ತಾಳ್ಮೆ ಕಳೆದುಕೊಳ್ಳಬೇಡಿ, ಮೀಸಲಾತಿ ಸಿಗುತ್ತೆ; ಸಚಿವ ಬಿ. ಶ್ರೀರಾಮುಲು
ಬಳ್ಳಾರಿಯ ಶಕ್ತಿ ಬಗ್ಗೆ ರಾಜ್ಯಕ್ಕೆ ಗೊತ್ತಿದೆ
Team Udayavani, Sep 13, 2022, 6:37 PM IST
ಬಳ್ಳಾರಿ: ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎನ್ನುವುದು ಸಮುದಾಯದ ಒತ್ತಡ. ನಮ್ಮ ಆಗ್ರಹ ಕೂಡ ಇದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಗಳು ಇರುವ ಕಾರಣ ಮೀಸಲಾತಿ ಘೋಷಣೆ ತಡವಾಗುತ್ತಿದೆ. ನಾವು ಯಾರೂ ಕೂಡ ತಾಳ್ಮೆ ಕಳೆದುಕೊಳ್ಳದೇ ಬಿಜೆಪಿಗೆ ನಿಷ್ಠರಾಗಿ ಇರೋಣ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮನವಿ ಮಾಡಿದರು.
ಸೆ. 23ರಂದು ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಳ್ಳಾರಿ ವಿಭಾಗದ ಬಿಜೆಪಿ ಪದಾಧಿ ಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಮೊದಲು ನಾನು ಸಂಸದನಾಗಿದ್ದಾಗ ಮೋದಿ ಅವರು ನನಗೂ ಮತ್ತು ಯಡಿಯೂರಪ್ಪ ಅವರಿಗಷ್ಟೆ ಕರೆದು ಶಾಸಕ ಸ್ಥಾನಕ್ಕೆ ನಿಲ್ಲುವಂತೆ ಸೂಚಿಸಿದ್ದರು. ರಾಷ್ಟ್ರಪತಿಯನ್ನಾಗಿ ಎಸ್ಟಿ ಸಮುದಾಯದ ಮಹಿಳೆಯನ್ನಾಗಿ ಬಿಜೆಪಿ ಮಾಡಿದೆ. ಎರಡೆರಡು ಕಡೆ ಟಿಕೆಟ್ ನೀಡಿ ನನಗೆ ಅವಕಾಶ ಕೊಟ್ಟಿದ್ದು ಬಿಜೆಪಿ. ಹೀಗಾಗಿ ಪಕ್ಷದ ಬಗ್ಗೆ ನಾವ್ಯಾರು ನಕರಾತ್ಮಕವಾಗಿ ಮಾತನಾಡಬಾರದು. ಮೊಳಕಾಲ್ಮೂರಲ್ಲಿ ನಾನು ಗೆದ್ದೆ. ಬಾದಾಮಿಯಲ್ಲಿ ಕೇವಲ 1600 ಮತಗಳಲ್ಲಿ ಸೋತೆ.
ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹಿಂದೆ ಎರಡು ಕಡೆ ಸ್ಪರ್ಧಿಸಿದ್ದರು. 2018ರಲ್ಲಿ ಓರ್ವ ಎಸ್ಟಿ. ಸಮುದಾಯದ ವ್ಯಕ್ತಿಗೆ ಅವಕಾಶ ನೀಡಿದ್ದು ಮಾತ್ರ ಬಿಜೆಪಿ. ನಮ್ಮ ಸಮುದಾಯಕ್ಕೆ ಏನೇ ನೀಡಿದರೂ ಅದು ಬಿಜೆಪಿ ಮಾತ್ರ. ಬೊಮ್ಮಾಯಿಯವರು ನಮ್ಮ ಸಮುದಾಯಕ್ಕಾಗಿ ಒಂದು ಸಚಿವಾಲಯ ಮಾಡಿದ್ದಾರೆ. ಮೀಸಲಾತಿ ಸಿಗಬೇಕಿದೆ ಎನ್ನುವುದು ನಮ್ಮ ಒತ್ತಡ ಇದೆ. ಬರುವ ದಿನಗಳಲ್ಲಿ ಅದು ಸಹ ಆಗಲಿದೆ. ಪಕ್ಷ ನಮಗೆ ಮಾತು ಕೊಟ್ಟಿದೆ. ಅದನ್ನು ಉಳಿಸಿಕೊಳ್ಳಲಿದೆ. ನೀವ್ಯಾರೂ ಚಿಂತಿಸಬಾರದು ಎಂದು ಅವರು ಮನವಿ ಮಾಡಿದರು. ಮೀಸಲಾತಿ ಬಗ್ಗೆ ಕಾಂಗ್ರೆಸ್ ನವರು ಕೇವಲ ಮಾತಾಡುತ್ತಾರೆ. ಆದರೆ ಸಮುದಾಯಕ್ಕೆ ಏನನ್ನೂ ಮಾಡಿಲ್ಲ. ಪಕ್ಷ ಹಾಗೂ ನಾನು ಈ ಹಿಂದೆ ಮಾತುಕೊಟ್ಟಂತೆ ಮೀಸಲಾತಿ ಸಿಗುತ್ತದೆ. ಇದಕ್ಕೆ ತಾಂತ್ರಿಕ ಸಮಸ್ಯೆಗಳಿವೆ. ಅಮಿತ್ ಷಾ ಸಹ ನಮ್ಮ ಸಮುದಾಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಇವತ್ತಲ್ಲ ನಾಳೆ ಸಿಗಲಿದೆ. ತಾಳ್ಮೆ ಇರಲಿ ಎಂದು ಮನವಿ ಮಾಡಿದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಎರಡು ಶಾಸಕರಿಂದ ಇಂದು ನೂರು ಶಾಸಕ ಸಂಖ್ಯೆ ದಾಟುವಷ್ಟು ಶಕ್ತಿ ಬಿಜೆಪಿ ಪಡೆದಿರುವುದು ಕಾರ್ಯಕರ್ತರ ತ್ಯಾಗದಿಂದ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ. ಜಿಎಸ್ಟಿ ಸೇರಿ ಕೆಲ ವಿಷಯಗಳ ಬಗ್ಗೆ ಕಾಂಗ್ರೆಸ್ನವರಿಗೆ ಏನೂ ಗೊತ್ತಿಲ್ಲ. ಸುಮ್ಮನೆ ಬಂದು ಮಾಧ್ಯಮದವರ ಮುಂದೆ ಬಂದು ಮಾತನಾಡುತ್ತಾರೆ.
ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷವನ್ನು ಅಧಿಕಾರಕ್ಕೆ ತರೋಣ. ಬರುವ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿ ಹತ್ತೂ ಕ್ಷೇತ್ರಗಳನ್ನು ಗೆಲ್ಲುವಂತೆ ಮಾಡಲು ಹಕ್ಕರಾಯನಂತಿರುವ ಶ್ರೀರಾಮುಲು ಬುಕ್ಕರಾಯನಂತಿರುವ ನಾನು ಮಾಡುತ್ತೇವೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನ ಮಾತನಾಡಿ, ಎಸ್.ಟಿ. ಸಮಾವೇಶಕ್ಕೆ ಕನಿಷ್ಟ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಷ್ಟು ಜನ ಸೇರಿಸುವ ಶಕ್ತಿ ಅಖಂಡ ಬಳ್ಳಾರಿ ಜಿಲ್ಲೆಗಿದೆ. ಶ್ರೀರಾಮುಲು ಮತ್ತು ಆನಂದ್ ಸಿಂಗ್ ಜೋಡೆತ್ತುಗಳಾಗಿ ಕೆಲಸ ಮಾಡಲಿದ್ದಾರೆ. ಬಳ್ಳಾರಿಯ ಶಕ್ತಿ ಬಗ್ಗೆ ರಾಜ್ಯಕ್ಕೆ ಗೊತ್ತಿದೆ ಎಂದರು.
ಮೀಸಲಾತಿ ಹೆಚ್ಚಿಸಿ: ನಗರ ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಎಸ್ಟಿ ಸಮುದಾಯಕ್ಕೆ ಈಗ ಅವರು ಕೇಳುತ್ತಿರುವ ಶೇ. 7.5ರಷ್ಟು ಮೀಸಲಾತಿ ನೀಡಬೇಕು. ಜೊತೆಗೆ ಎಸ್ಸಿ ಸಮುದಾಯಕ್ಕೂ ಮೀಸಲಾತಿ ಘೋಷಿಸಬೇಕು. ಆಗಮಾತ್ರ ಬರುವ ಚುನಾವಣೆಯಲ್ಲಿ ಎಲ್ಲ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಾತಿ ಘೋಷಿಸಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ಬಿಜೆಪಿ ರಾಜ್ಯ
ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಮಾತನಾಡಿದರು.
ಸಭೆಯಲ್ಲಿ ಸಂಸದ ವೈ. ದೇವೇಂದ್ರಪ್ಪ, ರೈತ ಮೋರ್ಚಾದ ಗುರುಲಿಂಗನಗೌಡ, ಎಸ್.ಟಿ. ಮೋರ್ಚಾದ ದಿವಾಕರ, ಶಾಸಕ ಸೋಮಲಿಂಗಪ್ಪ, ಶಿವನಗೌಡ ನಾಯಕ್, ಜಗಳೂರಿನ ಎಸ್.ವಿ.ರಾಮಚಂದ್ರ, ಎನ್.ವೈ. ಗೋಪಾಲಕೃಷ್ಣ, ಬಸವರಾಜ ದಡೆಸೂಗೂರ, ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕ ಚಂದ್ರನಾಯ್ಕ, ಪ್ರತಾಪಗೌಡ ಪಾಟೀಲ್, ನೇಮಿರಾಜ ನಾಯ್ಕ, ಟಿ.ಎಚ್. ಸುರೇಶಬಾಬು, ಮಾಜಿ ಸಂಸದೆ ಜೆ. ಶಾಂತಾ, ಪೂಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಮುರಹರಿಗೌಡ, ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಕೊಪ್ಪಳ ಪ್ರಭಾರಿ ಪ್ರಭು ಕಪ್ಪಗಲ್ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು
ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು
Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು
Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು