ವಿಮಾನ ನಿಲ್ದಾಣ ನಿರ್ಮಾಣಕ್ಕೆ 100 ಕೋಟಿ ಪ್ರಸ್ತಾವನೆ
ಕೆಕೆಆರ್ಡಿಬಿಯಿಂದ ಹಣ ಒದಗಿಸಲು ಸರ್ಕಾರಕ್ಕೆ ಮನವಿ: ಶ್ರೀರಾಮುಲು
Team Udayavani, Apr 28, 2022, 3:13 PM IST
ಬಳ್ಳಾರಿ: ತಾಲೂಕಿನ ಚಾಗನೂರು-ಸಿರುವಾರ ಬಳಿ ಕೆಲ ತಿಂಗಳಗಳಿಂದ ನನೆಗುದಿಗೆ ಬಿದ್ದಿರುವ ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೆಗಾ ಪ್ರೊಜೆಕ್ಟ್ ಅಡಿ 100 ಕೋಟಿ ರೂ.ಗಳನ್ನು ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಗ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಪ್ರಸ್ತಾವಕ್ಕೆ ಸಭೆಯಲ್ಲಿ ಹಾಜರಿದ್ದ ಶಾಸಕರು ಹಾಗೂ ಸಂಸದರು ದನಿಗೂಡಿಸಿದರು.
ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆ 2008ರಲ್ಲಿ ಪ್ರಾರಂಭಿಸಲಾಗಿತ್ತು. ಇದರೊಂದಿಗೆ ಕಾಮಗಾರಿ ಆರಂಭವಾಗಿದ್ದ ಕಲಬುರಗಿ, ಶಿವಮೊಗ್ಗ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡುತ್ತಿವೆ. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ನಮ್ಮದು ಆರಂಭದಲ್ಲಿ ಎಲ್ಲಿತ್ತೋ ಇನ್ನೂ ಅಲ್ಲಿಯೇ ಇದೆ. ವಿಮಾನ ನಿಲ್ದಾಣ ಇರದೇ ಇರವುದರಿಂದ ಹೂಡಿಕೆದಾರರು ಮುಂದೆ ಬರುತ್ತಿಲ್ಲ ಎಂದು ಸಚಿವ ಶ್ರೀರಾಮುಲು ಸಭೆಯಲ್ಲಿ ಪ್ರಸ್ತಾಪಿಸಿದರು.
ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ 220 ರಿಂದ 250 ಕೋಟಿ ರೂ.ಗಳ ಅಗತ್ಯವಿದ್ದು, ಕೆಕೆಆರ್ಡಿಬಿಯ ಮೆಗಾ ಪ್ರೊಜೆಕ್ಟ್ ಅನುದಾನದಡಿ 100 ಕೋಟಿಗಳನ್ನು ಒದಗಿಸಿದ್ದಲ್ಲಿ ಉಳಿದ ಅನುದಾನವನ್ನು ಜಿಲ್ಲಾ ಖನಿಜ ನಿಧಿ ಮತ್ತು ಕೆಎಂಇಆರ್ಸಿಯ ಅನುದಾನ ಬಳಸಿಕೊಂಡು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು. ಈ ಕುರಿತು ಎಲ್ಲರ ಸಮ್ಮತಿ ಇದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೋರಿದ ಸಚಿವ ರಾಮುಲು ಅವರಿಗೆ ಸಂಸದರಾದ ವೈ. ದೇವೇಂದ್ರಪ್ಪ, ಸಂಗಣ್ಣ ಕರಡಿ, ಡಾ| ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ. ತುಕಾರಾಂ, ಜಿ. ಸೋಮಶೇಖರರೆಡ್ಡಿ, ಬಿ.ನಾಗೇಂದ್ರ ಮತ್ತು ಎಂ.ಎಸ್. ಸೋಮಲಿಂಗಪ್ಪ ಅವರು ದನಿಗೂಡಿಸಿ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆ ಸೂಚಿಸಿದರು.
