ದಸರಾ ಮೆರವಣಿಗೆಯಲ್ಲಿ ಹಂಪಿ ಸ್ಮಾರಕಗಳ ದರ್ಶನ
Team Udayavani, Sep 22, 2019, 12:39 PM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಮೈಸೂರು ದಸರಾ ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಈ ಬಾರಿ ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ಟ್ಯಾಬ್ಲೋ ಪ್ರದರ್ಶನಗೊಳ್ಳಲಿದೆ. ಹಂಪಿ ಕೇಂದ್ರಬಿಂದುವಾದ ಕಲ್ಲಿನ ರಥ, ಕಮಲ ಮಹಲ್ ಮತ್ತು ಉಗ್ರನರಸಿಂಹ ಸ್ಮಾರಕಗಳು ಹಂಪಿ ವಾಸ್ತುಶಿಲ್ಪ ಕಲಾವೈಭವ ಶೀರ್ಷಿಕೆಯಡಿ ದಸರಾ ಜಂಬೂ ಸವಾರಿಯಲ್ಲಿ ಬಳ್ಳಾರಿ ಜಿಲ್ಲೆಯ ಸ್ತಬ್ಧ ಚಿತ್ರಗಳಾಗಿ ಪ್ರದರ್ಶನಗೊಳ್ಳಲಿವೆ.
ಮೈಸೂರಿನಲ್ಲಿ ಈಗಾಗಲೇ 10 ಚಕ್ರದ ಲಾರಿಯ ಟ್ರಾಲಿಯಲ್ಲಿ ಕಳೆದ ಸೆ. 15 ರಿಂದ ಈ ಸ್ತಬ್ಧಚಿತ್ರಗಳ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯ, ಐತಿಹಾಸಿಕ ಹಿನ್ನೆಲೆಯುಳ್ಳ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಮತ್ತು ವಿಜಯನಗರ ಸಾಮ್ರಾಜ್ಯ, ಉಜ್ಜಯಿನಿ ಮರುಳಸಿದ್ಧೇಶ್ವರ ದೇವಸ್ಥಾನ ಸೇರಿ ಒಟ್ಟು ನಾಲ್ಕು ಮಾದರಿಗಳನ್ನು ಪ್ರದರ್ಶಿಸಲು ಮೈಸೂರು ದಸರಾ ಹಬ್ಬ ಆಚರಣಾ ಸಮಿತಿಗೆ ಕಳುಹಿಸಿಕೊಡಲಾಗಿತ್ತು.
ಸಭೆಯಲ್ಲಿ ಬಳ್ಳಾರಿ ಜಿಲ್ಲೆಯಿಂದ ಹಂಪಿ ವಾಸ್ತುಶಿಲ್ಪ ಕಲಾವೈಭವ ಶೀರ್ಷಿಕೆಯಡಿ ಇತಿಹಾಸ ಪ್ರಸಿದ್ಧ ಹಂಪಿಯ ಕಲ್ಲಿನರಥ, ಕಮಲ ಮಹಲ್, ಉಗ್ರ ನರಸಿಂಹ ಸ್ಮಾರಕಗಳನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಈ ಸ್ತಬ್ಧಚಿತ್ರಗಳ ಸಿದ್ಧತಾ ಕಾರ್ಯ ನಡೆಯುತ್ತಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ದಸರಾ ಹಬ್ಬಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿರುವುದರಿಂದ ಜಂಬೂ ಸವಾರಿಯಲ್ಲಿ
ಪ್ರದರ್ಶಿಸಲು ಹಂಪಿ ಸ್ಮಾರಕಗಳನ್ನು ಆಯ್ಕೆ ಮಾಡಲಾಗಿದೆ. ಮೇಲಾಗಿ ಮೈಸೂರು ದಸರಾ
ಉತ್ಸವ ಸಮಿತಿಯು ಸಹ ಎರಡ್ಮೂರು ವರ್ಷದೊಳಗೆ ಪ್ರದರ್ಶಿಸಿದ್ದ ಸ್ಮಾರಕಗಳನ್ನು ಪುನರಾವರ್ತಿಸುವುದು ಬೇಡ ಎಂದೂ ಸೂಚಿಸಿದೆ. ಈ ಹಿನ್ನೆಲೆಯಲ್ಲಿ 2016-17ರಲ್ಲೂ ಹಂಪಿ ವಾಸ್ತುಶಿಲ್ಪ ಕಲಾವೈಭವ ಶೀರ್ಷಿಕೆಯಡಿ ಇದೇ ಸ್ತಬ್ಧಚಿತ್ರಗಳನ್ನು ಕಳುಹಿಸಲಾಗಿತ್ತು. ಇದೀಗ ಎರಡನೇ ಬಾರಿಗೆ ಈ ಪುತ್ಥಳಿಗಳು ಜಂಬೂ ಸವಾರಿಯಲ್ಲಿ ಈ ಬಾರಿ ಪುನಃ ರಾರಾಜಿಸಲಿದ್ದು, ಹಂಪಿ ಶಿಲ್ಪಕಲಾ ವೈಭವ ಮೈಸೂರು ದಸರಾದಲ್ಲಿ ಮಿಂಚಲಿದೆ.
