ಕಲಾವಿದರ ಕೈಚಳಕ; ನೋಡುಗರಿಗೆ ಪುಳಕ!
Team Udayavani, Oct 30, 2017, 4:13 PM IST
ಹೊಸಪೇಟೆ: ಶಿಲ್ಪಕಲೆಯ ತವರೂರು ಐತಿಹಾಸಿಕ ಹಂಪಿಯಲ್ಲಿ ಈಗ ಮತ್ತಷ್ಟು ಶಿಲ್ಪಕಲಾಕೃತಿಗಳು ಅರಳುತ್ತಿವೆ. ರಾಜ್ಯದ ಹಲವು ಶಿಲ್ಪಿಗಳು ತಮ್ಮ ಕೈಚಳಕದಿಂದ ವಿವಿಧ ಶೈಲಿಯ ಕಲಾಕೃತಿಗಳನ್ನು ಅರಳಿಸುತ್ತಿದ್ದಾರೆ. ಹೌದು, ಶಿಲ್ಪಕಲೆಯಿಂದಲೇ ವಿಶ್ವಮಟ್ಟದಲ್ಲಿ ಹೆಸರು ಗಳಿಸಿರುವ ಹಂಪಿಯಲ್ಲಿ ಈಗ ರಾಜ್ಯ ಮಟ್ಟದ ಶಿಲಾಶಿಲ್ಪ ಶಿಬಿರ ನಡೆಯುತ್ತಿದೆ. ಶಿಲ್ಪಕಲೆಯಲ್ಲಿನ ಸೂಕ್ಷ್ಮತೆ, ಅದರ ವಿಸ್ತಾರ, ಸುಂದರ ಶಿಲ್ಪವೊಂದರ ಹಿಂದಿರುವ ಕಲಾವಿದನ ಶ್ರಮ ಇವನ್ನೆಲ್ಲ ಜನರಿಗೆ ಮನವರಿಕೆ ಮಾಡಿಕೊಡಲು ಹಾಗೂ ಕಣ್ಮರೆಯಾಗುತ್ತಿರುವ ಅತ್ಯಂತ ಕಠಿಣ ಎನಿಸಿಕೊಂಡ ಶಿಲ್ಪಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಂಪಿ ಉತ್ಸವದ ಅಂಗವಾಗಿ ಈ ಶಿಬಿರ ಆಯೋಜಿಸಲಾಗಿದೆ.
ಶಿಲಾಶಿಲ್ಪ ಶಿಬಿರದಲ್ಲಿ ಈಗಾಗಲೇ ಇತಿಹಾಸದ ಪುಟ ಸೇರಿರುವ ಹಲವುಕಲಾಕೃತಿಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ವಿಗ್ರಹಗಳ ಕೈತ್ತನೆಯಲ್ಲಿ ತೊಡಗಿದ್ದಾರೆ. ವಿಜಯನಗರ , ಚಾಲುಕ್ಯ, ಹೊಯ್ಸಳ, ಚೋಳರ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕೆತ್ತಲ್ಪಟ್ಟ ಸಾಂಪ್ರಾದಾಯಿಕ ಶಿಲಾ ಶಿಲ್ಪಗಳು ಸಿದ್ಧಗೊಳ್ಳುತ್ತಿದ್ದು, ವಿಜಯನಗರ ಕಾಲದ ವೈಭವವನ್ನು ಪುನಃ ಸಾರುವಂತಿವೆ. ಈ ಎಲ್ಲ ಶಿಲ್ಪಗಳು ಮೂರು ದಿನ ನಡೆಯುವ ಹಂಪಿ ಉತ್ಸವದಲ್ಲಿ ಪ್ರವಾಸಿಗರನ್ನು ತಮ್ಮತ್ತ ಸೆಳೆಯಲಿವೆ.