ವಿಜಯನಗರ ವಿಶೇಷ ಪ್ರಕರಣ ಆದೇಶ ವಾಪಸ್ಗೆ ಆಗ್ರಹ
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನ ನಿಧಿಯನ್ನು ಹೊಸದಾಗಿ ರಚಿತವಾದ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ವಿಶೇಷ ಪ್ರಕರಣದ ಆದೇಶ ವಾಪಸ್ ಪಡೆದುಕೊಳ್ಳಬೇಕು. ಈ ಕುರಿತು ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಗ್ ಸಭೆಯಲ್ಲಿ ನಡುವಳಿ ಮಂಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಶಾಸಕರಾದ ಇ.ತುಕಾರಾಂ, ಬಿ.ನಾಗೇಂದ್ರ, ಸಂಸದ ಡಾ| ಸೈಯದ್ ನಾಸೀರ್ ಹುಸೇನ್ ಅವರು ಒತ್ತಾಯಿಸಿದರು.
ಈ ಆದೇಶದಿಂದ ನಮ್ಮ ಜಿಲ್ಲೆಗೆ ಅನ್ಯಾಯವಾಗಲಿದ್ದು, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಸಭೆಯ ನಡವಳಿ ಕಳುಹಿಸಿಕೊಡಿ. ಇಲ್ಲದಿದ್ದಲ್ಲಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದು ಶಾಸಕ ತುಕಾರಾಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮುಲು, ತಮ್ಮ ಭಾವನೆಗಳು ನಮಗೆ ಅರ್ಥವಾಗುತ್ತವೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.
ಡಿಸಿ ಪವನಕುಮಾರ ಮಾಲಪಾಟಿ ಮಾತನಾಡಿ, ಡಿಎಂಎಫ್ ನಿಧಿಯಡಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ. 10ರಷ್ಟು ದತ್ತಿ ಹಾಗೂ ಶೇ. 5ರಷ್ಟು ಆಡಳಿತಾತ್ಮಕ ವೆಚ್ಚ ಹೊರತುಪಡಿಸಿ ಉಳಿದ ಶೇ. 85ರಷ್ಟು ಮೊತ್ತದಲ್ಲಿ ಹೆಚ್ಚಿನ ಆದ್ಯತಾ ವಲಯಗಳಿಗೆ ಶೇ.60ರಷ್ಟು ಹಾಗೂ ಇತರೆ ಆದ್ಯತಾ ವಲಯಗಳಿಗೆ ಶೇ.40ರಷ್ಟು ಅನುದಾನ ಹಂಚಿಕೆ ಮಾಡಲಾಗುವುದು ಎಂದರು.
2016-17ರಿಂದ 2021-22ರವರೆಗೆ 6 ಹಂತದ ಕ್ರಿಯಾಯೋಜನೆಗಳು ಮಂಜೂರಾಗಿದ್ದು, ಕ್ರಿಯಾಯೋಜನೆಗಾಗಿ ಅಂದಾಜಿಸಿದ ಮೊತ್ತ ರೂ.2677.95 ಕೋಟಿ. ದತ್ತಿ ನಿಧಿಗಾಗಿ ರೂ.320.04 ಕೋಟಿ, ಆಡಳಿತಾತ್ಮಕ ವೆಚ್ಚಕ್ಕಾಗಿ 133.90 ಕೋಟಿ ರೂ. 2533 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದ್ದು, ಅನುಮೋದಿತ ಕ್ರಿಯಾಯೋಜನೆಗಳ ಕಾಮಗಾರಿಗಳ ಮೊತ್ತ ರೂ.2222.15 ಕೋಟಿಗಳಾಗಿದೆ ಎಂದರು.
ಇಲ್ಲಿಯವರೆಗೆ ರೂ.1973.14 ಕೋಟಿ ಸಂಗ್ರಹವಾಗಿದ್ದು (ಬಳ್ಳಾರಿ ಜಿಲ್ಲೆ: 1759.26 ಕೋಟಿ ರೂ., ವಿಜಯನಗರ ಜಿಲ್ಲೆ 214.01 ಕೋಟಿ ರೂ.) 796.61 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 796 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 640 ಪ್ರಗತಿ ಹಂತದಲ್ಲಿದೆ. 157 ಕಾಮಗಾರಿಗಳು ಆಡಳಿತಾತ್ಮಕ ಮಂಜೂರಾಗಿವೆ. 157 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ.
362 ಸಂಪೂರ್ಣವಾಗಿ ರದ್ದುಪಡಿಸಿ ಪರಿಷ್ಕೃತ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. ಜಿಲ್ಲಾ ಖನಿಜ ನಿಧಿಯ ಅನುದಾನ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಎಡಿಸಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್