`ಗಾಂಧಿ’ ಕುಟುಂಬವನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಲಿ
Team Udayavani, Oct 1, 2022, 6:13 PM IST
ಬಳ್ಳಾರಿ : `ಗಾಂಧಿ’ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿರುವ ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು, ಟಾರ್ಗೆಟ್ ಮಾಡುತ್ತಿರುವವರು ಯಾರು? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ಆಗ್ರಹಿಸಿದರು.
ನಗರದಲ್ಲಿ ಹಿಂದುಳಿದ ವರ್ಗ ಮೋರ್ಚಾದ ಪೂರ್ವಭಾವಿ ಸಭೆಯ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ `ಭಾರತ್ ಜೋಡೊ’ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿಯವರು, ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಟಾರ್ಗೆಟ್ ಮಾಡುತ್ತಿರುವವರು ಮತದಾರರ ಅತವಾ ಇತರೆ ರಾಜಕೀಯ ಪಕ್ಷಗಳವರಾ..? ಎಂಬುದನ್ನು ಸ್ಪಷ್ಟಪಡಿಸಬೇಕು. ಜನರ ಭಾವನೆಗಳನ್ನು ಕೆರಳಿಸುವ ಈ ರೀತಿಯ ಹೇಳಿಕೆಗಳನ್ನು ನೀಡಿ ಅನುಕಂಪ ಗಿಟ್ಟಿಸಿಕೊಳ್ಳಬಾರದು. ಕಾಂಗ್ರೆಸ್ ಪಕ್ಷದ ೭೦ ವರ್ಷದ ಆಡಳಿತ ಏನೆಂಬುದು ಎಂದು ಜನರಿಗೆ ಗೊತ್ತಿದೆ. ಅದನ್ನು ರಾಹುಲ್ ಗಾಂಧಿಯವರು ಹೇಳುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಇದೇ ವೇಳೆ ಭಾರತ್ ಜೋಡೊ ಅಲ್ಲ, ಅದು ಭಾರತ ತೋಡೊ ಎಂದು ಈ ಹಿಂದೆ ನಾನೇ ಹೇಳಿದ್ದೆ ಎಂದು ವ್ಯಂಗ್ಯವಾಡಿದ ಸಚಿವ ಆನಂದ್ಸಿಂಗ್ , ರಾಹುಲ್ ಗಾಂಧಿಯವರು ಕೈಗೊಂಡಿರುವ ಭಾರತ್ ಜೋಡೊ ಪಾದಯಾತ್ರೆಯಿಂದ ದೇಶಕ್ಕಾಗುವ ಲಾಭವೇನು? ಇದರಿಂದ ಜನರ ಸಮಸ್ಯೆಗಳು ಬಗೆಹರಿಸಬಹುದಾ? ಎಂಬ ಪ್ರಶ್ನೆಗಳಿಗೆ ನನಗೆ ಉತ್ತರ ಸಿಗುತ್ತಿಲ್ಲ ಎಂದು ಟೀಕಿಸಿದರು.
ಕಳೆದ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆಗೆ ಕೈಗೊಂಡ ಹಿನ್ನೆಲೆಯಲ್ಲಿ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಬಹುದು. ಹಾಗಾಗಿ ಪಾದಯಾತ್ರೆಯ ಬಹಿರಂಗ ಸಭೆಯನ್ನು ಬಳ್ಳಾರಿಯಲ್ಲಿ ಆಯೋಜಿಸಿ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಕಲ್ಪನೆ ಅವರಲ್ಲಿರಬಹುದು. ಆದರೆ, ಎಲ್ಲ ಸಮಯದಲ್ಲೂ ಹಾಗೆ ಆಗುತ್ತದೆ ಎನ್ನಲಾಗದು. ಅದು ಕಾಂಗ್ರೆಸ್ನವರ ಮೂಢನಂಬಿಕೆ. ಈ ಮೂಢನಂಬಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ, ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.