ಶಿಲಾಶಿಲ್ಪ ಶಿಬಿರದಲ್ಲಿ 17 ಶಿಲೆಗಳನ್ನು ಕೆತ್ತಿದ್ದು, ಅದರಲ್ಲಿ 5 ಸಮಕಾಲಿನ ಶಿಲೆಗಳು ಹಾಗೂ 12 ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಾಂಪ್ರಾದಾಯಿಕ ಶಿಲಾ ವಿಗ್ರಹಗಳು ಸಿದ್ಧವಾಗುತ್ತಿವೆ. ಬೆಳಗಾವಿ ಮೂಲದ ಕಲಾವಿದ ಕೆ.ಆರ್.ಮಹಾದೇವಪ್ಪ ಶ್ರೀಕೃಷ್ಣ ದೇವರಾಯ, ಚನ್ನಾಂಬಿಕೆ, ತಿರುಮಲಾಂಬಿಕೆ ದೇವಿ ವಿಗ್ರಹಗಳನ್ನು ಚೋಳರ ಶೈಲಿಯಲ್ಲಿ ಕೆತ್ತಲಾಗುತ್ತಿದ್ದು ಇದು ಸಾಂಪ್ರಾದಾಯಿಕ ಶಿಲೆಯಾಗಿದೆ. ಅದೇ ರೀತಿಯಲ್ಲಿ ಡಮರುಗ ಬಾರಿಸುವ ವ್ಯಕ್ತಿಯ ಶಿಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಕಲಾವಿದ ಮೋಹನ್ ಹೊಯ್ಸಳ ಶೈಲಿಯಲ್ಲಿ ಕತ್ತುತ್ತಿದ್ದಾರೆ.
ಇನ್ನು ತಂಬ್ರಳ್ಳಿಯ ಬಿ.ಮೌನೇಶ್ಚಾರಿ ಮಹಿಶಾಸುರ ಮರ್ದಿನಿ ಮೂರ್ತಿಯನ್ನು ಕೆತ್ತುವ ಮೂಲಕ ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯವನ್ನು ನೆನಪಿಸಿದ್ದಾರೆ. ಸ್ಥಳೀಯ ಕಮಲಾಪುರದ ಕಲಾವಿದ ಉದಯ್ ಕುಮಾರ್ ವಿಜಯನಗರ ಸಾಮ್ರಾಜ್ಯದ ಶೈಲಿಯ ಶ್ರೀಕೃಷ್ಣದೇವರಾಯ ಶಿಲೆಯನ್ನು ಅರಳಿಸುವ ಮೂಲಕ ಸಾಮ್ರಾಜ್ಯದ ಒಡೆಯ ಶ್ರೀಕೃಷ್ಣದೇವರಾಯನ ದರ್ಶನ ಮಾಡಿಸುತ್ತಿದ್ದಾರೆ. ಕೊಟ್ಟೂರಿನ ಕಲಾವಿದ ಗುರುಬಸವರಾಜ್ ಹೊಯ್ಸಳ ಶೈಲಿಯ ಕಾಳಿಂಗ ಮರ್ಧನ ವಿಗ್ರಹ ಅರಳಿಸುತ್ತಿದ್ದಾರೆ. ಪಾಳೆಗಾರರ ತವರೂರು ಹರಪನಹಳ್ಳಿಯ ಸಿದ್ದೇಶ್ ಅಬೂರ್ ನಾಟ್ಯಶಿವ ಶಿಲಾ ಶಿಲ್ಪವನ್ನು ಹೊಯ್ಸಳ ಶೈಲಿಯಲ್ಲಿ ಕೆತ್ತುತ್ತಿದ್ದಾರೆ. ವಿಜಯಪುರದ ವಿವೇಕ್ ಮದ್ದೂರ್ ಗೋಪಾಲಕೃಷ್ಣ ವಿಗ್ರಹವನ್ನು ಹೊಯ್ಸಳ ಶೈಲಿಯಲ್ಲಿ ಅಮೋಘವಾಗಿ ಕೆತ್ತಿದ್ದಾರೆ.
ಗದಗಿನ ವೆಂಕಟೇಶ್ ಸುತಾರ್ ಸಾಂಪ್ರದಾಯಿಕ ಚಾಲುಕ್ಯರ ಶೈಲಿಯಲ್ಲಿ ತ್ರಿಕಾಲೇಶ್ವರ ವಿಗ್ರಹವನ್ನು ಅರಳಿಸಿದ್ದಾರೆ.
ಬಳ್ಳಾರಿಯ ಚಂದ್ರಶೇಖರ್ ಹೊಯ್ಸಳರ ಕಾಲದ ನಾಟ್ಯ ಸರಸ್ವತಿ ವಿಗ್ರಹ ತಯಾರಿಸುವಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಮಂಡ್ಯದ ಕಲಾವಿದ ಪಿ.ಸಂದೀಪ್ ಚಾಳುಕ್ಯ ಶೈಲಿಯಲ್ಲಿ ಶಂಕು ಭಾಷಿಣಿ ವಿಗ್ರಹ ತಯಾರಿಸುತ್ತಿದ್ದಾರೆ.
ಸದ್ಯ ವಿಶ್ವ ಪಾರಂಪರಿಕ ಹಂಪಿಯಲ್ಲಿ ಝಗಮಗಿಸುವ ಸ್ಮಾರಕಗಳಂತೆಯೇ ಇಲ್ಲಿ 2017ರ ಹಂಪಿ ಉತ್ಸವದಲ್ಲಿ ನೂತನವಾಗಿ ನಿರ್ಮಿಸಲಾಗುವ ಸಾಂಪ್ರಾದಾಯಿಕ ಹಾಗೂ ನವ್ಯ ಕಲಾಶಿಲ್ಪ (ಸಮಕಾಲಿನ) ಶಿಲೆಗಳಿಗೆ ಪ್ರಾಮುಖ್ಯತೆ ಸಿಗಲಿದ್ದು, ಇವುಗಳೆಲ್ಲವೂ ಉತ್ಸವದ ನಂತರವೂ ಜನರ ಮನ ಸೆಳೆಯಲಿವೆ. ಹಾಗಾಗಿ ರಾಜ್ಯದ ಹಲವೆಡೆಯಿಂದ ಬಂದ ಶಿಲಾಶಿಲ್ಪ ಕಲಾವಿದರು ತುಂಬಾ ಉತ್ಸುಕರಾಗಿ ಶಿಲೆಗಳನ್ನು ಅರಳಿಸಲು ಮುಂದಾಗಿದ್ದಾರೆ. ಇನ್ನು ಸಮಕಾಲೀನ ನವ್ಯ ಶಿಲಾಶಿಲ್ಪಗಳು ಸಾಮಾಜಿಕ ಸಂದೇಶವನ್ನು ಸಾರುತ್ತಿವೆ. ಬರಗಾಲ, ಕುಡಿವ ನೀರಿನ ಅಭಾವ, ಪರಿಸರ ಮಾಲಿನ್ಯ, ಜಲ ಸಂರಕ್ಷಣೆ ಜಾಗೃತಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಶಿಲ್ಪಗಳನ್ನು ತಯಾರಿಸುವಲ್ಲಿ ಕಲಾವಿದರು ತಮ್ಮ ಕೈಚಳಕ ತೋರುತ್ತಿದ್ದಾರೆ. ಈ ಎಲ್ಲ ಕಲಾಕೃತಿಗಳಿಗೆ ಪ್ರಸ್ತುತ ವರ್ಷದ ಮುದ್ರೆ(2017) ಸಹ ಹಾಕಲಾಗುತ್ತಿದೆ. ಇದರಿಂದ ಈಗಿನ ಸಂದರ್ಭದ ಸ್ಥಿತಿಗಳನ್ನು ಇನ್ನೊಂದು ಪೀಳಿಗೆಯವರು ತಿಳಿದುಕೊಳ್ಳಲು ಕಲಾಕೃತಿಗಳು ಸಹಾಯಕವಾಗಲಿವೆ.
