ವಿಶ್ವಕ್ಕೆ ಅಹಿಂಸೆಯ ಮಹತ್ವ ಸಾರಿದ ಮಹಾತ್ಮ
ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ದೇಶಕ್ಕೆ ಗಾಂಧೀಜಿ ಕೊಡುಗೆ ದೊಡ್ಡದು: ಎಸಿ ಕೋನರೆಡ್ಡಿ
Team Udayavani, Oct 3, 2019, 1:24 PM IST
ಬಳ್ಳಾರಿ: ಹಿಂಸೆ ಮತ್ತು ಸೇಡಿನ ಮಾರ್ಗಗಳಿಗಿಂತ ಹಿಂಸಾ ಮಾರ್ಗ ಅತ್ಯಂತ ಪರಿಣಾಮಕಾರಿಯಾದುದು ಎಂಬುದನ್ನು ವಿಶ್ವಕ್ಕೆ
ಸಾರಿದವರು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಕೊಡುಗೆ ದೊಡ್ಡದು. ಅವರು ಡೆಸಿದ ಅಹಿಂಸಾ ಚಳವಳಿ ಮಾರ್ಗಗಳು ಇಂದಿಗೂ ಪ್ರಸ್ತುತ ಎಂದರು.
ಹಳ್ಳಿಗಳೇ ದೇಶದ ಜೀವಾಳವೆಂದಿದ್ದ ಗಾಂಧೀಜಿಯವರು ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕೆಂದು ಕನಸು ಕಂಡಿದ್ದರು. ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲ. ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕವಾಗಿ ಜನರ ಜೀವನಮಟ್ಟ ಸುಧಾರಣೆಯಾದಾಗ ಮಾತ್ರ ಹಳ್ಳಿ ಅಭಿವೃದ್ಧಿಯಾದಂತೆ ಎಂದಿದ್ದರು ಎಂದು ಅವರು
ವಿವರಿಸಿದರು.
ದೇಶದಲ್ಲಿ ಈ ಹಿಂದೆ ಸ್ವತ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿಸ್ವಚ್ಛತೆ ಬಗ್ಗೆ ಜನರಲ್ಲಿ ಕಾಳಜಿ ಕಡಿಮೆಯಾಗಿದೆ. ಜನರು ಸ್ವತ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನ್ನು ತ್ಯಜಿಸಿ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ
ಕಾರ್ಯಪ್ರವೃತ್ತರಾಗಬೇಕು ಮತ್ತು ಇತರರಿಗೂ
ಪ್ರೇರೇಪಿಸಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ಜೀವನಮೌಲ್ಯ, ಸತ್ಯ, ಆಹಿಂಸೆ ಆತ್ಮಬಲದ ಕುರಿತು ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ವಿವರಿಸಿದರು. ಬಳಿಕ ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ಮೌಲ್ಯಗಳು, ತತ್ವಾದರ್ಶಗಳ ಕುರಿತ ಕಿರುಹೊತ್ತಿಗೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಮಹಾತ್ಮ ಗಾಂಧೀಜಿ ಅವರ ಜಯಂತಿ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ “ಮಹಾತ್ಮ ಗಾಂಧೀಜಿ 150”ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿ ಕಚೇರಿ ಸ್ಥಾನಿಕ ತಹಶೀಲ್ದಾರ್ ವಿಶ್ವಜೀತ್ ಮೆಹತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಿ.ಕೆ. ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶಬಾಬು, ಸಹಕಾರ ಸಂಘಗಳ ಉಪನಿಬಂಧಕಿ ಡಾ| ಸುನೀತಾ ಸಿದ್ರಾಮ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿ ಕಾರಿ ಪಿ. ಶುಭಾ, ಜಿಲ್ಲಾ ಸಾಂಖ್ಯೀಕ ಅಧಿಕಾರಿ ವಾಗೀಶ ಶಿವಾಚಾರ್ಯ, ಅಬಕಾರಿ ಇಲಾಖೆಯ ವಿನೋದ ಡಾಂಗೆ, ಡಿಡಿಪಿಯು ನಾಗರಾಜಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ್ ಬಿದರಿ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿವಿಧ ಇಲಾಖೆಗಳ ನೌಕರರು,ಸಾರ್ವಜನಿಕರು ಇದ್ದರು.