ಗುಬ್ಬಿ ಗಾಳೆಪ್ಪರಿಂದ ಸ್ತಬ್ಧಚಿತ್ರ ನಿರ್ಮಾಣ: ಸ್ತಬ್ಧಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನು
ಹೊಸಪೇಟೆ ಮೂಲದ ಕಲಾವಿದ ಗುಬ್ಬಿ ಗಾಳೆಪ್ಪ ಅವರಿಗೆ ವಹಿಸಲಾಗಿದೆ. ಮೊದಲು ಕ್ರಿಡಿಲ್
ಸಂಸ್ಥೆಯು ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ಸಂಬಂಧಿ ಸಿದಂತೆ ಅದಕ್ಕಾಗುವ ಖರ್ಚುವೆಚ್ಚ ಸಮೇತ ಯೋಜನೆಯನ್ನು ರೂಪಿಸಿ, ಜಿಲ್ಲಾಪಂಚಾಯಿತಿಗೆ ವರದಿ ಸಲ್ಲಿಸಿದ್ದು, ಬಳಿಕ ಸ್ತಬ್ಧಚಿತ್ರಗಳನ್ನು ನಿರ್ಮಿಸುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಹೊಸಪೇಟೆಯ ಕಲಾವಿದ ಗುಬ್ಬಿಗಾಳೆಪ್ಪರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಅವರನ್ನು ಈಗಾಗಲೇ ಲಾರಿಯೊಂದಿಗೆ ಮೈಸೂರಿಗೆ ಕಳುಹಿಸಿಕೊಡಲಾಗಿದ್ದು, ಅಗತ್ಯ ಸಾಮಗ್ರಿಗಳನ್ನು ಸ್ಥಳೀಯವಾಗಿ ಖರೀದಿಸುವಂತೆಯೂ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಜಿಪಂ ಅ ಧಿಕಾರಿಗಳು
ಸ್ಪಷ್ಟಪಡಿಸಿದ್ದಾರೆ.
11.2 ಲಕ್ಷ ರೂ. ವೆಚ್ಚ; ಮೈಸೂರು ದಸರಾ ಹಬ್ಬದ ಜಂಬೂ ಸವಾರಿಯಲ್ಲಿ ಜಿಲ್ಲೆಯಿಂದ ಪ್ರದರ್ಶಿಸಲಾಗುತ್ತಿರುವ ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಬರೋಬ್ಬರಿ 11.2 ಲಕ್ಷ ರೂಗಳನ್ನು ವೆಚ್ಚ ಮಾಡುತ್ತಿದೆ. ಈ ಹಣವನ್ನು ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ಇಲಾಖೆ, ಖಾಗ್ರಾ, ಪಶು ಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿಗಳಿಂದ ಸಂಗ್ರಹಿಸಿ, ಸ್ತಬ್ಧಚಿತ್ರ ಸಿದ್ಧಪಡಿಸುವ ಕಲಾವಿದಗೆ ಕಂತುಗಳ ರೂಪದಲ್ಲಿ ಪಾವತಿಸಲಾಗುತ್ತದೆ. ಕಳೆದ ವರ್ಷ ತುಂಗಭದ್ರಾ ಜಲಾಶಯದ ಸ್ತಬ್ಧಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಅದಕ್ಕೆ ಕೇವಲ 5.75 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಒಂದೇ ವಾಹನದಲ್ಲಿ 3 ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಬೇಕಿರುವ ಹಿನ್ನೆಲೆಯಲ್ಲಿ ನಿರ್ಮಾಣ ವೆಚ್ಚವೂ ಹೆಚ್ಚಳವಾಗಿದೆ ಎಂದು ಜಿಪಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.