ಬಳ್ಳಾರಿಯಲ್ಲಿ ನಳಗಳ ಸಂಪರ್ಕ ಗೊಂದಲ!
50 ಸಾವಿರಕ್ಕೂ ಹೆಚ್ಚು ಮನೆ-ವಾಣಿಜ್ಯ ಕಟ್ಟಡಗಳು ಹೊಂದಿಲ್ಲ ನಳ
Team Udayavani, Jun 3, 2019, 11:38 AM IST
ಬಳ್ಳಾರಿ ಮಹಾನಗರ ಪಾಲಿಕೆ.
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಕುಡಿಯುವ ನೀರಿನ ಸಂಪರ್ಕಗಳು ಎಷ್ಟು ಗೊತ್ತೇ….? ಕೇವಲ 54 ಸಾವಿರ.
ಹೌದು… ಅಚ್ಚರಿ ಎನಿಸಿದರೂ, ಇದು ಸತ್ಯ. ಪಾಲಿಕೆ ನೀಡಿರುವ ಅಂಕಿ ಸಂಖ್ಯೆಗಳಿಂದಲೇ ಇದು ಬಹಿರಂಗಗೊಂಡಿದೆ. ನಗರದಲ್ಲಿ 1,05,899 ಮನೆ, ವಾಣಿಜ್ಯ ಕಟ್ಟಡಗಳು ಇವೆ. ಈ ಪೈಕಿ ಕೇವಲ ಮನೆ, ವಾಣಿಜ್ಯ ಕಟ್ಟಡಗಳಿಂದ 54,168 ಕುಡಿಯುವ ನೀರಿನ ಸಂಪರ್ಕ ಪಡೆಯಲಾಗಿದೆ. ಇನ್ನುಳಿದ 50 ಸಾವಿರಕ್ಕೂ ಹೆಚ್ಚು ಮನೆ, ವಾಣಿಜ್ಯ ಕಟ್ಟಡಗಳು ಕುಡಿಯುವ ನೀರಿನ ಸಂಪರ್ಕ ಪಡೆದಿಲ್ಲ ಎಂಬುದು ಅಂಕಿ ಸಂಖ್ಯೆಗಳಿಂದ ಸ್ಪಷ್ಟವಾಗುತ್ತಿದೆ. ಈ ಕಟ್ಟಡಗಳಲ್ಲಿನ ಜನರು ತಮ್ಮ ಮನೆಗಳಿಗೆ ಪಾಲಿಕೆಯಿಂದ ನಳ ಸಂಪರ್ಕ ಪಡೆದಿಲ್ಲವೋ ಅಥವಾ ನಾಲ್ಕೈದು ಸಂಪರ್ಕಗಳನ್ನು ಅನಧಿಕೃತವಾಗಿ ಪಡೆದು, ಒಂದು ಸಂಪರ್ಕ ಮಾತ್ರ ಅಧಿಕೃತಗೊಳಿಸಿಕೊಂಡಿದ್ದಾರೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದರಲ್ಲೂ ಇನ್ನು 43 ಕೋಟಿ ರೂ. ನೀರಿನ ತೆರಿಗೆ ವಸೂಲಿಯಾಗಬೇಕಿದ್ದು, ಪಾಲಿಕೆ ಖಜಾನೆಗೆ ಪ್ರತಿ ವರ್ಷ ಬಾರಿ ನಷ್ಟವುಂಟಾಗುತ್ತಿದೆ.
ದಿನೇ ದಿನೇ ಬೆಳೆಯುತ್ತಿರುವ ಬಳ್ಳಾರಿ ಮಹಾನಗರ ಪಾಲಿಕೆಗೆ ತಕ್ಕಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಗೃಹಬಳಕೆ ಕಟ್ಟಡಗಳು, ವಾಣಿಜ್ಯ ಮಳಿಗೆಗಳೊಂದಿಗೆ ಪಾಲಿಕೆಯಿಂದ ಕುಡಿಯುವ ನೀರಿನ ಸಂಪರ್ಕ ಪಡೆಯುವ ಸಂಖ್ಯೆಯೂ ಹೆಚ್ಚುತ್ತಿದೆ. ಕಳೆದ 2018-19ನೇ ಸಾಲಿನಲ್ಲಿ ಗೃಹಬಳಕೆ, ಗೃಹೇತರ, ವಾಣಿಜ್ಯ ಕಟ್ಟಡಗಳು ಸೇರಿ ಒಟ್ಟು 54,168 ಸಂಪರ್ಕಗಳನ್ನು ಅಧಿಕೃತವಾಗಿ ಪಡೆಯಲಾಗಿದೆ. ಗೃಹ ಬಳಕೆಗೆ ಮಾಸಿಕ 175 ರೂ., ಗೃಹೇತರ 350 ರೂ., ವಾಣಿಜ್ಯ 700 ರೂ. ತೆರಿಗೆ ವಿಧಿಸಲಾಗಿದ್ದು, 5.16 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, 43.33 ಕೋಟಿ ರೂ. ಬಾಕಿ ಉಳಿದಿದೆ.
