ಒಂದೇ ಕಾಲೇಜಿಗೆ ಮೂರು ಅಗ್ರ ಶ್ರೇಣಿ
Team Udayavani, May 1, 2018, 6:55 AM IST
ಬಳ್ಳಾರಿ: ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಸತತ 4ನೇ ವರ್ಷ ರಾಜ್ಯದ ಮೊದಲ ಮೂರು ಸ್ಥಾನಗಳನ್ನು ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದು ಪಿಯು ಕಾಲೇಜು ಪಡೆದಿದೆ.
600ಕ್ಕೆ 595 ಅಂಕ ಪಡೆದ ಕೊಟ್ಟೂರು ಸಮೀಪದ ರಾಂಪುರದ ಎಸ್.ಸ್ವಾತಿ ಪ್ರಥಮ, 593 ಅಂಕ ಗಳಿಸಿದ ಸಿರುಗುಪ್ಪ ತಾಲೂಕು ಅಗಲೂರು ಗ್ರಾಮದ ರಮೇಶ್ ದ್ವಿತೀಯ ಹಾಗೂ 588 ಅಂಕಗಳಿಸಿದ ಬಳ್ಳಾರಿ ತಾಲೂಕು ಬಾದನಹಟ್ಟಿಯ ಗೊರವರ ಕಾವ್ಯಾಂಜಲಿ ತೃತೀಯ ಸ್ಥಾನ ಗಳಿಸಿದವರು. ವಿದ್ಯಾರ್ಥಿಗಳ ಸಾಧನೆಯಿಂದ ಕಾಲೇಜಿನಲ್ಲಿ ಸಂಭ್ರಮ ಮನೆಮಾಡಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಎಸ್. ಸ್ವಾತಿ ಅವರಿಗೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಸಿಹಿ ತಿನಿಸಿ ಶುಭ ಕೋರಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಯಿತು.
ಕೆಎಎಸ್ ಮಾಡುವ ಗುರಿ: ಪ್ರಥಮ ಸ್ಥಾನ ಗಳಿಸಿದ ಎಸ್. ಸ್ವಾತಿ ಪ್ರತಿದಿನ 6 ಕಿ.ಮೀ. ದೂರದಿಂದ ಕಾಲೇಜಿಗೆ ಬಂದು, ದಿನಕ್ಕೆ 8 ತಾಸಿಗೂ ಹೆಚ್ಚು ಸತತ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾಳೆ. ಮುಂದೆ ಕೆಎಎಸ್ ಪರೀಕ್ಷೆ ಎದುರಿಸಬೇಕೆನ್ನುವುದು ಈಕೆಯ ಆಸೆ. “ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಕ್ಕೆ ತುಂಬ ಖುಷಿಯಾಗುತ್ತಿದೆ. ನಿತ್ಯ 6 ಕಿ.ಮೀ. ದೂರದಿಂದ ಕಾಲೇಜಿಗೆ ಬಂದಿದ್ದಕ್ಕೆ ಸಾರ್ಥಕವೆನಿಸುತ್ತದೆ. ಪ್ರತಿದಿನ ಕಾಲೇಜಿನಿಂದ ಮನೆಗೆ ಹೋದ ಬಳಿಕ 7 ರಿಂದ 12 ಗಂಟೆಯವರೆಗೆ ಓದುತ್ತಿದ್ದೆ. ಪುನಃ ಬೆಳಗಿನ ಜಾವ 4 ಗಂಟೆಗೆ ಎದ್ದು, ಅಭ್ಯಾಸ ಮಾಡುತ್ತಿದ್ದೆ. ಆರಂಭದಲ್ಲಿ ಮನೆಗೆಲಸದಲ್ಲಿ ತಾಯಿಗೆ ನೆರವಾಗುತ್ತಿದ್ದೆ. ಆದರೆ, ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಹೆಚ್ಚು ಅಭ್ಯಾಸ ಮಾಡಿದೆ.