ಜಂಬುನಾಥ ಬಡಿಗೇರ್ ಎಂಬ ಕಲಾವಿದ ಪುಸ್ತಕ ಮತ್ತು ಮಸ್ತಕ ಎಂಬ ನವ್ಯ ಶಿಲಾಶಿಲ್ಪವನ್ನು ರಚಿಸುತ್ತಿದ್ದಾರೆ. ಗದಗ
ಜಿಲ್ಲೆಯ ಬಸಪ್ಪ ಶಿವಪ್ಪ ಬಂಡಿವಡ್ಡರ್ ಜಲ ಸಂರಕ್ಷಣೆ ಸಾರುವ ಶಿಲ್ಪ ಕೆತ್ತುತ್ತಿದ್ದಾರೆ. ಕೊಪ್ಪಳದ ಕುಕನೂರಿನ ಹುಚ್ಚೀರಪ್ಪ ಜಾಗತಿಕ ತಾಪಮಾನದ ಬಗ್ಗೆ ಸಾರುವ ಕಲಾಕೃತಿ ಅನಾವರಣಗೊಳಿಸುತ್ತಿದ್ದಾರೆ. ಕಲಬುರ್ಗಿಯ ಕಲಾವಿದ ಬಾಬುರಾವ್ ಮೊಳಕೆ ನವ್ಯ ಶಿಲಾಶಿಲ್ಪ ರಚಿಸಿದ್ದು, ಇದು ಬರಗಾಲದ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಇನ್ನು ಶಿಬಿರದಲ್ಲಿ ವಿಶೇಷವಾಗಿ ಹಂಪಿಯ ಪರಂಪರೆ ಸಾರುವ ಹಲವು ಸ್ಮಾರಕಗಳನ್ನು ಒಟ್ಟೂಗುಡಿಸುವ ಪ್ರಯತ್ನವನ್ನು ಉತ್ತರ ಕನ್ನಡ ಜಿಲ್ಲೆಯ ಚಂದ್ರಶೇಖರ್ ನಾಯಕ್ ಮಾಡುತ್ತಿದ್ದು, ಕಲ್ಲಿನ ರಥ, ಜೈನ ದೇವಾಲಯ, ಬಿಷ್ಟಪ್ಪಯ್ಯ ಗೋಪುರ, ಲೋಟಸ್ ಮಹಲ್, ಅಕ್ಕ-ತಂಗಿ ಗುಡ್ಡ, ಹೇಮಕೂಟದ ಸ್ಮಾರಕಗಳು ಶಿಲಾ ಮಂಟಪಗಳು ಒಂದೇ ಕಡೆ ಕಾಣಸಿಗುಂತೆ ತಮ್ಮದೇ ಶೈಲಿಯಲ್ಲಿ ಹೊಸ ಕಲಾಕೃತಿ ರೂಪಿಸುತ್ತಿದ್ದಾರೆ.
ಶಿಲ್ಪಗಳು ಶೇ.75ರಷ್ಟು ಪೂರ್ಣಗೊಂಡಿದ್ದು, ಪ್ರಭಾವಳಿ, ಆಭರಣಗಳ ಕೆತ್ತನೆ ಜೋರಾಗಿ ನಡೆದಿದೆ. ವಿಗ್ರಹ ರಚನೆಯಲ್ಲಿ ತೀರ ಸೂಕ್ಷ್ಮವಾದ ಕಾರ್ಯ ಎಂದರೆ ಆಭರಣ ಮತ್ತು ಪ್ರಭಾವಳಿಗಳು. ಕಲ್ಲಲ್ಲಿ ಕಲೆಯನ್ನು ಅರಳಿಸುವ ಶಕ್ತಿ ಜಕ್ಕಣಾಚಾರ್ಯರಂತೆ ಶ್ರದ್ಧೆ, ನಿಷ್ಠೆ ಹೊಂದಿದವರಿಗೆ ಮಾತ್ರ ಸಾಧ್ಯ. ಭಾರತ ಸಾಂಪ್ರಾದಾಯಿಕ, ಸಾಂಸ್ಕೃತಿಕ, ಕಲೆ, ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಈಗಲೂ ಅಂಥ ಕಲೆ ಉಳಿಸುವ ಕಲಾವಿದರು ಕಾಣುತ್ತಿರುವುದು ಈ ನಾಡಿನ ಹೆಮ್ಮೆಯಾಗಿದೆ.
ಪ್ರೊ| ಎಚ್.ಎನ್.ಕೃಷ್ಣೇಗೌಡ, ದೃಶ್ಯಕಲಾ ವಿಭಾಗ ಕವಿವಿ (ವೀಕ್ಷಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