ಆರೋಗ್ಯ ಖಾತೆ ಜತೆಗಿದೆ ಭಾವನಾತ್ಮಕ ನಂಟು
ಜಿಲ್ಲಾಸ್ಪತ್ರೆ ಆವರಣದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆಜಿಲ್ಲಾಸ್ಪತ್ರೆ ಶೀಘ್ರ ಮೇಲ್ದರ್ಜೆಗೆ: ಶ್ರೀರಾಮುಲು
Team Udayavani, Oct 6, 2019, 11:55 AM IST
ಬಳ್ಳಾರಿ: ಆರೋಗ್ಯ ಇಲಾಖೆಯೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದಾಗಲೆಲ್ಲ ನನಗೆ ಆರೋಗ್ಯ ಇಲಾಖೆ ಖಾತೆಯನ್ನೇ ನೀಡಲಾಗುತ್ತಿದೆ. ಮುಂದೆ ಇದನ್ನೇ ಕಾಯಂ ಮಾಡಲಾಗುತ್ತದೆಯೇ ಏನೋ ಎಂದು ಸಚಿವ ಬಿ. ಶ್ರೀರಾಮುಲು ನುಡಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಪಂ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರ ವಸತಿ ಗೃಹಗಳು, ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಡಿಎನ್ಬಿ ಸೆಮಿನಾರ್ ಹಾಲ್ ಕಟ್ಟಡ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ನಾನು ಆರೋಗ್ಯ ಸಚಿವನಾಗಿದ್ದೆ. ಆಗ ವಾಜಪೇಯಿ ಆರೋಗ್ಯ ಶ್ರೀ ಕಾರ್ಡ್, 108 ಆಂಬ್ಯುಲೆನ್ಸ್ ಸೌಲಭ್ಯವನ್ನು ಜಾರಿಗೆ ತಂದಿದ್ದೆ. ಇದೀಗ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಈಗಲೂ ಆರೋಗ್ಯ ಇಲಾಖೆಯನ್ನೇ ನನಗೆ ನೀಡಲಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯನ್ನೇ ನನಗೆ ಕಾಯಂಗೊಳಿಸುತ್ತಾರೋ ಏನೋ ಗೊತ್ತಿಲ್ಲ ಎಂದ ಸಚಿವ ರಾಮುಲು, ಆರೋಗ್ಯ ಇಲಾಖೆಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ಹಾಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಂಚರಿಸಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲು ನಿರ್ಣಯ ಕೈಗೊಂಡಿದ್ದು, ಸಮಸ್ಯೆಗಳನ್ನು ಅರ್ಥೈಸಿಕೊಂಡು ಇತ್ಯರ್ಥಪಡಿಸುತ್ತೇನೆ ಎಂದರು.
ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಗಳಿಂದ 500 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕೆ ಬೇಕಾದ ಅಗತ್ಯ ಸಲಕರಣೆಗಳು, ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸದೃಢ ಭಾರತಕ್ಕಾಗಿ ಮತ್ತು ಸದೃಢ ಆರೋಗ್ಯಯುತ ಕರ್ನಾಟಕಕ್ಕಾಗಿ ಏನೆಲ್ಲಾ ಆರೋಗ್ಯಕರ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ಕೈಗೊಳ್ಳಲಾಗುವುದು. ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ಆಸ್ಪತ್ರೆಗಳಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಆ ಆಸ್ಪತ್ರೆಗಳಿಗೆ ಸೌಕರ್ಯ
ಕಲ್ಪಿಸುವಿಕೆ ಹಾಗೂ ಮೇಲ್ದರ್ಜೆಗೇರಿಸುವಿಕೆಗೆ ಸಂಬಂಧಿ ಸಿದಂತೆ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಮಳಿಗೆ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಬಳ್ಳಾರಿಯಲ್ಲಿಯೂ ಶೀಘ್ರವಾಗಿ ಆರಂಭಿಸಲಾಗುವುದು. ರೋಗಿಗಳಿಗೆ ಔಷಧಗಾಗಿ ಹೊರಚೀಟಿ ಬರೆದುಕೊಡದಂತೆ ಸೂಚಿಸಲಾಗಿದೆ. ಲಭ್ಯವಿಲ್ಲದಿದ್ದಲ್ಲಿ ವೈದ್ಯರೇ ತಂದುಕೊಡಬೇಕು ಎಂದು ತಿಳಿಸಲಾಗಿದೆ ಎಂದರು.
ಆಶಾ ಕಾರ್ಯಕರ್ತೆಯರಿಗೆ ಕೆಲದಿನಗಳ ಹಿಂದೆ 500 ಗೌರವ ಧನ ಹೆಚ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವರ ಗೌರವ ಧನ 10 ಸಾವಿರ ರೂ.
ಹೆಚ್ಚಿಸಲು ಕ್ರಮವಹಿಸಲಾಗುವುದು. ರಾಜ್ಯ ಸರ್ಕಾರದ ಅಧಿಧೀನದಲ್ಲಿ ಕಾರ್ಯನಿರ್ವಹಿಸುವ ನರ್ಸ್ಗಳ ವೇತನವನ್ನು 6 ಸಾವಿರ ರೂಗಳಿಂದ 17 ಸಾವಿರಕ್ಕೆ ಹೆಚ್ಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರ ಎನ್ಆರ್ಎಚ್ಎಂ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನರ್ಸ್ಗಳಿಗೂ ಉತ್ತಮ ವೇತನ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ಸಚಿವ ಶ್ರೀರಾಮುಲು ಅವರು ಈ ಹಿಂದೆ ಸಚಿವರಾಗಿದ್ದಾಗ ಆರೋಗ್ಯ ಶ್ರೀ, 108 ವಾಹನಗಳನ್ನು ಜಾರಿಗೆ ತಂದಿದ್ದಾರೆ. ಅದೇ ರೀತಿ ಇದೀಗ 104 ಹೆಸರಿನಲ್ಲಿ ಆಪರೇಷನ್ ಸೌಲಭ್ಯವುಳ್ಳ ವಾಹನವನ್ನು ಜಾರಿಗೆ ತಂದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಣ್ಣು ಸೇರಿದಂತೆ ಚಿಕ್ಕ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರು, ಮಹಿಳೆಯರಿಗೆ ಸ್ಥಳದಲ್ಲೇ ಶಸ್ತ್ರಚಿಕಿತ್ಸೆ ಮಾಡಲು ಅನುಕೂಲವಾಗಲಿದೆ ಎಂದು ಕೋರಿದರು.
ಸಂಸದ ವೈ. ದೇವೇಂದ್ರಪ್ಪ, ವಿಧಾನಪರಿಷತ್ ಕೆ.ಸಿ.ಕೊಂಡಯ್ಯ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿಸಿ ಎಸ್.ಎಸ್. ನಕುಲ್, ಜಿಪಂ ಸಿಇಒ ಕೆ. ನಿತೀಶ್, ಅಪರ ಜಿಲ್ಲಾ ಧಿಕಾರಿ ಸತೀಶಕುಮಾರ್, ಡಿಎಚ್ಒ ಡಾ| ಶಿವರಾಜ ಹೆಡೆ ಮತ್ತಿತರರು ಇದ್ದರು. ಈಶ್ವರ್ ದಾಸಪ್ಪನವರ್ ನಿರೂಪಿಸಿದರು.