ಮಹಾರಾಷ್ಟ್ರ ಜಲಾಶಯಗಳಿಂದ ಹರಿದು ಬರುತ್ತಿರುವ ನೀರು: ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ
Team Udayavani, Aug 19, 2020, 11:23 AM IST
ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ಮಹಾರಾಷ್ಟ್ರದ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಬುಧವಾರ ಬೆಳಿಗ್ಗೆ ದಾಖಲಾದ ಮಾಹಿತಿಯಂತೆ ಕರ್ನಾಟಕದ ಕಲ್ಲೋಳ ಬಳಿ ಕೃಷ್ಣಾ ನದಿಗೆ ಈಗ 2.18 ಲಕ್ಷ ಕ್ಯೂಸೆಕ್ಸ್ ನೀರು ಬರುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 22 ಸಾವಿರ ಕ್ಯೂಸೆಕ್ಸ್ ನೀರು ಹೆಚ್ಚಾಗಿದೆ. ಇದರಿಂದ ಚಿಕ್ಕೋಡಿ, ರಾಯಬಾಗ ಕಾಗವಾಡ ಹಾಗೂ ಅಥಣಿ ತಾಲೂಕುಗಳಲ್ಲಿ ಪ್ರವಾಹದ ಭೀತಿ ಮುಂದುವರಿದಿದೆ.
ಇನ್ನು ಕಳೆದ ಮೂರು ದಿನಗಳಿಂದ ಗೋಕಾಕ್ ತಾಲೂಕಿನಲ್ಲಿ ಸಾಕಷ್ಟು ಅವಾಂತರ ಉಂಟುಮಾಡಿರುವ ಘಟಪ್ರಭಾ ನದಿಯ ಒಳಹರಿವಿನ ಪ್ರಮಾಣ ತಗ್ಗಿದ್ದು ನದಿ ತೀರದ ಜನರಲ್ಲಿ ಸ್ವಲ್ಪ ಸಮಾಧಾನ ತಂದಿದೆ. ಹಿಡಕಲ್ ಜಲಾಶಯಕ್ಕೆ ಈಗ 34,308 ಕ್ಯೂಸೆಕ್ಸ್ ನೀರು ಬರುತ್ತಿದೆ. ಮಂಗಳವಾರ ಒಳಹರಿವಿನ ಪ್ರಮಾಣ 41 ಸಾವಿರ ಕ್ಯೂಸೆಕ್ಸ್ ದಷ್ಟಿತ್ತು. ಖಾನಾಪುರ ತಾಲೂಕಿನಲ್ಲಿ ಸಹ ಮಳೆಯ ಅಬ್ಬರ ಕಡಿಮೆಯಾಗಿದೆ. ಇದರಿಂದ ಮಲಪ್ರಭಾ ಜಲಾಶಯಕ್ಕೆ ಹರಿದು ಬರುವ ನೀರಿನಲ್ಲಿ ಇಳಿಕೆಯಾಗಿದೆ. ಜಲಾಶಯಕ್ಕೆ ಈಗ 17 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ನದಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.