ಅದಿರು ಸಾಗಣೆ: 40ಕ್ಕೂ ಹೆಚ್ಚು ಲಾರಿ ವಶ
Team Udayavani, May 28, 2018, 6:55 AM IST
ಹೊಸಪೇಟೆ: ಅವಧಿ ಮೀರಿದ ಪರವಾನಗಿ ಬಳಸಿ ಸ್ಥಳೀಯ ಕಾರ್ಖಾನೆಗಳಿಗೆ ಅದಿರು ಸಾಗಿಸುತ್ತಿದ್ದ 40ಕ್ಕೂ ಹೆಚ್ಚು ಲಾರಿಗಳನ್ನು ನಗರ ಹೊರವಲಯದ ಸಂಡೂರು ರಸ್ತೆ ಬೈಪಾಸ್ ಚೆಕ್ಪೋಸ್ಟ್ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಂಡೂರು ಗಣಿ ಪ್ರದೇಶದಿಂದ ಅದಿರು ಹೇರಿಕೊಂಡು ಸ್ಥಳೀಯ ಬಿಎಂಎಂ ಇಸ್ಪಾತ್ ಹಾಗೂ ಕಲ್ಯಾಣಿ ಕಾರ್ಖಾನೆಗಳಿಗೆ ತೆರಳುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡು ಗುಂಡಾ ಸಸ್ಯೋದ್ಯಾನ ವನದಲ್ಲಿ ತಂದು ನಿಲ್ಲಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಅನೇಕ ಕಾನೂನು ಜಾರಿಯಲ್ಲಿದ್ದರೂ, ಅವಧಿ ಮೀರಿದ ಪರವಾನಗಿ ಬಳಸಿ ಅದಿರು ಸಾಗಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಕ್ರಮ ಗಣಿಗಾರಿಕೆ ನಡೆಯದಂತೆ ತೀವ್ರ ನಿಗಾ ವಹಿಸಲು ಚೆಕ್ಪೋಸ್ಟ್ಗಳಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದರೂ ನಿರ್ವಹಣೆ ಕೊರತೆಯಿಂದ ಕ್ಯಾಮರಾಗಳು ಮೂಲೆ ಸೇರಿವೆ. ಹೀಗಾಗಿ, ಲಾರಿಗಳು ಅದಿರನ್ನು ಹೇರಿಕೊಂಡು ನಿರಾತಂಕವಾಗಿ ಸಂಚರಿಸುತ್ತಿವೆ ಎಂಬುದು ಸ್ಥಳೀಯರ ಆರೋಪ.