ಮನಸ್ಸು ಮಾಡಿದರೆ ನಾನು ಸಿಎಂ ಆಗುವೆ: ಜನಾರ್ದನ ರೆಡ್ಡಿ
Team Udayavani, Jun 22, 2022, 10:24 PM IST
ಬಳ್ಳಾರಿ: ನಾನು ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಹಿರಿಯ ಸಹೋದರ, ಶಾಸಕ ಜಿ. ಸೋಮಶೇಖರ ರೆಡ್ಡಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ. ಆದರೆ ನನಗೆ ಸಿಎಂ ಆಗುವ ಆಸೆ ಇಲ್ಲ. ಆದರೆ, ಮನಸ್ಸು ಮಾಡಿದರೆ ಸಿಎಂ ಆಗುವುದು ಸುಲಭ. ನನ್ನ ಸಹೋದರ ಕರುಣಾಕರ ರೆಡ್ಡಿ ಸಂಸದರಾಗಿದ್ದವರು.
ಮತ್ತೋರ್ವ ಸಹೋದರ ಸೋಮಶೇಖರ ರೆಡ್ಡಿ ನಗರಸಭೆ ಅಧ್ಯಕ್ಷರಾಗಿದ್ದರು. ಆಗ ನನಗೆ ಕೊಡಲಾರದಷ್ಟು ಕಷ್ಟ ಕೊಟ್ಟರು. ಆದರೂ ನಾನು ಕನಕದುರ್ಗಮ್ಮ ಆಶೀರ್ವಾದದಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದರು.
ನನ್ನನ್ನು ಬಂಧಿ ಸಲು ಬಂದ ಸಿಬಿಐ ಅ ಧಿಕಾರಿಗಳೇ ನನಗೆ ಹೇಳಿದ್ದರು. ರೆಡ್ಡಿಯವರೆ ನಿಮಗೆ ತೊಂದರೆ ಕೊಡಬೇಕೆಂದು ಮೇಲಿನವರು ಆದೇಶ ನೀಡಿದ್ದಾರೆ. ಅವರ ಉದ್ದೇಶ ನಿಮ್ಮನ್ನು ನೋಯಿಸುವುದು ಆಗಿದೆ ಎಂದಿದ್ದರು. ಆದರೆ ಬಳ್ಳಾರಿ ಜನರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಹ ಅವರು ಹೇಳಿದ್ದರು.
ಈ ಮಾತು ನನಗೆ ಇಂದಿಗೂ ನೆನಪಿದೆ. ಅದು ಇಂದು ನನ್ನ ಕಣ್ಣ ಮುಂದೆ ಕಾಣುತ್ತಿದೆ. ನಾನು ಸಲಹೆ ನೀಡಿದ ಕಾರಣಕ್ಕೆ ಅದಿರಿನ ಮೇಲೆ ಅಂದಿನ ಸಿಎಂ ಯಡಿಯೂರಪ್ಪ ಹೆಚ್ಚಿನ ತೆರಿಗೆ ವಿಧಿ ಸಲು ಒಪ್ಪಿದ ಪರಿಣಾಮ 13 ವರ್ಷಗಳಲ್ಲಿ 25 ಸಾವಿರ ಕೋಟಿ ರೂ. ಆದಾಯ ಬಂದಿದೆ. ಇದರಿಂದ ವಿಜಯನಗರ, ಬಳ್ಳಾರಿ ಎರಡೂ ಜಿಲ್ಲೆಗಳು ಅಭಿವೃದ್ಧಿ ಕಾಣಲಿವೆ. ಅವಳಿ ಜಿಲ್ಲೆಗಳು ನನ್ನ ಎರಡು ಕಣ್ಣಿದ್ದಂತೆ ಎಂದರು.