನ ಪರಿಷತ್ನಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ತೃತೀಯ ಲಿಂಗಿ ಮೋನಿಷಾ ಅವರನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ವಿಧಾನ ಮಂಡಲ ಇತಿಹಾಸದಲ್ಲಿಯೇ ಮೊದಲ ದಿಟ್ಟ ಹೆಜ್ಜೆ ಇಡಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಮೋನಿಷಾ ಅವರನ್ನು ಖಾಯಂ ಮಾಡಬೇಕು ಎಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಂಗಳಮುಖೀಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ರಾಜ್ಯದ ಇತಿಹಾಸದಲ್ಲಿಯೇ ತೃತೀಯ ಲಿಂಗದವರಿಗೆ ಖಾಯಂ ಸರ್ಕಾರಿ ನೌಕರಿ ನೀಡುವ ಮೂಲಕ ವಿಧಾನ ಮಂಡಲ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎಂದರು.
2016ರಲ್ಲಿ ವಿಧಾನಸೌಧದಲ್ಲಿ ಖಾಲಿ ಇದ್ದ ಡಿ ಗ್ರೂಪ್ ಹುದ್ದೆಗೆ ಮೋನಿಷಾ ಅರ್ಜಿ ಸಲ್ಲಿಸಿದ್ದರು. ಆದರೆ, ತೃತೀಯ ಲಿಂಗದವರಿಗೆ ಹುದ್ದೆ ಇಲ್ಲದ ಕಾರಣ ಹಾಗೂ ಲಿಂಗತ್ವದ ಹೊಂದಾಣಿಕೆಯಾಗದ್ದಕ್ಕೆ ನೇಮಕ ಮಾಡಿಕೊಂಡಿರಲಿಲ್ಲ. ನಂತರ ನ್ಯಾಯಾಲಯದ ಮೊರೆ ಹೋದ ಮೋನಿಷಾಗೆ ಕೋರ್ಟ್ ಮೀಸಲಾತಿ ನೀಡಿ ಆದೇಶ ಹೊರಡಿಸಿತು. ಆದರೆ, ಪ್ರಮಾಣಪತ್ರದಲ್ಲಿ ಹೆಸರು ಹೊಂದಾಣಿಕೆಯಾಗದಿದ್ದರೂ ಆಗಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡರು. ತೃತೀಯ ಲಿಂಗಿಗಳು ಸಮಾಜಮುಖೀಯಾಗಲಿ ಎಂಬ ಉದ್ದೇಶದಿಂದ ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗಿದೆ ಎಂದರು.