ಈ ಹಿಂದೆ ನಗರಸಭೆ ಇದ್ದಾಗ ಬಹುತೇಕ ಬಡವರು ವಾಸಿಸುವ ಕೊಳಗೇರಿ ಪ್ರದೇಶಗಳಲ್ಲಿ ಸಾರ್ವಜನಿಕ ನಳಗಳನ್ನು ಅಳವಡಿಸಲಾಗಿತ್ತಾದರೂ, ಇಂದು ಈ ನಳಗಳೆಲ್ಲವೂ ಮಾಯವಾಗಿ ಅಲ್ಲಿನ ನಿವಾಸಿಗಳು ಸಹ ಮನೆಗೊಂದು ಅಧಿಕೃತವಾಗಿ ಕುಡಿಯುವ ನೀರಿನ ಸಂಪರ್ಕಗಳನ್ನು ಪಡೆದಿದ್ದಾರೆ. ನೀರಿನ ಕರ ಪಾವತಿಯಲ್ಲಿ ಒಂದಷ್ಟು ಹಿಂದೆ ಬಿದ್ದರೂ ಅನಧಿಕೃತ ಸಂಪರ್ಕಗಳ ಸಂಖ್ಯೆ ತೀರಾ ಕಡಿಮೆ. ಆದರೂ, ನಗರದಲ್ಲಿರುವ ಕಟ್ಟಡಗಳಿಗೂ, ಪಡೆಯಲಾಗಿರುವ ನಳಗಳ ಸಂಪರ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ವಾಸ್ತವದಲ್ಲಿ ಅನಧಿಕೃತ ಸಂಪರ್ಕಗಳನ್ನು ಪಡೆದಿರುವುದು ಎಲ್ಲಿ? ನೀರಿನ ಕರ ವಸೂಲಿಯಾಗದೆ ಬಾಕಿ ಉಳಿಸಿಕೊಂಡಿರುವುದು ಎಲ್ಲಿ? ಎಂಬುದೇ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.05 ಲಕ್ಷ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿವೆ. ಇದರಲ್ಲಿ ಶೇ.40ರಷ್ಟು ಬಿಪಿಎಲ್ ಕುಟುಂಬಗಳು ಇರಬಹುದೆಂದು ಅಂದಾಜಿಸಿದರೂ, ವೈಯಕ್ತಿಕ ನಳ ಸಂಪರ್ಕ ಪಡೆದಿರುವ ಬಹುತೇಕರು ಅಧಿಕೃತ ಪಡಿಸಿಕೊಂಡಿದ್ದಾರೆ. ಪಾಲಿಕೆ ಸಿಬ್ಬಂದಿಯೇ ಬಂದು ಜನರಿಂದ ಹಣ ಸಂಗ್ರಹಿಸಿಕೊಂಡು ಹೋಗುತ್ತಾರೆ. ಆದರೆ, ಇವ್ಯಾವವೂ ಪಾಲಿಕೆಯ ಲೆಕ್ಕದಲ್ಲಿ ಸೇರುವುದಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಇದು ಪಾಲಿಕೆ ಆದಾಯಕ್ಕೆ ಖೋತಾ ಆಗಲು ಕಾರಣ ಎನ್ನಲಾಗುತ್ತಿದೆ. ಇನ್ನು ಪಾಲಿಕೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 54 ಸಾವಿರ ಕಟ್ಟಡಗಳಿಗೆ ನೀರಿನ ಸಂಪರ್ಕ ಪಡೆಯಲಾಗಿದ್ದು, ಬಾಕಿ 51 ಸಾವಿರ ಕಟ್ಟಡಗಳಿಗೆ ಸಂಪರ್ಕ ಪಡೆದುಕೊಂಡಿಲ್ಲ. ಕೆಲವರು ಶುಲ್ಕ ಪಾವತಿಸದೆ ನಳ ಸಂಪರ್ಕ ಪಡೆದರೆ, ಇನ್ನು ಕೆಲವರು ಬಳಸಿದ ನೀರಿಗೂ ಕರ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಪ್ರತಿಷ್ಠಿತ ಬಡಾವಣೆ, ಅಪಾರ್ಟ್ ಮೆಂಟ್ಗಳಲ್ಲೇ ಹೆಚ್ಚು?: ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಅಪಾರ್ಟ್ಮೆಂಟ್ಗಳು ತಲೆ ಎತ್ತುತ್ತಿವೆ. ಈ ಅಪಾರ್ಟ್ಮೆಂಟ್ಗಳಲ್ಲಿ ಕುಡಿಯುವ ನೀರಿನ ಸಲುವಾಗಿ ಪಾಲಿಕೆಯಿಂದ ಅಧಿಕೃತವಾಗಿ ಒಂದು ನಳ ಸಂಪರ್ಕ ಪಡೆದರೆ, ಅನಧಿಕೃತವಾಗಿ ನಾಲ್ಕೈದು ಸಂಪರ್ಕ ಪಡೆಯಲಾಗುತ್ತಿದೆ. ಇನ್ನು ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗೊಂದು ಸಂಪ್ಗ್ಳನ್ನು ನಿರ್ಮಿಸಿಕೊಂಡಿರುವವರು ಸಹ ಎರಡ್ಮೂರು ನಳಗಳ ಸಂಪರ್ಕ ಪಡೆದು, ಒಂದನ್ನು ಮಾತ್ರ ಅಧಿಕೃತ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆಯಾದರೂ, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ಹಿಂದೆ ಬಿದ್ದಿದೆ. ಅನಧಿಕೃತ ಸಂಪರ್ಕಗಳಿಂದಾಗಿ ನೀರು ಪೋಲಾಗುವುದರ ಜತೆಗೆ ಖಜಾನೆಗೂ ಖೋತಾ ಆಗುತ್ತಿದೆ.
ತನಿಖೆಯಿಂದ ವಾಸ್ತವ ಬಹಿರಂಗ: ಪಾಲಿಕೆಯಿಂದ ಸರಬರಾಜಾ ಗುತ್ತಿರುವ ಕುಡಿಯುವ ನೀರಿಗೂ ಪಡೆದಿರುವ ಸಂಪರ್ಕಕ್ಕೂ ಇರುವ ವ್ಯತ್ಯಾಸ ಸೂಕ್ತ ತನಿಖೆಯಿಂದ ಮಾತ್ರ ಸ್ಪಷ್ಟವಾಗಲಿದೆ. ಪ್ರತಿಷ್ಠಿತ ಬಡಾವಣೆ, ಅಪಾರ್ಟ್ಮೆಂಟ್ಗಳಲ್ಲಿ ಬೋರ್ವೆಲ್ ನೆಪದಲ್ಲಿ ಅನಧಿಕೃತವಾಗಿ ಪಡೆದಿರುವ ನಳ ಸಂಪರ್ಕ ಮುಚ್ಚಿ ಹಾಕಲಾಗುತ್ತಿದೆ. ಅಪಾರ್ಟ್ಮೆಂಟ್, ಪ್ರತಿಷ್ಠಿತ ಬಡಾವಣೆಗಳಲ್ಲಿನ ಜನರು ಬೋರ್ವೆಲ್ ನೀರನ್ನು ಬಳಸುತ್ತಿದ್ದಾರೋ ಅಥವಾ ಪಾಲಿಕೆ ಪೂರೈಸುವ ಕುಡಿಯುವ ನೀರನ್ನು ಬಳಸುತ್ತಿದ್ದಾರೆ ಎಂಬುದೇ ಪಾಲಿಕೆ ಅಧಿಕಾರಿಗಳ ಬಳಿ ಸ್ಪಷ್ಟತೆಯಿಲ್ಲ. ನಗರದಲ್ಲಿ ಬೋರ್ವೆಲ್ ನೀರು ಕುಡಿಯಲು ಯೋಗ್ಯವಿಲ್ಲ. ಹಾಗಾಗಿ ಸೂಕ್ತ ತನಿಖೆ ನಡೆಸಿದಾಗ ಮಾತ್ರ ಪಾಲಿಕೆಯಿಂದ ಪಡೆದಿರುವ ಅಧಿಕೃತ ನಳ ಸಂಪರ್ಕಗಳೆಷ್ಟು ಎಂಬುದು ಸ್ಪಷ್ಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