ಮುಂದುವರಿದ ಕಾಲುವೆ ಗೇಟ್ ದುರಸ್ತಿ
ತುಕ್ಕು ಹಿಡಿದಿದ್ದ ಗೇಟ್ ಮುರಿದು ನೀರು ಪೋಲು•ಬೆಳಗಾವಿಯ ನಿಪುಣ ತಂಡದಿಂದ ದುರಸ್ತಿ ಕಾರ್ಯ
Team Udayavani, Aug 15, 2019, 11:53 AM IST
•ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆ ಹೆಡ್ ಸ್ಲೂಸ್ ಗೇಟ್ (ಮುಖ್ಯಗೇಟ್) ಮುರಿದಿದ್ದು, ದುರಸ್ತಿ ಕಾರ್ಯ ಮುಂದುವರಿದಿದೆ. ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸಸ್ ಕಂಪನಿಯ 10 ಜನ ಎಂಜಿನಿಯರಿಂಗ್ ನಿಪುಣರನ್ನೊಳಗೊಂಡ ಡೈವಿಂಗ್ ತಂಡ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಗುರುವಾರ ಸಹ ಮುಂದುವರಿಯುವ ಸಾಧ್ಯತೆಯಿದೆ.
ಪ್ರಸಕ್ತ ವರ್ಷ ಆರಂಭದಿಂದಲೂ ನೀರಿನ ಕೊರತೆ ಎದುರಿಸುತ್ತಿದ್ದ ತುಂಗಭದ್ರಾ ಜಲಾಶಯಕ್ಕೆ ಕಳೆದ ಒಂದೆರಡು ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಪರಿಣಾಮ ಜಲಾಶಯದಿಂದ ಎಲ್ಲ ಕಾಲುವೆಗಳಿಗೂ ನೀರು ಹರಿಸಲಾಯಿತು. ಒಂದೇ ಸಮನೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಹಲವು ದಿನಗಳಿಂದ ರಿಪೇರಿಗಾಗಿ ಕಾದಿದ್ದ, ತುಕ್ಕು ಹಿಡಿದಿದ್ದ ಜಲಾಶಯದ ಎಡದಂಡೆಯ ಮೇಲ್ಮಟ್ಟದ ಕಾಲುವೆಯ ಮುಖ್ಯಗೇಟ್ ಮುರಿದಿದೆ. ಇದರಿಂದ ಅಪಾರ ಪ್ರಮಾಣದ ನೀರು ಹೊರ ಬಂದಿದ್ದು, ಪಕ್ಕದ ಮುನಿರಾಬಾದ್ನ ಪಂಪಾವನ ಸೇರಿ ಹಲವೆಡೆ ನುಗ್ಗಿದೆ. ಇದನ್ನು ತಡೆಯಲು ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ ನಡೆದಿದೆ. ಗೇಟ್ ದುರಸ್ತಿ ಮಾಡಿದ್ದು ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಕೊನೆಯ ಪ್ರಯತ್ನ ನಡೆದಿದ್ದು, ಅದು ಸಾಧ್ಯವಾಗದಿದ್ದಲ್ಲಿ ಹೊಸ ಗೇಟ್ ಸಹ ಅಳವಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
38 ಅಡಿ ಆಳದಲ್ಲಿ ರಿಪೇರಿ: ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟವಾದ 1633 ಅಡಿಯಿಂದ 38 ಅಡಿ ಆಳದಲ್ಲಿ ಈ ದುರಸ್ತಿ ಕಾರ್ಯ ನಡೆಯುತ್ತಿದೆ. ಹಲವು ದಿನಗಳಿಂದ ನೀರಲ್ಲೇ ಇರುವ ಕಾರಣ ತುಕ್ಕು ಹಿಡಿದು ಗೇಟ್ ಮುರಿದಿದೆ. ಅದನ್ನು ತೆಗೆಯಲು ಹೋದಾಗ ಕೇವಲ ರ್ಯಾಕ್ ಮಾತ್ರ ಬಂದಿದ್ದು, ಅದಕ್ಕೆ ಸಂಬಂಧಿಸಿದ್ದ ಇತರೆ ಭಾಗಗಳು ಅಲ್ಲೇ ಉಳಿದಿವೆ. ನೀರಲ್ಲೇ ಕೆಲಸ ಮಾಡಬೇಕಾಗಿದ್ದರಿಂದ ಅವುಗಳನ್ನು ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸಸ್ ಕಂಪನಿಯ ಎಂಜಿನಿಯರಿಂಗ್ ನಿಪುಣರಿರುವ ಡೈವಿಂಗ್ ತಂಡವನ್ನು ಕರೆತರಲಾಗಿದೆ. ಆಕ್ಸಿಜನ್ನೊಂದಿಗೆ ನೀರಿಗಿಳಿದಿರುವ ಡೈವಿಂಗ್ ತಂಡದ ನಿಪುಣರು ಗೇಟ್ ಮುರಿದಿರುವ ಪರಿಸ್ಥಿತಿಯನ್ನು ತಿಳಿದುಕೊಂಡು ಹೊರ ಬಂದಿದ್ದಾರೆ. ಗೇಟ್ ಮುರಿದಿದ್ದು, ಕಬ್ಬಿಣದ ಬೃಹತ್ ರಾಡ್ ಒಂದು ಜೋತುಬಿದ್ದಿದೆ. ಅದನ್ನು ತೆಗೆದರೂ, ಕೇವಲ ಮೇಲಿನ ಸಾಫ್ಟ್ ರಾಡ್ ಮಾತ್ರ ಬರಲಿದ್ದು, ಕೆಳಗಿನ ಭಾಗ ಹಾಗೆ ಉಳಿಯಲಿದೆ. ಮತ್ತೂಮ್ಮೆ ನೀರಿಗಿಳಿದು ಅದನ್ನು ಮೊದಲು ತೆಗೆಯೋಣ. ಸಾಧ್ಯತೆಯಿದ್ದರೆ ಉಕ್ಕು ಹಾಕಿ ನೀರನ್ನು ನಿಯಂತ್ರಿಸಲು ಪ್ರಯತ್ನಿಸಲಾಗುವುದು. ಇಲ್ಲದಿದ್ದರೆ ಹೊಸ ಗೇಟ್ನ್ನು ಅಳವಡಿಸಬೇಕಾಗಲಿದೆ. ಹಾಗಾಗಿ ಹಳೆಯದ್ದನ್ನು ತೆಗೆದರೆ, ಹೊಸಗೇಟನ್ನು ಅಳವಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹೊಸದಾದ ಗೇಟ್ನ್ನು ಸಹ ಸಿದ್ಧಪಡಿಸಲಾಗಿದೆ ದುರಸ್ತಿಕೈಗೊಂಡಿರುವ ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕಾಲುವೆ ಗೇಟ್ ರಿಪೇರಿ ಕಾರ್ಯ ಬುಧವಾರವೂ ಮುಂದುವರೆಯಲಿದೆ.
ಜಲಾಶಯದ ಕ್ರಸ್ಟ್ಗೇಟ್ ಮುರಿದಿತ್ತು: ಕಳೆದ ಒಂದೂವರೆ ದಶಕದ ಹಿಂದೆ ತುಂಗಭದ್ರಾ ಜಲಾಶಯದ ಒಂದು ಕ್ರಸ್ಟ್ಗೇಟ್ ಸಹ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹರಿದಿತ್ತು. ಆಗ ಜಲಾಶಯಕ್ಕೆ ಒಳಹರಿವಿ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ. ಹಾಗಾಗಿ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಜಲಾಶಯದ ಆಡಳಿಂತ ಮಂಡಳಿ ಅಧಿಕಾರಿಗಳು ಕ್ರಸ್ಟ್ಗೇಟ್ ದುರಸ್ತಿಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಇದೀಗ ತುಂಗಭದ್ರಾ ಜಲಾಶಯದ ಬಲದಂಡೆಯ ಮೇಲ್ಮಟ್ಟದ ಗೇಟ್ ಮುರಿದಿದೆ. ತುಕ್ಕು ಹಿಡಿದಿದೆ ಎಂಬುದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕಿದ್ದರೂ, ಜಲಾಶಯದಲ್ಲಿ ಕಡಿಮೆ ನೀರು ಇರುವಾಗ ಅಥವಾ ಕಾಲುವೆಗೆ ನೀರನ್ನು ಕಡಿತಗೊಳಿಸಿದಾಗ ಇಂಥ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದಿರುವುದು ಇಷ್ಟೆಲ್ಲ ನೀರು ಪೋಲಾಗಲು ಕಾರಣವಾಗಿದೆ. ಇದು ಜಿಲ್ಲೆಯ ರೈತಾಪಿ ವರ್ಗದ, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇನ್ನಾದರೂ ಜಲಾಶಯದ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂಥಹ ದುರಸ್ತಿಗಳ ಕಾರ್ಯಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ತುಂಗಭದ್ರಾ ಜಲಾಶಯದ ಎಡದಂಡೆಯ ಮೇಲ್ಮಟ್ಟದ ಕಾಲುವೆ ಹೆಡ್ ಸ್ಲೂಸ್ಗೇಟ್ (ಮುಖ್ಯಗೇಟ್) ಮುರಿದಿದೆ. ಹಲವು ವರ್ಷಗಳಿಂದ ನೀರಲ್ಲೇ ಇರುವುದರಿಂದ ತುಕ್ಕು ಹಿಡಿದು ಮುರಿದಿದೆ. ಕಳೆದ ಎರಡು ದಿನಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದೀಗ ಬೆಳಗಾವಿ ಮೂಲದ ಅಕ್ಷತಾ ಅಂಡರ್ ವಾಟರ್ ಸರ್ವಿಸಸ್ ಕಂಪನಿಯ ನಿಪುಣರ ತಂಡ ರಿಪೇರಿ ಕಾರ್ಯ ಮಾಡುತ್ತಿದೆ. ಸಾಧ್ಯವಾಗದಿದ್ದರೆ ಹೊಸ ಗೇಟ್ನ್ನು ಅಳವಡಿಸಲು ಸಹ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
•ಮಂಜಪ್ಪ,
ಮುಖ್ಯ ಎಂಜಿನೀಯರ್,
ತುಂಗಭದ್ರಾ ಜಲಾಶಯದ ನೀರಾವರಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು