ವಿಪಕ್ಷಗಳಿಗೆ ಉತ್ತರಿಸಲು ರಾಜ್ಯಾದ್ಯಂತ ಪ್ರಗತಿ ಪರಿಶೀಲನೆ
Team Udayavani, Jul 6, 2019, 5:19 PM IST
ಬಳ್ಳಾರಿ: ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್ ಡಿ.ಸೋಜಾ ಮಾತನಾಡಿದರು
ಬಳ್ಳಾರಿ: ರೈತರ ಸಾಲಮನ್ನವಾಗಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ವಿನಾಕಾರಣ ಆರೋಪಿಸುತ್ತಿರುವ ವಿರೋಧ ಪಕ್ಷದವರಿಗೆ ದಾಖಲೆ ಸಮೇತ ಉತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದ್ದು, ಬಹುತೇಕ ರೈತರ ಸಾಲ ಮನ್ನಾ ಆಗಿದೆ ಎಂದು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿ. ಸೋಜಾ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಅವರು ಪದೇ ಪದೇ ರೈತರ ಸಾಲಮನ್ನಾವಾಗಿಲ್ಲ. ಮೈತ್ರಿ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ವಿನಾಃಕಾರಣ ಆರೋಪಿಸಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಇವರಿಗೆ ದಾಖಲೆ ಸಮೇತ ಉತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿರುವ 46751 ರೈತರ ಒಟ್ಟು 230 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ 58 ಸಾವಿರ ರೈತರ 219 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿದೆ. ಒಟ್ಟು 1.10 ಲಕ್ಷ ರೈತರ 449 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಬಾಕಿ ರೈತರ 268 ಕೋಟಿ ರೂ. ಮನ್ನಾ ಆಗಬೇಕಿದೆ. ಆದರೆ, ಸಾಲಮನ್ನಾ ಆದ ರೈತರಿಗೆ ಬ್ಯಾಂಕ್ನವರು ಬೇಬಾಕಿ ಪ್ರಮಾಣ ಪತ್ರ ನೀಡುತ್ತಿಲ್ಲ. ಮನ್ನಾ ಆಗಿರುವ ಕುರಿತು ಸಂಬಧಪಟ್ಟ ರೈತರಿಗೂ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 83,932 ಬಿಪಿಎಲ್, 53,451 ಎಪಿಎಲ್ ಕಾರ್ಡುದಾರರು ಇದ್ದಾರೆ. ಶೇ.90 ರಷ್ಟು ಕುಟುಂಬಗಳು ಅಂತ್ಯೋದಯ, ಬಿಪಿಎಲ್ ವ್ಯಾಪ್ತಿಗೆ ಬರುತ್ತವೆ. ಈ ಫಲಾನುಭವಿಗಳಿಗೆ ಸಾಲಮನ್ನಾ, ಆರೋಗ್ಯ, ಶಿಕ್ಷಣಕ್ಕೆ ಸಂಬಂಸಿದಂತೆ ಹಲವಾರು ಯೋಜನೆಗಳನ್ನು ತಲುಪಿಸಲಾಗುತ್ತಿದೆ. ಆದರೆ, ಯಾವುದೇ ಯೋಜನೆಗಳು ತಲುಪುತ್ತಿಲ್ಲ ಎಂದು ವಿನಾಕಾರಣ ಆರೋಪಿಸುವ ವಿರೋಧ ಪಕ್ಷದವರೊಂದಿಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಸವಾಲೆಸೆದರು.