ಶರನ್ನವರಾತ್ರಿ ಉತ್ಸವ ಆರಂಭ
ದಸರಾ: ದೇವಿ ಮೂರ್ತಿ ಮೆರವಣಿಗೆ-ವಿಶೇಷ ಪೂಜೆ ವಿಜೃಂಭಣೆ ಕರಗೋತ್ಸವ
Team Udayavani, Sep 30, 2019, 12:42 PM IST
ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯ ಶ್ರೀ ಏಳು ಮಕ್ಕಳ ತಾಯಮ್ಮ ದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು. ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಶರನ್ನವರಾತ್ರಿ ಉತ್ಸವವನ್ನು ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ಶ್ರೀ ದೇವಿ ಉತ್ಸವ ಭಾನುವಾರ ನಡೆದ ಕರಗೋತ್ಸವ ವಿಜೃಂಭಣೆಯಿಂದ ನಡೆಯಿತು.
ನಗರದ ಅಧಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಬೆಂಗಳೂರು ರಸ್ತೆ, ಬ್ರೂಸ್ಪೇಟೆ ಪೊಲೀಸ್ ಠಾಣೆ ಮಾರ್ಗವಾಗಿ ಎಚ್ಆರ್ಜಿ ವೃತ್ತದ ಮೂಲಕ ಉತ್ಸವ ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ತಲುಪಿತು. ದೇವಾಲಯದ ಧರ್ಮಕರ್ತ, ಪಾಲಿಕೆ ಸದಸ್ಯ ಗೋವಿಂದರಾಜುಲು ಅವರು ಉತ್ಸವದ ನೇತೃತ್ವ ವಹಿಸಿದ್ದರು.
ನಂತರ ಅವರು ಮಾತನಾಡಿ, ಉತ್ಸವ ನಿಮಿತ್ತ ದೇವಾಲಯದಲ್ಲಿ ಭಾನುವಾರ ಪಾಡ್ಯಮಿ ಬ್ರಹ್ಮಿಣಿ ಹೋಮ ನಡೆಯಿತು. ಸೋಮವಾರ ವೈಷ್ಣವಿ ಹೋಮ, ಮಂಗಳವಾರ ಕೌಮಾರಿ ಹೋಮ, ಬುಧವಾರ ನಾರಸಿಂಹಿಣಿ ಹೋಮ, ಗುರುವಾರ ಮಹೇಂದ್ರಿ ಹೋಮ, ಶುಕ್ರವಾರ ಬಗಳಾಮುಖೀ ಹೋಮ, ಶನಿವಾರ ಕಾತ್ಯಾಯಿನಿ ಮಾತಂಗಿ ಹೋಮ, ಭಾನುವಾರ ದುರ್ಗಾಷ್ಟಮಿ ಮಹಾಕಾಳಿ ದುರ್ಗಾ ಹೋಮ, ಸೋಮವಾರ ಚಂಡಿ ಹೋಮ, ಮಂಗಳವಾರ ವಿಜಯದಶಮಿ ಕಮಲಾತ್ಮಿಕ ಹೋಮ, ಹವನಗಳು ನಡೆಯಲಿವೆ ಎಂದರು.
ಭಕ್ತರು ಪೂರ್ಣಾಹುತಿ ಮತ್ತು ಹೋಮ ಮತ್ತು ಮಹಾಹೋಮ, ಹವನಗಳಲ್ಲಿ ಭಾಗವಹಿಸಿ ದೇವಿ ಆರ್ಶಿವಾದ ಪಡೆಯಬಹುದು ಎಂದರು. ಈ ಸಂಧರ್ಭದಲ್ಲಿ ಪೆರುಮಾಳ್ ಸ್ವಾಮಿ, ಮುರುಘಾ ಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಪೂಜೆಗಳೂ ನಡೆದವು. ಈ ಸಂದರ್ಭದಲ್ಲಿ ತಾಯಲು, ಶಂಕರ್, ನಾಗರಾಜ್, ವೆಂಕಟೇಶ್, ಶೋಭಾ, ಅರುಣ್ ಅವರು ಸೇರಿದಂತೆ ಇತರರಿದ್ದರು.