ಇದಕ್ಕೆ ನನ್ನ ತಾಯಿ ಸಹ ಸಹಕಾರ ನೀಡಿದ್ದು, 595 ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಪರೀಕ್ಷೆ ಸಮರ್ಪಕವಾಗಿ ಎದುರಿಸಿದ್ದರಿಂದ ಹೆಚ್ಚು ಅಂಕಗಳು ಬರಬಹುದೆಂಬ ನಿರೀಕ್ಷೆಯಿತ್ತು. ಆದರೆ, ರಾಜ್ಯಕ್ಕೆ ಪ್ರಥಮ ಬರುತ್ತೇನೆಂದು
ಅಂದುಕೊಂಡಿರಲಿಲ್ಲ. ಕಾಲೇಜಿನಲ್ಲೂ ಉಪನ್ಯಾಸಕರು ಉತ್ತಮವಾಗಿ ಪಾಠ ಮಾಡುತ್ತಿದ್ದರು. ಪ್ರತಿಯೊಬ್ಬರಿಗೂ ವಿಷಯ ಮನದಟ್ಟಾಗುವಂತೆ ಹೇಳಿಕೊಡುತ್ತಿದ್ದರು. ಮುಖ್ಯವಾಗಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಪ್ರತಿದಿನ ಬೆಳಗ್ಗೆ 8:30ಕ್ಕೆ ಮತ್ತು ಭಾನುವಾರವೂ ವಿಶೇಷ ತರಗತಿ ನಡೆಸುತ್ತಿದ್ದರು.
ಪರೀಕ್ಷೆಯಲ್ಲಿ ಒಂದು ಅಂಕದ ಪ್ರಶ್ನೆಗೆ ಹೇಗೆ ಮತ್ತು ಎಷ್ಟು ಲೈನ್ ಉತ್ತರ ಬರೆಯಬೇಕು. ಎರಡು ಮತ್ತು ಅದಕ್ಕೂ ಹೆಚ್ಚು ಅಂಕಗಳ ಪ್ರಶ್ನೆಗಳನ್ನು ಹೇಗೆ ಉತ್ತರಿಸಬೇಕು. ಬರೆದ ಉತ್ತರದಲ್ಲಿ ಯಾವ ಶಬ್ದಗಳಿಗೆ ಅಂಡರ್ಲೈನ್ ಮಾಡಬೇಕು ಎಂಬುದನ್ನು ಹೇಳಿಕೊಡುವುದರ ಜತೆಗೆ ಅಕ್ಷರ ದೋಷಗಳಿಲ್ಲದೆ ಬರೆಯುವುದನ್ನು ತಿಳಿಸುತ್ತಿದ್ದರು. ಅವರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸಿದೆ. ಹೀಗಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಕಾರಣವಾಯಿತು. ಮುಂದೆ ಕೆಎಎಸ್ ಮಾಡ ಬೇಕೆಂಬ ಗುರಿಹೊಂದಿದ್ದೇನೆ ಎಂದು ತಿಳಿಸಿದರು.
ತಾಯಿ ಆಸೆಯಂತೆ ಐಎಎಸ್ ಗುರಿ: ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಸಿರುಗುಪ್ಪ ತಾಲೂಕು ಆಗಲೂರು ಗ್ರಾಮದ ರಮೇಶ್ ಮಾತನಾಡಿ,ಖುಷಿಯಾಗಿದೆ. ಹೆಚ್ಚು ಅಂಕದ ನಿರೀಕ್ಷೆಯಿತ್ತು. ಆದರೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಸಿಗಬಹುದೆನ್ನುವ ನಿರೀಕ್ಷೆ ಇರಲಿಲ್ಲ. ಪ್ರತಿದಿನ 8 ರಿಂದ 10 ತಾಸು ಅಭ್ಯಾಸ ಮಾಡುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಮಾಡುವ ಪಾಠವನ್ನು ನನ್ನದೇ ಆದ ರೀತಿಯಲ್ಲಿ ಕೀ ಪಾಯಿಂಟ್ಸ್ ಮಾಡಿಕೊಳ್ಳುತ್ತಿದ್ದೆ. ಆ ಪಾಯಿಂಟ್ಸ್ಗಳನ್ನು ಬಳಸಿ ಕೊಂಡು ಪ್ರತಿಯೊಂದು ಪ್ರಶ್ನೆಗಳಿಗೆ ನನ್ನದೇ ಆದ ಶೈಲಿಯಲ್ಲಿ ಉತ್ತರ ಬರೆಯುವುದನ್ನು ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ. ಇನ್ನು ತರಗತಿಯಲ್ಲೂ ವಿದ್ಯಾರ್ಥಿಗಳಿಗೆ ವಿಷಯ ಅರ್ಥವಾಗುವವರೆಗೂ ಉಪನ್ಯಾಸಕರು ಬಿಡುತ್ತಿರಲಿಲ್ಲ. ಅದು ದ್ವಿತೀಯ ಸ್ಥಾನಗಳಿಸಲು ನೆರವಾಯಿತು ಎಂದರು.
ನನ್ನನ್ನು ಐಎಎಸ್ ಅಧಿಕಾರಿಯನ್ನಾಗಿ ನೋಡಬೇಕೆಂಬುದು ತಾಯಿಯ ಆಸೆ. ಅವರ ಆಸೆಯಂತೆಯೇ ಐಎಎಸ್ ಮಾಡಬೇಕೆಂಬ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ಟೈಲರ್ ಮಗಳ ಸಾಧನೆ: ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿದ ಗೊರವರ ಕಾವ್ಯಾಂಜಲಿ ಅನಿಸಿಕೆ ಹಂಚಿಕೊಂಡು, ತೃತೀಯ ಸ್ಥಾನ ಗಳಿಸಿದ್ದಕ್ಕೆ ಸಂತಸವಾಗಿದೆ. ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸಬೇಕೆಂಬ ಆಸೆಯಿದ್ದರೂ, ಮನೆಯಲ್ಲಿನ ಆರ್ಥಿಕ ತೊಂದರೆ ನೀಗಿಸಲು ಮೊದಲು ವಿಲೇಜ್ ಅಕೌಂಟೆಂಟ್ ಆಗಬೇಕೆಂದಿದ್ದೇನೆ. ಈ ಹುದ್ದೆ ದೊರೆತಲ್ಲಿ ನನ್ನ ಅಕ್ಕ ಮತ್ತು ತಂಗಿಗೂ ಉತ್ತಮ ಶಿಕ್ಷಣ ಕೊಡಿಸಲು ನೆರವಾಗಲಿದೆ. ನಂತರ ಮುಂದಿನ ವ್ಯಾಸಂಗ ಅಥವಾ ಕೆಎಎಸ್ಗೆ ಸಿದಟಛಿತೆ ನಡೆಸುವೆ ಎಂದರು.
ಬಳ್ಳಾರಿ ತಾಲೂಕು ಬಾದನಹಟ್ಟಿ ನಿವಾಸಿಗಳಾದ ನಮಗೆ ಯಾವುದೇ ಜಮೀನು ಇಲ್ಲ. ನನ್ನ ತಂದೆ-ತಾಯಿಯ ಟೈಲರ್ ಕೆಲಸವೇ ನಮ್ಮ ಜೀವನಕ್ಕೆ ಆಸರೆ. ನಾವು ಮೂವರು ಹೆಣ್ಣು ಮಕ್ಕಳಾಗಿದ್ದರಿಂದ ನಮ್ಮನ್ನು ಓದಿಸುವುದು ನಮ್ಮ ತಂದೆ-ತಾಯಿಗೂ ಒಂದಷ್ಟು ಕಷ್ಟವಾಗುತ್ತಿತ್ತು. ಪರಿಣಾಮ 10ನೇ ತರಗತಿಗೇ ನನ್ನ ಶಿಕ್ಷಣ ಸ್ಥಗಿತಗೊಳ್ಳಬೇಕಿತ್ತು. ನಾನು ಚೆನ್ನಾಗಿ ಓದುತ್ತಿದ್ದನ್ನು ಗಮನಿಸಿದ್ದ ಧರ್ಮಪ್ಪ ಎಂಬ ನಮ್ಮ ಶಾಲೆಯ ಶಿಕ್ಷಕರು ನನ್ನ ತಂದೆ-ತಾಯಿಯ ಮನವೊಲಿಸಿ ನನ್ನನ್ನು ಪಿಯುಸಿಗೆ ಕೊಟ್ಟೂರಿನ ಇಂದು ಪಿಯು ಕಾಲೇಜಿಗೆ ಸೇರಿಸಿದರು. ಕೊಟ್ಟೂರಿನಲ್ಲೇ ಬಿಸಿಎಂ ವಸತಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿದ್ದು, ಉಪನ್ಯಾಸಕರ ಪಾಠ ಹಾಗೂ ನನ್ನ ಸತತ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